ಪ್ರಪಂಚದ ವೈವಿಧ್ಯಮಯವಾದ ಕೆಲವು ಸುದ್ದಿ ಸಂಚಿಕೆ
ಬೆಂಗಳೂರು, ಅಕ್ಟೋಬರ್, 03 : ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಪ್ರಪಂಚದ ಹಲವಾರು ಕಡೆ ಇಂದು ನಾನಾ ಅವಘಡಗಳು ಸಂಭವಿಸಿವೆ. ಅನ್ಯ ಗ್ರಹದ ಪ್ರಾಣಿ ಕಾಣಿಸಿಕೊಂಡಿರುವುದರಿಂದ ಹಿಡಿದು, ನೀರಿನ ತೊಂದರೆ ನಿವಾರಣೆಗೆ ಪಣತೊಟ್ಟು ಪ್ರತಿಭಟನೆ ಕೈಗೊಂಡಿರುವುದರವರೆಗೂ ಘಟನೆಗಳು ನಡೆದಿವೆ.
ಸಾಮಾಜಿಕ ಜೀವನದಲ್ಲಿ ಯಾವುದೋ ನೆಪವೊಡ್ಡಿ ಕೆಲವರನ್ನು ಹತ್ಯೆ ಮಾಡಲಾಗಿದೆ. ಇನ್ನು ಕೆಲವರು ಜೀವನದ ತೊಳಲಾಟಕ್ಕೆ ಹೆದರಿ ಖುದ್ದಾಗಿ ಅವರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೇಡಿಕೆಗೆ ಒತ್ತಾಯಿಸಿ ಲಾರಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಇನ್ನು ರಾಜಕೀಯ ವಲಯದಲ್ಲಿ ರಾಜಕಾರಣಿಗಳು ಇನ್ನೊಬ್ಬರ ತೆಗಳಿಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಪಕ್ಷ ಪಕ್ಷಗಳ ನಡುವೆ ಕತ್ತಿ ಮಸೆಯುವ ಕಾರ್ಯ ಮುಂದುವರೆಸುತ್ತಿದ್ದಾರೆ. ಹಿಗ್ಗು-ಕುಗ್ಗುಗಳಿಲ್ಲದ ರಾಜಕೀಯದಲ್ಲಿ ಪರರನ್ನು ನಿಂದಿಸುತ್ತಾ ಜನರ ಎದುರಿನಲ್ಲಿ ಮತ್ತಷ್ಟು ಸಣ್ಣವರಾಗುತ್ತಿದ್ದಾರೆ.[ಧರ್ಮಸ್ಥಳದಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?]
ವೈಜ್ಞಾನಿಕ ಜಗತ್ತಿನ ಅಭೇದ ಶಕ್ತಿಯಾದ ನಾನಾ ಪ್ರಯೋಗಗಳು ಜನರಲ್ಲಿ ಆಶ್ಚರ್ಯ, ಅಚ್ಚರಿಯ ಛಾಯೆಯನ್ನು ಹುಟ್ಟಿಸುತ್ತಿವೆ. ಒಟ್ಟಿನಲ್ಲಿ ಸುದ್ದಿಗಳು ಜನರಿಗೆ ಆಲೋಚನಾ ಶಕ್ತಿಯನ್ನು, ಸುದ್ದಿಯ ನಾನಾ ವಲಯಗಳನ್ನು ಪರಿಚಯ ಮಾಡಿಕೊಡುತ್ತಿದೆ. ಬನ್ನಿ ಶನಿವಾರ ಏನೇನಾಯ್ತು ಇಲ್ಲಿದೆ ಸುದ್ದಿಯ ಸಂಪೂರ್ಣ ವಿವರ ಇಲ್ಲಿದೆ ಓದಿ.
