ರಿಯಾಲಿಟಿ ಚೆಕ್: ಸುಮ್ಮನೆ ರಸ್ತೆಗಿಳಿದರೆ ನಿಮ್ಮ ವಾಹನಗಳು ಪೊಲೀಸ್ ಠಾಣೆಗೆ
ಬೆಂಗಳೂರು, ಏಪ್ರಿಲ್ 18: ಕೊರೊನಾ ಹಾವಳಿಯಿಂದ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಆದರೆ, ಕೆಲವರು ಲಾಕ್ಡೌನ್ ನಿಯಮ ಉಲ್ಲಂಘಿಸಿ ವಾಹನಗಳನ್ನು ತೆಗೆದುಕೊಂಡು ವಿನಾಕಾರಣ ರಸ್ತೆಗಿಳಿದು ಪೊಲೀಸರ ಕಡೆಗೆ ಸರಿಯಾಗಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ.
ಎರಡನೇ ಹಂತದ ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಹ ಯಾವುದೇ ವಾಹನಗಳು ಅನವಶ್ಯಕವಾಗಿ ರಸ್ತೆಗಿಳಿದಿದ್ದರೆ ಅಂತಹ ವಾಹನಗಳನ್ನು ವಶಪಡಿಸಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಕಳುಹಿಸುತ್ತಿದ್ದಾರೆ.
ಈ ಕುರಿತು ಒನ್ ಇಂಡಿಯಾ ಕನ್ನಡ ಸುದ್ದಿ ವಿಭಾಗ ಬೆಂಗಳೂರಿನಲ್ಲಿ ಇಂದು ರಿಯಾಲಿಟಿ ಚೆಕ್ ನಡೆಸಿತು. ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಲಾಕ್ಡೌನ್ ಉಲ್ಲಂಘನೆ ಮಾಡಿ ರಸ್ತೆಗಿಳಿದ ಸುಮಾರು 2500 ವಿವಿಧ ವಾಹನಗಳನ್ನು ವಶಪಡಿಸಿಕೊಂಡು ಠಾಣೆಯ ಆವರಣದಲ್ಲಿಟ್ಟಿದ್ದಾರೆ. ಇದರಿಂದ ವಾಹನ ಸವಾರರು ಕಂಗಾಲಾಗಿದ್ದು, ಯಾಕಾದರೂ ರಸ್ತೆಗಿಳಿದೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಕೊರೊನಾ ಹಾವಳಿ ತಡೆಗಟ್ಟಲು ಲಾಕ್ಡೌನ್ ಒಂದೇ ಉಪಾಯವಾಗಿರುವಾಗ ಪೊಲೀಸರು ಮುಲಾಜಿಲ್ಲದೇ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುತ್ತಿದ್ದಾರೆ. ಲಾಕ್ಡೌನ್ ಮುಗಿಯುವವರೆಗೂ ವಾಹನಗಳ ಸಮೇತ ರಸ್ತೆಗಿಳಿಯುವ ಕೆಲಸ ಮಾಡದೇ ಇರುವುದು ಲೇಸು.