ಬೆಂಗಳೂರಿನ ರಸ್ತೆಯಲ್ಲಿ ಮತ್ಸ್ಯಕನ್ಯೆ! ಕೊನೆಗೂ ಎಚ್ಚೆತ್ತುಕೊಂಡ ಬಿಬಿಎಂಪಿ
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರಿನ ಕಾಮರಾಜ ರಸ್ತೆಯ ಜಂಕ್ಷನ್ ನಲ್ಲಿ ತೆರಳುತ್ತಿದ್ದ ಜನರಿಗೆ ನಿನ್ನೆ(ಅ.13) ಬೆಳಿಗ್ಗೆ ಅಚ್ಚರಿ ಕಾದಿತ್ತು. ಬೆಂಗಳೂರಿನ ರಸ್ತೆ ಗುಂಡಿಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷಳಾಗಿದ್ದಳು! ರಸ್ತೆ ಗುಂಡಿಯ ತಾಪತ್ರಯವನ್ನೆಲ್ಲ ಮರೆತು, ಹಸಿರುಬಣ್ಣದ ಮಿನುಗುವ ಬಟ್ಟೆಯಲ್ಲಿದ್ದ ಮತ್ಸ್ಯಕನ್ಯೆಯ ಚಿತ್ರವನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು!
ಚಿತ್ರಗಳು : ಬೆಂಗಳೂರಿನ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ!
ಆದರೆ ಇಂದು ಆ ಜಾಗದಲ್ಲಿ ಮತ್ಸ್ಯಕನ್ಯಯೂ ಇಲ್ಲ, ಅಚ್ಚರಿ ಎಂದರೆ ರಸ್ತೆ ಗುಂಡಿಯೂ ಇಲ್ಲ! ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರ ವೈರಲ್ ಆಗಿ, ಬಿಬಿಎಂಪಿಯ ಹಣೆಬರಹವನ್ನು ತೋರಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ಇಲ್ಲಿ ರಸ್ತೆ ಗುಂಡಿಯನ್ನು ನೀಟಾಗಿ ಮುಚ್ಚಿದ್ದು, ಕಲಾವಿದ ಬಾದಲ್ ನಂಜುಂಡಸ್ವಾಮಿ ಮತ್ತು ನಟಿ ಸೋನು ಗೌಡ ಅವರ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ.
ಬೆಂಗಳೂರಿನ ರಸ್ತೆ ಗುಂಡಿಯಿಂದ ಐವರು ಪ್ರಾಣ ಕಳೆದುಕೊಂಡರೂ ತಲೆಕೆಡಿಸಿಕೊಳ್ಳದಿರುವ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಕಲಾವಿದ ಬಾದಲ್ ನಂಜುಂಡಸ್ವಾಮಿ ಅ. 13 ರಂದು ವಿನೂತನ ಪ್ರತಿಭಟನೆ ನಡೆದ್ದರು. ರಸ್ತೆ ಗುಂಡಿಯೊಂದರಲ್ಲಿ ತುಂಬಿದ ನೀರಿಗೆ ನೀಲಿ ಬಣ್ಣ ಹಾಕಿ, ನೀರಿನ ಪಕ್ಕದಲ್ಲಿ ಮತ್ಸ್ಯಕನ್ಯೆಯ ವೇಷದಲ್ಲಿ ನಟಿ ಸೋನು ಗೌಡ ಅವರನ್ನು ಕೂರಿಸಿದ್ದರು.
ರಸ್ತೆ ಗುಂಡಿಗಳ ವಿರುದ್ಧದ ಹೋರಾಟಕ್ಕೆ ತಮ್ಮದೂ ಬೆಂಬಲವಿದೆ ಎಂಬುದನ್ನು ಸೋನು ಗೌಡ ಮತ್ಸ್ಯಕನ್ಯೆಯಾಗುವ ಮೂಲಕ ತೋರಿಸಿಕೊಟ್ಟಿದ್ದರು. ಇದೀಗ ಇಲ್ಲಿ ಗುಂಡಿ ಮುಚ್ಚಿರುವ ಬಿಬಿಎಂಪಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಮಾನವನ್ನು ಗುಂಡಿಮುಚ್ಚುವ ಮೂಲಕವಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ!