ಬೆಂಗಳೂರು : ಚೆನ್ನೈ ತಲುಪಿದ ಜೀವಂತ ಹೃದಯ
ಬೆಂಗಳೂರು, ಡಿ.19 : ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದ ಜೀವಂತ ಹೃದಯ ಚೆನ್ನೈಗೆ ತಲುಪಿದೆ. ಅಮಿತ್ ಉಪಾಧ್ಯ ಎನ್ನುವವರು ತಮ್ಮ ಮಗಳ ಹೃದಯವನ್ನು ದಾನ ಮಾಡಿದ್ದು, ಚೆನ್ನೈನಲ್ಲಿನ ಮಗುವೊಂದಕ್ಕೆ ಅದನ್ನು ಅಳವಡಿಸಲಾಗುತ್ತದೆ.
ಸಮಯ 2 ಗಂಟೆ : ಜೀವಂತ ಹೃದಯ ಚೆನ್ನೈ ತಲುಪಿದ್ದು, ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸಮಯ 1.30 : ಜೀವಂತ ಹೃದಯ ಎಚ್ಎಎಲ್ ವಿಮಾನ ನಿಲ್ದಾಣ ತಲುಪಿದೆ.
ಸಮಯ 1.22 : ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಎಂ.ಎನ್.ಆರ್.ವಿ.ಪ್ರಸಾದ್ ನೇತೃತ್ವದಲ್ಲಿ ಸಂಚಾರಿ ಪೊಲೀಸರು ಆಂಬ್ಯುಲೆನ್ಸ್ ಸಾಗಲು ಅಗತ್ಯ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ.
ಸಮಯ 1.20 : ಮಣಿಪಾಲ್ ಆಸ್ಪತ್ರೆಯಿಂದ ಜೀವಂತ ಹೃದಯ ಹೊತ್ತ ಆಂಬ್ಯುಲೆನ್ಸ್ ಎಚ್ಎಎಲ್ ಏರ್ಪೋರ್ಟ್ನತ್ತ ಹೊರಟಿದೆ. ಜಿರೋ ಟ್ರಾಫಿಕ್ನಲ್ಲಿ ಹೃದಯವನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
ಹಿಂದಿನ ಸುದ್ದಿ : ಬೆಂಗಳೂರಿನಿಂದ ಮತ್ತೊಂದು ಜೀವಂತ ಹೃದಯ ಚೆನ್ನೈಗೆ ಹೊರಟಿದೆ. ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಗುವಿನ ಹೃದಯವನ್ನು ಚೆನ್ನೈಗೆ ತೆಗೆದುಕೊಂಡು ಹೋಗಲಾಗತ್ತದೆ. ಹೃದಯವನ್ನು ವಿಮಾನ ನಿಲ್ದಾಣಕ್ಕೆ ಸಾಗಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಬ್ರೇನ್ ಡೆಡ್ ಆಗಿ ಮೃತಪಟ್ಟ 8 ತಿಂಗಳ ಮಗುವಿನ ಹೃದಯವನ್ನು ದಾನ ಮಾಡಲು ಪೋಷಕರು ಒಪ್ಪಿಗೆ ನೀಡಿದ್ದಾರೆ. ಚೆನ್ನೈನಲ್ಲಿನ 2 ವರ್ಷದ ಮಗುವಿಗೆ ಹೃದಯವನ್ನು ಕಸಿ ಮಾಡಲಾಗುತ್ತದೆ. ಜೀವಂತ ಹೃದಯ ಶೀಘ್ರದಲ್ಲೇ ಮಣಿಪಾಲ್ ಆಸ್ಪತ್ರೆಯಿಂದ ಹೊರಡಲಿದ್ದು, ಎಚ್ಎಎಲ್ ಏರ್ಪೋರ್ಟ್ ಮೂಲಕ ಚೆನ್ನೈ ತಲುಪಲಿದೆ. [ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಜೀವಂತ ಹೃದಯ]
ಸೆ.3ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಚೆನ್ನೈನ ಪೋರ್ಟಿಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಈ ಬಾರಿ ಮಣಿಪಾಲ್ ಆಸ್ಪತ್ರೆಯಿಂದ ಎಚ್ಎಎಲ್ ವಿಮಾಣ ನಿಲ್ದಾಣದ ಮೂಲಕ ಚೆನ್ನೈಗೆ ಹೃದಯವನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
ಕಳೆದ ಬಾರಿ ತರಾತುರಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಹೃದಯ ಸಾಗಣೆ ಮಾಡಲಾಗಿತ್ತು. ಈ ಬಾರಿ ಸಂಚಾರಿ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದು, ಜೀರೋ ಟ್ರಾಫಿಕ್ ಮೂಲಕ ಜೀವಂತ ಹೃದಯವಿರುವ ಆಂಬ್ಯುಲೆನ್ಸ್ ಎಚ್ಎಎಲ್ ವಿಮಾನ ನಿಲ್ದಾಣ ತಲುಪಲಿದೆ. ಅಲ್ಲಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಹೃದಯವನ್ನು ತೆಗೆದುಕೊಂಡು ಹೋಗಲಾಗುತ್ತದೆ. [ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ]