ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ಕೊಟ್ಟ ಸಂಸದೆ ಸುಮಲತಾ ಅಂಬರೀಶ್!
ಬೆಂಗಳೂರು, ನ. 16: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ತಿರುಗೇಟು ನೀಡಿದ್ದಾರೆ. ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವುದು ಬೇಡ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡಬೇಕು ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರನ್ನು ಸೋಲಿಸಲು ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ ಅಷ್ಟೇ. ಬೆಂಗಳೂರು-ಮೈಸೂರು ಹತ್ತು ಪಥಗಳ ರಸ್ತೆ ಕಾಮಗಾರಿಯ ಬಗ್ಗೆ ಅಧಿಕಾರಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡುವಾಗ ಪ್ರತಾಪ್ ಸಿಂಹ ಹೀಗೆ ಮಾತನಾಡಿದ್ದರು.
ವಿಡಿಯೋ ವೈರಲ್: 'ಆ ಯಮ್ಮ ಏನೂ ಕೆಲಸ ಮಾಡಲ್ಲ'; ಸಂಸದೆ ಸುಮಲತಾ ವಿರುದ್ಧ ಪ್ರತಾಪ್ ಸಿಂಹ ಟೀಕೆ
ಸಂಸದೆ ಸುಮಲತಾ ಅವರನ್ನು ಟೀಕಿಸಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲ ತಾಣದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಬೆಂಬಲಿಗರು ಟೀಕಾ ಪ್ರಹಾರವನ್ನೇ ನಡೆಸಿದ್ದರು. ಇದೀಗ ಪ್ರತಾಪ್ ಸಿಂಹ ಹೇಳಿಕೆಗೆ ಸುಮಲತಾ ಅವರು ತಿರುಗೇಟು ನೀಡಿದ್ದಾರೆ. ಸುಮಲತಾ ಅವರು ಏನೇನು ಹೇಳಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ!
ಪ್ರತಾಪ್ಸಿಂಹ ಪೇಟೆ ರೌಡಿ!
ಪ್ರತಾಪ್ ಸಿಂಹ ಅವರನ್ನು ಪೇಟೆ ರೌಡಿಗೆ ಹೋಲಿಕೆ ಮಾಡಿ ಸುಮಲತಾ ಅವರು ಮಾತನಾಡಿದ್ದಾರೆ. ಸಿಎಂ ನಿವಾಸ ಕಾವೇರಿ ಬಳಿ ಸುಮಲತಾ ಅಂಬರೀಶ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಾಪ್ಸಿಂಹ ಅವರು ನಮ್ಮ ಕ್ಷೇತ್ರದ ಪಕ್ಕದ ಕ್ಷೇತ್ರದ ಸಂಸದರು. ಅವರು ಎರಡು ಬಾರಿ ಸಂಸದರಾಗಿದ್ದಾರೆ. ಅದನ್ನು ಅರಿತು ಮಾತನಾಡಬೇಕಾಗುತ್ತದೆ. ಪೇಟೆ ರೌಡಿಯ ತರಹ ಅವರು ಮಾತನಾಡಬಾರದು ಎಂದು ತಿರುಗೇಟು ನೀಡಿದ್ದಾರೆ.
ಅಂಬರೀಶ್ ಇದ್ದಾಗ ಧೈರ್ಯ ಇರಲಿಲ್ಲ!
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂದು ನನಗೂ ಗೊತ್ತಿದೆ. ಕೊಡಗು ಭಾಗಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವುದರ ಬಗ್ಗೆ ನಮಗೂ ದೂರುಗಳು ಬಂದಿವೆ. ಅಂಬರೀಶ್ ಇದ್ದಾಗ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ. ಅಂಬರೀಶ್ ಇದ್ದಾಗ ಇಂತಹ ಮಾತುಗಳನ್ನು ಯಾರೂ ಆಡುತ್ತಿರಲಿಲ್ಲ. ಇಂದು ಅಂಬರೀಶ್ ಇಲ್ಲ. ಹೀಗಾಗಿ, ಅವರೆಲ್ಲಾ ಮಾತನ್ನಾಡುತ್ತಿದ್ದಾರೆ ಎಂದು ಸುಮಲತಾ ಹೇಳಿಕೆ ನೀಡಿದ್ದಾರೆ.
ನಾನು ಉತ್ತರ ಕೊಡುವುದಿಲ್ಲ!
ಪ್ರತಾಪ್ಸಿಂಹ ಅವರು ನಮ್ಮ ಪಕ್ಕದ ಕ್ಷೇತ್ರದ ಸಂಸದರು. ನಮ್ಮ ಕ್ಷೇತ್ರದ ಬಗ್ಗೆ ಅವರು ಮಾತನ್ನಾಡುವುದು ಸರಿಯಲ್ಲ. ಒಬ್ಬ ಸಂಸದರು, ಇನ್ನೊಬ್ಬ ಸಂಸದರ ಬಗ್ಗೆ ಮಾತನಾಡಲು ಹಕ್ಕಿಲ್ಲ. ಸಂಸದರು ಸಂಸದರ ಭಾಷೆ ಬಳಸಿ ಮಾತನಾಡಿದರೆ ಸರಿ, ಅವರು ಪೇಟೆ ರೌಡಿ ರೀತಿಯಲ್ಲಿ ಮಾತನಾಡಿದರೆ ನಾನು ಉತ್ತರ ನೀಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಮ್ಮ ಜನರು ಉತ್ತರ ಕೊಟ್ಟಿದ್ದಾರೆ
ಸಂಸದ ಪ್ರತಾಪ್ಸಿಂಹ ಅವರ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನಮ್ಮ ಜಿಲ್ಲೆಯ ಜನ ಉತ್ತರ ಕೊಡುತ್ತಿದ್ದಾರೆ. ಅವರಿಗೆ ಏನು ಹೇಳಬೇಕಾಗಿತ್ತೊ ಅದನ್ನು ಹೇಳಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ತಿರುಗೇಟು ನೀಡಿದ್ದಾರೆ.