ಕರ್ನಾಟಕ ಬಂದ್ ವಿಚಾರದಲ್ಲಿ ಸಂಘಟನೆಗಳ ನಡುವೆ ವಾಗ್ವಾದ
ಬೆಂಗಳೂರು, ನವೆಂಬರ್ 24: ಮರಾಠ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ಉಂಟಾದ ವಿವಾದ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿಮಗೆ ತಾಕತ್ತು ಇದ್ದರೆ ಬಿಜಾಪುರ ಬಂದ್ ಮಾಡಿ ಎಂಧು ಶಾಸಕ ಬಸವರಾಜ್ ಯತ್ನಾಳ್ ನೀಡಿದ್ದ ಹೇಳಿಕೆ ಸಮಾಜಿಕ ಜಾಲ ತಾಣಗಳಲ್ಲಿ ಕಿಡಿ ಹೊತ್ತಿಸಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಡಿ. 5 ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಬಗ್ಗೆ ಕೆಲವರು ಅವಹೇಳನ ಮಾಡಿದ್ದಾರೆ. ಕನ್ನಡ ಪರ ಸಂಘಟನೆಗಳ ಬಂದ್ ತೀರ್ಮಾನ ವಿರೋಧಿಸಿ ಕೆಲ ಸಂಘಟನೆಗಳು ಬೀದಿಗೆ ಇಳಿದಿವೆ. ಮರಾಠ ಅಭಿವೃದ್ಧಿ ನಿಗಮದ ಸ್ಥಾಪನೆ ವಿಚಾರವಾಗಿ ಉಂಟಾಗಿರುವ ವಿವಾದ ಪರಸ್ಪರ ಎರಡು ಸಮುದಾಯಗಳ ನಡುವಿನ ದ್ವೇಷ ಬೆಳವಣಿಗೆಗೆ ಎಡೆ ಮಡಿಕೊಟ್ಟಿದೆ.
ಒಂದು ಫೇಸ್ ಬುಕ್ ಪೋಸ್ಟ್ ನಿಂದ ಇಡೀ ಬೆಂಗಳೂರೇ ಹೊತ್ತಿ ಉರಿದಿತ್ತು. ಕ್ಷುಲ್ಲಕ ವಿಚಾರಕ್ಕೆ ಶಾಸಕರೊಬ್ಬರ ಮನೆಗೆ ಬೆಂಕಿ ಬಿತ್ತು. ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಠಾಣೆಗಳೇ ಸುಟ್ಟುಹೋದವು. ಜನ ಹೊರ ಬರಲು ಆಗದ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಗುಂಡು ಹಾರಿಸಿದಾಗ ಕೆಲವರು ಜೀವ ತೆತ್ತರು. ನೂರಾರು ಜನರನ್ನು ಬಂಧಿಸಿ ಜೈಲಿಗೆ ತಳ್ಳಿದರು.
ಮರಾಠ ಅಭಿವೃದ್ಧಿ ನಿಗಮ ಏಕೆ; ಯಡಿಯೂರಪ್ಪಗೆ ವಾಟಾಳ್ ಪ್ರಶ್ನೆ
ಬೆಂಗಳೂರು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಬಗ್ಗೆ ದಾಖಲಾಗಿರುವ ಪ್ರಕರಣಗಳ ತನಿಖೆ ಕೂಡ ಇನ್ನೂ ಮುಗಿದಿಲ್ಲ. ಇದೀಗ ಎರಡು ಸಮುದಾಯಗಳ ನಡುವೆ ಕಿಡಿ ಹೊತ್ತಿಸುವ ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಕನ್ನಡ ಪರ ಸಂಘಟನೆಗಳ ಹೆಸರಿನಲ್ಲೇ ಒಂದು ವರ್ಗ ಡಿ. 5 ರಂದು ಕರೆಕೊಟ್ಟಿರುವ ಬಂದ್ ವಿರೋಧಿಸಿ ಹೋರಾಟಕ್ಕೆ ಇಳಿದಿವೆ. ಜತೆಗೆ ಕೆಲವರನ್ನು ವೈಯಕ್ತಿಕವಾಗಿ ನಿಂದಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಹರಿದು ಬಿಡಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವು ಕನ್ನಡ ಪರ ಸಂಘಟನೆ ಮಖಂಡರು ಶಾಸಕ ಬಸವರಾಜ್ ಯತ್ನಾಳ್ ಅವರನ್ನು ಅವಹೇಳನ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜತೆಗೆ ಯತ್ನಾಳ್ ಅವರ ಬೆಂಬಲಿಗರಿಗೂ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಜನ ಸಾಮಾನ್ಯರನ್ನು ಕೆರಳಿಸುವಂತಹ ಭಾಷೆ ಬಳಸಿರುವ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ರಾರಾಜಿಸುತ್ತಿವೆ.
ದಿನೇ ದಿನೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಆದರೆ, ಯಾರೂ ಕೂಡ ರಾಜ್ಯದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನವೂ ಮಾಡಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆಯಲು ಬಿಟ್ಟರೆ ಮೊಂದೊಂದು ದಿನ ದೊಡ್ಡ ಅನಾಹುತಕ್ಕೆ ನಾಂದಿಯಾಡುವುದರಲ್ಲಿ ಅನುಮಾನವೇ ಬೇಡ. ಅದರಲ್ಲೂ ಶಾಸಕ ಬಸವರಾಜ್ ಯತ್ನಾಳ್ ಅವರ ಬೆಂಬಲಿಗರು ಎಂದು ಗುರುಗತಿಸಿಕೊಂಡವರು ಸೊಂಟದ ಕೆಳಗಿನ ಭಾಷೆ ಬಳಸಿ ನಿಂದನೆ ಮಾಡಿದ್ದಾರೆ.
ಪೊಲೀಸರು ಎಲ್ಲಿ : ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದವರಂತೆ ಪೊಲೀಸರು ಸದ್ಯ ಈ ವಿಚಾರದ ಬಗ್ಗೆ ಮೌನ ವಹಿಸಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಹೆಸರಿನಲ್ಲಿ ಉಂಟಾದ ವಿವಾದ ತಾರತಕ್ಕೇರಿದೆ. ಸಾಮಾಜಿಕ ಜಾಲ ತಾಣ ದುರ್ಬಳಕೆ ಮಾಡಿಕಳ್ಳುತ್ತಿರುವರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ಪೊಲೀಸರು ಮುಂದಾಗಿಲ್ಲ. ಯಾವ ಕ್ಷಣ ಯಾವ ಅನಾಹುತ ಸಂಭವಿಸುತ್ತೋ ಎಂದು ಜನ ಭೀತಿಯಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಎರಡು ಸಮುದಾಯಗಳ ನಡುವೆ ವೈಷಮ್ಯ ಹುಟ್ಟುಹಾಕುವ ವಿಡಿಯೋ ಹರಿದು ಬಿಟ್ಟವರ ವಿರುದ್ಧ ಪೊಲೀಸರು ಕ್ರಮಕ್ಕೆ ಮಾತ್ರ ಮುಂದಾಗಿಲ್ಲ.