ಸಚಿವ ಸ್ಥಾನ ಕೇಳುವ ಸ್ವಾಮೀಗಳು; ಸ್ವಾಮೀಗಳಲ್ಲೇ ಪರ-ವಿರೋಧದ ಚರ್ಚೆ
ಬೆಂಗಳೂರು, ಜನವರಿ 14: ದಾವಣಗೆರೆ ಜಿಲ್ಲೆ ಹರಿಹರದದಲ್ಲಿ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಂಚಮಸಾಲಿ ಹರಿಹರ ಗುರುಪೀಠದ ಪೀಠಾಧಿಪತಿ ವಚನಾನಂದ ಶ್ರೀ ನಡುವೆ ನಡೆದ ವಾಗ್ವಾದ ರಾಜ್ಯದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ.
"ಸಚಿವ ಸಂಪುಟಕ್ಕೆ ಯಾರನ್ನ ತೆಗೆದುಕೊಳ್ಳಬೇಕು ಎಂಬುದು ಮಖ್ಯಮಂತ್ರಿಯವರಿಗೆ ಸಂವಿಧಾನ ನೀಡಿದ ಪರಮಾಧಿಕಾರ. ಸಮಾಜಕ್ಕೆ ಬುದ್ದಿ ಹೇಳಿ ಎಲ್ಲರನ್ನೂ ಸಮಾನವಾಗಿ ಕಾಣಬೇಕಾದ ಸ್ವಾಮೀಗಳು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗವಾಗಿ ಎಚ್ಚರಿಕೆ ಕೊಡುವುದು ಸರಿಯಲ್ಲ' ಎಂದು ಕೆಲ ಸ್ವಾಮೀಗಳು ವಚನಾನಂದ ಶ್ರೀಗಳನ್ನು ವಿರೋಧಿಸಿದ್ದಾರೆ. ಇನ್ನೂ ಕೆಲವರು ವಚನಾನಂದ ಶ್ರೀಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಹಾವೇರಿಯಲ್ಲಿ ಬುಧವಾರ ಮಾತನಾಡಿರುವ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ರಚನೆಯ ಒತ್ತಡದ ಬಗ್ಗೆ ಮಾತನಾಡಿದ್ದಾರೆ.
ಪ್ರಸನ್ನಾನಂದಪುರಿ ಶ್ರೀ ಬೆಂಬಲ
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಸಮುದಾಯವನ್ನು ಪ್ರತಿನಿಧಿಸುವ ಸ್ವಾಮೀಗಳು ಆ ಸಮುದಾಯಕ್ಕೆ ನ್ಯಾಯ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಬುಧವಾರ ಹರಿಹರ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಹರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, "ಮುಖ್ಯಮಂತ್ರಿಯವರು ತಾವು ಯಾರಿಂದ ಮುಖ್ಯಮಂತ್ರಿ ಆಗಿದ್ದೇವೆ. ನಮ್ಮ ಬೆನ್ನ ಹಿಂದೆ ಯಾರು ಇದ್ದಾರೆ ಎಂಬುದನ್ನು ಮರೆಯಬಾರದು. ವಚನಾನಂದ ಶ್ರೀ ಕೇಳಿರುವುದು ತಮ್ಮ ಸಮುದಾಯದವರ ಹಕ್ಕು. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಳ್ಮೆ ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ' ಎಂದಿದ್ದಾರೆ.
