ತಾರಾಲಯದಲ್ಲಿ 'ಕೆಂಪು ಗ್ರಹ-ಮಂಗಳ' ಪ್ರದರ್ಶನ ಆರಂಭ
ಬೆಂಗಳೂರು, ಮೇ 2: ಮಂಗಳ ಗ್ರಹದ ಬಗ್ಗೆ ಮತ್ತಷ್ಟು ತಿಳಿಯುವ ಆಸಕ್ತರಿಗೆ ವಿಡಿಯೋ ಮೂಲಕ ವಿವರಿಸುವ 'ಕೆಂಪು ಗ್ರಹ-ಮಂಗಳ' ಪ್ರದರ್ಶನವನ್ನು ಜವಾಹರಲಾಲ್ ನೆಹರೂ ತಾರಾಲಯ ಆರಂಭಿಸಿದೆ. ಮಂಗಳ ಗ್ರಹದ ಬಗ್ಗೆ ಇರುವ ನಂಬಿಕೆಗಳು, ಅಲ್ಲಿನ ಪರಿಸರ, ಮಾನವ ವಾಸದ ಸಾಧ್ಯತೆಗಳನ್ನು ವಿವರಿಸುವ 40 ನಿಮಿಷಗಳ ವಿಡಿಯೋ ಪ್ರದರ್ಶನದ ಇದಾಗಿದೆ.
ಈ ವಿಡಿಯೋವನ್ನು ಅನಿಮೇಶನ್, ಸುಂದರ ಕಲಾಕೃತಿ, ಕಾರ್ಟೂನ್ಗಳಿಂದ ತಯಾರಿಸಲಾಗಿದ್ದು ಸೋಮವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಎರಡು ವಿಡಿಯೋವನ್ನು ಪ್ರದರ್ಶಿಸಲಾಗುತ್ತದೆ. ಕನ್ನಡದಲ್ಲಿ ವಿವರಣೆ ಇರುವ ಪ್ರದರ್ಶನ ಸಂಜೆ 3.30ಕ್ಕೆ ನಡೆದರೆ 4.30ಕ್ಕೆ ಇಂಗ್ಲಿಷ್ ಭಾಷೆಯ ಪ್ರದರ್ಶನ ನಡೆಯುತ್ತಿದೆ.[ಮಂಗಳ ಯಾನ: ರಿಮೋಟ್ ಕಂಟ್ರೋಲ್ ಇವರ ಕೈಯಲ್ಲಿದೆ]
ಈ ವಿಶೇಷ ಪ್ರದರ್ಶನವನ್ನು ಉದ್ಘಾಟಿಸಿ ಇಸ್ರೋದ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಮಾತನಾಡಿ ''ಮಂಗಳ ಗ್ರಹದ ಬಗ್ಗೆ ನಮಗೆ ಇರುವ ತಿಳುವಳಿಕೆ ಸಾಲದು. ಸರ್ಕಾರ 450 ಕೋಟಿ ರೂ.ಖರ್ಚು ಮಾಡಿ ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿದ್ದು ತಪ್ಪು ಎಂದು ಕೆಲವರು ದೂಷಿಸುತ್ತಿದ್ದಾರೆ. ಈ ರೀತಿ ದೂಷಿಸುವುದು ಸರಿಯಲ್ಲ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗೆ ಇದಕ್ಕಿಂತಲೂ ಹೆಚ್ಚು ಖರ್ಚಾಗುತ್ತಿದೆ'' ಎಂದರು.
ಮೇ 1ರಿಂದ ಈ ವಿಶೇಷ ವಿಡಿಯೋ ಪ್ರದರ್ಶನ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗೆ 22203234, 22379725 ಕರೆ ಮಾಡಬಹುದು ಅಥವಾ www.taralaya.org ತಾಣಕ್ಕೆ ಭೇಟಿ ನೀಡಬಹುದು.