'ಮಂಗಳೂರು ಬಾಂಬ್ ಆರೋಪಿ ಪತ್ತೆ; ಬಿಜೆಪಿಗೆ ನಿರಾಸೆ'
ಬೆಂಗಳೂರು, ಜನವರಿ 22: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು, ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆದಿತ್ಯರಾವ್ನ ಜಾತಿಯನ್ನು ಕಾಂಗ್ರೆಸ್ ಎಳೆ ತಂದಿದೆ.
ಈ ಕುರಿತು ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ''ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಒಂದು ವೇಳೆ ನಿರ್ದಿಷ್ಟ ಕೋಮಿನ ವ್ಯಕ್ತಿ ಆಗಿದ್ದರೆ ಬಿಜೆಪಿ ಸಂಭ್ರಮಿಸುತಿತ್ತು'' ಎಂದು ಲೇವಡಿ ಮಾಡಿದ್ದಾರೆ. ಗುಂಡೂರಾವ್ ಮಾತನಾಡಿರುವ ವಿಡಿಯೋವನ್ನು INC Karnataka ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿದೆ.
ಮಂಗಳೂರು ಬಾಂಬ್ ಪ್ರಕರಣವನ್ನು "ಬಿಜೆಪಿ ಪ್ರಹಸನ" ಎಂದು ನಗೆಯಾಡಿದ ಎಚ್ ಡಿಕೆ
''ಆರೋಪಿಯ ವಿಚಾರದಲ್ಲಿ ಬಿಜೆಪಿಗೆ ತೀವ್ರ ನಿರಾಸೆಯಾಗಿದೆ. ರಾವ್ ಎಂಬ ಹೆಸರಿಗಿಂತ ಬೇರೆ ಹೆಸರಿದ್ದಿದ್ದರೆ ಬಿಜೆಪಿ ಸಂಭ್ರಮಿಸುತಿತ್ತು. ಆದಿತ್ಯರಾವ್ ಬಾಂಬ್ ಇಡಲು ನಿರುದ್ಯೋಗವೇ? ಪ್ರಚೋದನೆಯೇ? ಬೇರೆ ಏನಾದರೂ ಕಾರಣವಿದೆಯೆ? ಎನ್ನುವ ಸತ್ಯಾಸತ್ಯತೆ ಪತ್ತೆ ಹಚ್ಚುವುದು ಈಗ ಪೊಲೀಸರ ಜವಾಬ್ದಾರಿ'' ಎಂದು ಅವರು ಬಿಜೆಪಿಯನ್ನು ಕೆಣಕಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಬಾಂಬ್': ಪೊಲೀಸ್ ಕಮಿಷನರ್ ಹರ್ಷಗೆ 6 ಪ್ರಶ್ನೆಗಳು..
''ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವ ಆರೋಪ ಕೇಳಿಬಂದಾಗ ಬಿಜೆಪಿ ಸನಾತನ ಸಂಸ್ಥೆಯನ್ನು ಸಮರ್ಥಿಸಿಕೊಂಡಿತ್ತು. ಆದರೆ, ಆ ಕೃತ್ಯಗಳಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವುದಕ್ಕೆ ಪೂರಕ ಸಾಕ್ಷ್ಯಗಳು ಸಿಗುತ್ತಾ ಹೋದಂತೆಲ್ಲಾ ಅವರು ಜಾಣ ಮೌನ ವಹಿಸಿದರು. ಆರೋಪಿ ಮುಸ್ಲಿಂ ಆಗಿದ್ದರೆ ಅವನ ವಿರುದ್ಧ ತಿರುಗಿ ಬೀಳುವುದು, ಹಿಂದು ಆಗಿದ್ದರೆ ಜಾರಿಕೊಳ್ಳುವುದು, ಪರೋಕ್ಷವಾಗಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ'' ಎಂದು ಬಿಜೆಪಿ ಹಾಗೂ ಹಿಂದೂ ಮುಖಂಡರ ವಿರುದ್ಧ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.