ಪಂಚಮಸಾಲಿ ಸ್ವಾಮೀಜಿ ವಿರುದ್ಧ ಕನಲಿದ ಬಿಎಸ್ವೈ: ರಾಜೀನಾಮೆ ಕೊಡುವ ಮಾತು
ನಿಡುಮಾಮಿಡಿ ಶ್ರೀ ವಿರೋಧ
"ತಮ್ಮವರನ್ನು ಸಚಿವರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿಗೆ ಬಹಿರಂಗ ಎಚ್ಚರಿಕೆ ನೀಡಲು ಹೋಗಿರುವ ವಚನಾನಂದ ಶ್ರೀಯನ್ನು ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಶ್ರೀ ವಿರೋಧಿಸಿದ್ದಾರೆ. "ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಮಖ್ಯಮಂತ್ರಿಯವರಿಗೆ ಸಂವಿಧಾನ ನೀಡಿದ ಪರಮಾಧಿಕಾರ. ಅದರಲ್ಲಿ ತಲೆ ಹಾಕುವುದು ಸ್ವಾಮೀಗಳಿಗೆ ಶೋಭೆ ತರುವುದಲ್ಲ' ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಹಾವೇರಿಯಲ್ಲಿ ಸಿಎಂ ಮಾತು
ಹರಿಹರದ ಹರ ಜಾತ್ರೆಯಲ್ಲಿನ ಘಟನೆ ಬಗ್ಗೆ ಹಾವೇರಿಯಲ್ಲಿ ಬುಧವಾರ ಸ್ವಲ್ಪ ಸಮಾಧಾನದಿಂದ ಮಾತನಾಡಿದ ಸಿಎಂ ಯಡಿಯೂರಪ್ಪ, "ಸಚಿವ ಸಂಪುಟ ವಿಸ್ತರಣೆ ಶಿಘ್ರದಲ್ಲಿ ಮಾಡಲಾಗುವುದು. ನನಗೆ ಸ್ವಾಮೀಗಳು ಸಲಹೆ ಕೊಡಲು ಬೇಡ ಎನ್ನುವುದಿಲ್ಲ. ಆದರೆ, ಸ್ವಾಮೀಗಳು ನನ್ನ ಪರಿಸ್ಥಿತಿಯನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ನನ್ನನ್ನು ನಂಬಿ ಬಂದಿರುವ 17 ಶಾಸಕರಿಗೆ ನಾನು ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಡದಲ್ಲಿದ್ದೇನೆ' ಎಂದು ಹೇಳಿದ್ದಾರೆ. ಸಿಎಂ ಹಾವೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಎಲ್ಲರೆದುರೇ ಪರಿಹಾರ ಕೇಳಿದ್ದಕ್ಕೆ ಬಿಎಸ್ವೈ ವಿರುದ್ಧ ಅಮಿತ್ ಶಾ ಕಿಡಿ?
ಪಂಚಮಸಾಲಿ ಶ್ರೀ ಅತಿರೇಕ
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆಯುತ್ತಿರುವ ಹರ ಜಾತ್ರೆಯ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಸಿಎಂ ಯಡಿಯೂರಪ್ಪ ಪಾಲ್ಗೊಂಡಿದ್ದರು. ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವಾಗ, ""ಯಡಿಯೂರಪ್ಪ ಅವರೇ, ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ. ವೀರಶೈವ ಪಂಚಮಸಾಲಿ ಸಮುದಾಯ ನಿಮ್ಮ ಬೆನ್ನಿಗಿದೆ. ನೀವು ನಮ್ಮ ಸಮುದಾಯದ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು. ಮುರುಗೇಶ ನಿರಾಣಿ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ನೀವು ಅವರನ್ನು ಕೈ ಬಿಟ್ಟರೇ ನಮ್ಮ ಸಮುದಾಯ ನಿಮ್ಮನ್ನು ಕೈ ಬಿಡಲಿದೆ'' ಎಂದು ಹೇಳಿದ್ದರು. ಇದು ತೀವ್ರ ಸಂಚಲನವನ್ನುಂಟು ಮಾಡಿತ್ತು.
ಹೊರಟು ಹೋಗುತ್ತೇನೆ
ಈ ವೇಳೆ ಸ್ವಾಮೀಜಿಗಳ ಪಕ್ಕದಲ್ಲಿ ಕೂತಿದ್ದ ಯಡಿಯೂರಪ್ಪ ಈ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವೇದಿಕೆಯಲ್ಲಿಯೇ ನೂರಾರು ಜನರ ಮುಂದೆಯೇ ಬಹಿರಂಗವಾಗಿ ಸಿಟ್ಟನ್ನು ಹೊರಹಾಕಿದ ಮುಖ್ಯಮಂತ್ರಿಗಳು ಎದ್ದು ನಿಂತು, ""ಏನು ಮಾತನಾಡುತ್ತಿದ್ದಾರಾ ನೀವು?. ಹೀಗೆ ಮಾತನಾಡಿದರೇ ಇಲ್ಲಿಂದ ಹೊರಟು ಹೋಗುತ್ತೇನೆ'' ಎಂದು ಅಸಮಾಧಾನ ಹೊರಹಾಕಿದ್ದರು. ಯಡಿಯೂರಪ್ಪ ಪಕ್ಕದಲ್ಲಿ ಕುಳಿತಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಮುರುಗೇಶ ನಿರಾಣಿಯನ್ನೂ ತರಾಟೆಗೆ ತೆಗೆದುಕೊಂಡಿದ್ದರು.