ಸಾಮೂಹಿಕ ವಜಾ : ಕಂಪನಿ ನೌಕರರು ಅರಿಯಬೇಕಾದ್ದು...
ಬೆಂಗಳೂರು, ಜ. 14: "ನಿಮ್ಮ ಉದ್ಯೋಗವನ್ನು ಪ್ರೀತಿಸಿ, ಕಂಪನಿಯನ್ನಲ್ಲ. ಏಕೆಂದರೆ ಕಂಪನಿಯು ಯಾವುದೇ ಸಂದರ್ಭದಲ್ಲಿ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸಬಹುದು..." ಹೀಗೆ ಹೇಳಿದ್ದು ಕರ್ನಾಟಕದ ಹೆಮ್ಮೆಯ ಇನ್ಫೋಸಿಸ್ ಎಂಬ ಸಾಫ್ಟ್ವೇರ್ ದೈತ್ಯವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾರಾಯಣ ಮೂರ್ತಿ.
ಅವರ ಹಲವು ಮಾತುಗಳು ವಿವಾದ ತಂದಿರಬಹುದು. ಆದರೆ, ಆ ಮಾತುಗಳು ಅಷ್ಟೇ ಕಟುಸತ್ಯವನ್ನು ಸಾರುತ್ತವೆ. ನಾರಾಯಣ ಮೂರ್ತಿ ಅವರು ಹೇಳಿದ್ದ ಈ ಮಾತಿಗೆ ಇಂದು ಹಲವು ನಿದರ್ಶನಗಳು ಸಿಗುತ್ತಿವೆ. ಟಿಸಿಎಸ್ ಕಂಪನಿ ನೀಡಲು ಉದ್ದೇಶಿಸಿರುವ ಸಾಮೂಹಿಕ ಪಿಂಕ್ ಸ್ಲಿಪ್ ಒಂದು ಜ್ವಲಂತ ಉದಾಹರಣೆ ಅಷ್ಟೇ. [ಪಿಂಕ್ ಸ್ಲಿಪ್ ನೀಡಿದ ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ]
ದೇಶದ ಅತಿದೊಡ್ಡ ಸಾಫ್ಟ್ವೇರ್ ರಫ್ತು ಕಂಪನಿ ಟಿಸಿಎಸ್ ಸುಮಾರು 30 ಸಾವಿರ ನೌಕರರಿಗೆ ಸಾಮೂಹಿಕ ಪಿಂಕ್ ಸ್ಲಿಪ್ ನೀಡಿದೆ ಎಂಬ ಆರೋಪ ಕೇಳಿಬಂದಿತ್ತು. ಕಂಪನಿಯ ಈ ನಿರ್ಧಾರದ ವಿರುದ್ಧ ನೌಕರರು ಕಾರ್ಮಿಕ ಉಪ ಆಯುಕ್ತರನ್ನೂ ಭೇಟಿ ಮಾಡಿ ದೂರು ನೀಡಿದ್ದರು. ಚೆನ್ನೈ ಹೈ ಕೋರ್ಟ್ ಮಹಿಳಾ ಉದ್ಯೋಗಿಯೋರ್ವರ ವಜಾ ತಡೆಹಿಡಿದು ಆದೇಶ ನೀಡಿದೆ.
ಆದರೆ, ಈಗ ಉಲ್ಟಾ ಹೊಡೆದಿರುವ ಕಂಪನಿ ಕೇವಲ ಶೇ. 1ರಷ್ಟು ನೌಕರರಿಗೆ ಮಾತ್ರ ಪಿಂಕ್ ಸ್ಲಿಪ್ ನೀಡಿರುವುದಾಗಿ ಹೇಳಿಕೆ ನೀಡಿದೆ. ಈ ಮೂಲಕ ವಿವಾದದ ಗಂಭೀರ್ಯತೆಯನ್ನು ಕಡಿಮೆ ಮಾಡಲು ನೋಡಿದೆಯಷ್ಟೇ. [ಟಿಸಿಎಸ್ ರಹಸ್ಯ ಉದ್ಯೋಗಿಯಿಂದ ಲೀಕ್]
ಕಂಪನಿಯ ನಿರ್ಧಾರದಿಂದ ದೊಡ್ಡ ಸಂಖ್ಯೆಯ ನೌಕರರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ, ಸುಮಾರು ಮೂರು ಸಾವಿರದಷ್ಟು ಸಿಬ್ಬಂದಿ ಹೊರಹೋಗಲೇಬೇಕಾಗಿದೆ. ಆದರೆ, ಈ ಬೆಳವಣಿಗೆ ಹಲವು ಖಾಸಗಿ ಕಂಪನಿಗಳ ನೌಕರರನ್ನು ಯೋಚನೆಗೆ ಹಚ್ಚಿದೆ. ಈ ಮೂಲಕ ಖಾಸಗಿ ಕಂಪನಿಗಳ ನೌಕರರು ಅರಿಯಬೇಕಾದ ಕೆಲವು ವಿಷಯಗಳನ್ನು ಇಲ್ಲಿ ನೀಡಲಾಗಿದೆ.