ಮಾಂಸ ಸಂಗ್ರಹಣ ಪ್ರಕರಣ, ಇಬ್ಬರ ಬಂಧನ
ಉತ್ತರಪ್ರದೇಶ : ಮಾಂಸ ಸಂಗ್ರಹಣೆಯಲ್ಲಿ ತೊಡಗಿದ್ದಾನೆಂದು ಆರೋಪಿಸಿ ಉತ್ತರಪ್ರದೇಶದ ದಾದ್ರಿ ಸಮೀಪದ ಬಿಸಾಡಾ ಗ್ರಾಮದ ಮಹಮ್ಮದ್ ಇಖ್ಲಾಕ್ ನನ್ನು ನಗರದ ಉದ್ರಿಕ್ತ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿತ್ತು. ಮಹಮ್ಮದ್ ಮಗನ ಮೇಲೂ ಹಲ್ಲೆ ನಡೆಸಿತ್ತು. ಮಹಮ್ಮದ್ ನನ್ನು ಕಳೆದುಕೊಂಡ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಉತ್ತರ ಪ್ರದೇಶದ ಪೊಲೀಸರು ಕೃತ್ಯಕ್ಕೆ ಕಾರಣರಾದ ಇಬ್ಬರನ್ನು ಬಂಧಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮೋದಿ ಮೇಲೆ ಹರಿಹಾಯ್ದ ಸೋನಿಯಾಗಾಂಧಿ
ಬಾಗಲ್ ಪುರ : ಬಿಹಾರದಲ್ಲಿ ನಡೆಯುವ ಚುನಾವಣಾ ಪ್ರಚಾರಕ್ಕೆಂದು ತೆರಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮೀಸಲಾತಿಯ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಹರಿಹಾಯ್ದಿದ್ದಾರೆ. ಬೇಕೆಂದೇ ಸಮಾಜದ ಹಾಗೂ ಅಲ್ಲಿನ ಜನರ ನಡುವೆ ಕಂದಕವನ್ನು ಸೃಷ್ಠಿಸಲು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಫ್ಲೂಟೋ ಗ್ರಹದ ಸುಂದರ ಛಾಯೆ
ವಾಷಿಂಗ್ಟನ್ : ನಾಸಾದ ಹೊಸ ನೌಕೆಯು ಫ್ಲೂಟೋ ಗ್ರಹದಲ್ಲಿನ ಚಂದಿರ ಮತ್ತು ಕ್ಯಾರೋನ್ ನ ಹಲವಾರು ಛಾಯೆಗಳನ್ನು, ಬಣ್ಣಗಳನ್ನು ಕ್ಯಾಮಾರದಲ್ಲಿ ಸೆರೆಹಿಡಿದಿದು ಕಳುಹಿಸಿದೆ, ನೋಡುಗರಿಗೆ ಅಚ್ಚರಿಯ ಲೋಕವನ್ನು ತೆರೆದಿಟ್ಟಿದೆ.
ಇಂದ್ರಾಣಿ ಆತ್ಮಹತ್ಯೆ ಯತ್ನ
ಮುಂಬೈ : ಶೀನಾ ಬೋರಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಇಂದ್ರಾಣಿ ಜೈಲಿನಲ್ಲೇ ಆತ್ಮಹತ್ಯೆಗೆ ಮುಂದಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಇಂದ್ರಾಣಿಯನ್ನು ಜೈಲಿನ ಬೈಕುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಈಕೆಯ ಬಗ್ಗೆ 72 ಗಂಟೆಗಳ ಕಾಲ ಏನು ಹೇಳಲು ಬರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಕೇಜ್ರಿವಾಲ್ ರನ್ನು ಊರಿನೊಳಗೆ ಬಿಡಲಿಲ್ಲ
ಉತ್ತರಪ್ರದೇಶ : ಮಾಂಸ ಸಂಗ್ರಹಣೆಯ ನೆಪದಿಂದ ಕೆಲವು ದಿನಗಳ ಹಿಂದೆ ಹತ್ಯೆಗೀಡಾದ ಉತ್ತರಪ್ರದೇಶದ ದಾದ್ರಿ ಸಮೀಪದ ಬಿಸಾಡಾ ಗ್ರಾಮದ ಮಹಮ್ಮದ್ ಇಖ್ಲಾಕ್ ನ ಸಂಬಂಧಿಕರನ್ನು ಸಮಾಧಾನಿಸಲು ಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಗರದ ಪೊಲೀಸರು ಮತ್ತು ಹಳ್ಳಿಗರು ಕೆಲವು ಗಂಟೆಗಳ ಕಾಲ ಊರೊಳಗೆ ಪ್ರವೇಶ ನೀಡಲು ನಿರಾಕರಿಸಿದ್ದರು. ಬಳಿಕ ಅವರನ್ನು ಊರೊಳಗೆ ಪ್ರವೇಶ ನೀಡಿದ್ದು, ನೋವು ತುಂಬಿದ ಕುಟುಂಬಕ್ಕೆ ಸಮಾಧಾನ ಹೇಳಿದ್ದಾರೆ.