- ಕಂಪನಿಯಿಂದ ನೌಕರನೋರ್ವನನ್ನು ತೆಗೆದುಹಾಕುವುದು ನಿಜಕ್ಕೂ ಖೇದಕರ ವಿಷಯ. ಕಂಪನಿಯು ಲಾಭದ ದೃಷ್ಟಿಕೋನದಲ್ಲಿ ಹೀಗೆ ಆಲೋಚಿಸಿದ್ದರೆ, ಸಿಬ್ಬಂದಿಗೆ ಜೀವನ ನಿರ್ವಹಣೆಯ ಪ್ರಶ್ನೆಯಾಗಿರುತ್ತದೆ.
- ಯಾವುದೇ ಖಾಸಗಿ ಕಂಪನಿ ತನ್ನ ನೌಕರನಿಗೆ ಜೀವನಪೂರ್ತಿ ಉದ್ಯೋಗ ನೀಡುವ ವಾಗ್ದಾನ ನೀಡಿರುವುದಿಲ್ಲ. ಮಾರುಕಟ್ಟೆಯಲ್ಲಿರುವ ಸ್ಪರ್ಧೆ ಎದುರಿಸಲು, ಲಾಭ ಹೆಚ್ಚಿಸಿ ಪಾಲುದಾರರನ್ನು ಸಂತೃಪ್ತಗೊಳಿಸಲು ಕಂಪನಿಯು ಪಿಂಕ್ ಸ್ಲಿಪ್ನಂತಹ ನಿರ್ಧಾರ ತಳೆಯಬಹುದು. [ಮಹಿಳಾ ಉದ್ಯೋಗಿ ವಜಾ ಆದೇಶಕ್ಕೆ ಹೈ ತಡೆ]
- ಕಂಪನಿಯು ಲಾಭದ ಕೊರತೆ ಅಥವಾ ಕೌಶಲ್ಯದ ಕೊರತೆಯಿಂದ ನೌಕರನ ಮೇಲೆ ಕಠಿಣ ಕ್ರಮ ಕೈಗೊಳ್ಳಬಹುದು. ಆದ್ದರಿಂದ ಕಂಪನಿಯ ನಿರೀಕ್ಷೆ ಹೇಗಿದೆ ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ಕೌಶಲ್ಯ ವೃದ್ಧಿಗೆ ಪ್ರಯತ್ನವಿರಬೇಕು.
ಪಿಂಕ್ ಸ್ಲಿಪ್ ಪಡೆದ ನೌಕರರು ಮಾಡಬೇಕಾದ್ದೇನು?
- ಓರ್ವ ನೌಕರ ಒಂದು ಕಂಪನಿಯಲ್ಲಿ ಪಡೆದ ಅನುಭವದಿಂದ ಆತ ಹಲವು ವಿಷಯಗಳನ್ನು ತಿಳಿದಿರುತ್ತಾನೆ. ದೊಡ್ಡ ಕಂಪನಿಗೆ ಈತ ಅನಗತ್ಯ ಎನ್ನಿಸಿದರೂ ಬೇರೊಂದು ಕಂಪನಿ ಆತನನ್ನು ತೆಗೆದುಕೊಳ್ಳಲು ಮುಂದಾಗಬಹುದು. ಆದ್ದರಿಂದ ಪಿಂಕ್ ಸ್ಲಿಪ್ ಪಡೆದ ಸಿಬ್ಬಂದಿ ಯಾವುದೇ ಅಪಾಯಕಾರಿ ನಿರ್ಧಾರ ತಳೆಯಬಾರದು.
- ಪಿಂಕ್ ಸ್ಲಿಪ್ ಪಡೆದ ಉದ್ಯೋಗಿಗಳು ಆತ್ಮವಿಶ್ವಾಸದಿಂದ ಮುಂದುವರಿಯಬೇಕು. ಕಂಪನಿಯು ಏಕೆ ಹೀಗೆ ನಡೆದುಕೊಂಡಿತು ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳುವತ್ತ ದೃಢ ಹೆಜ್ಜೆ ಇಡಬೇಕು. [ಟಿಸಿಎಸ್ ಉದ್ಯೋಗ ಕಡಿತ 1 ಸಾವಿರ ಮಾತ್ರ]
- ನೌಕರನೋರ್ವ ಕಂಪನಿಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಯಾವತ್ತೂ ತನ್ನ ಕೌಶಲ್ಯ ವೃದ್ಧಿಸಿಕೊಳ್ಳುತ್ತಿರಬೇಕು. ಇರುವ ಕಂಪನಿಯಲ್ಲಿ ತಮ್ಮ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲ ಎಂಬುದು ಅರಿವಿಗೆ ಬಂದ ತಕ್ಷಣ ಬೇರೊಂದು ಕೆಲಸ ಹುಡುಕಲು ಆರಂಭಿಸಿಬಿಡಬೇಕು.
- ನೌಕರರು ಯಾವತ್ತೂ ತಮ್ಮ ಕೆಲಸ ಪ್ರೀತಿಸುತ್ತಿರಬೇಕು. ಕಂಪನಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಸಹೋದ್ಯೋಗಿಗಳ ಕಿರುಕುಳವಿದೆ ಎಂದು ಕೆಲಸದಲ್ಲಿ ನಿರಾಸಕ್ತಿ ತೋರಬಾರದು. ನಮ್ಮ ಕೆಲಸ ನಮಗೆ ತೃಪ್ತಿ ತಂದಿರಬೇಕು. ಇದರಿಂದ ಖಂಡಿತ ಧನಾತ್ಮಕ ಪರಿಣಾಮ ಕಂಡುಬರುತ್ತದೆ.