ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಕಾಂಗ್ರೆಸ್ ಮುಖಂಡರ ರಹಸ್ಯ ಸಭೆ
Recommended Video
ಬೆಂಗಳೂರು, ಮೇ 01: ಮಂಡ್ಯ ಕಾಂಗ್ರೆಸ್ ಮುಖಂಡರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರೊಂದಿಗೆ ನಿನ್ನೆ ರಹಸ್ಯ ಸಭೆಯೊಂದನ್ನು ನಡೆಸಿದ್ದಾರೆ ಎನ್ನಲಾಗಿದೆ.
ಸುಮಲತಾ ಸೇರಿದಂತೆ ಮಂಡ್ಯದ ಕಾಂಗ್ರೆಸ್ ಮುಖಂಡರು ಹೊಟೆಲ್ ಒಂದರಲ್ಲಿ ಸಭೆಯಲ್ಲಿ ಪಾಲ್ಗೊಂಡಿರುವ ವಿಡಿಯೋ ದೃಶ್ಯಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ರಹಸ್ಯ ಸಭೆಯೋ ಅಥವಾ ತಮಗೆ ಚುನಾವಣೆಯಲ್ಲಿ ಸಹಾಯ ಮಾಡಿದ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಅರ್ಪಿಸಲು ಆಯೋಜಿಸಲಾದ ಪಾರ್ಟಿ ಮಾದರಿ ಕಾರ್ಯಕ್ರಮವೊ ಎಂಬ ಅನುಮಾನ ಏಳುತ್ತಿದೆ.
ಕುಮಾರಸ್ವಾಮಿ ಕಟ್ಟಾ ವಿರೋಧಿಗಳ ಜೊತೆ ಏನದು ಸಿದ್ದರಾಮಯ್ಯನವರ ಚರ್ಚೆ?
ಸಭೆಯಲ್ಲಿ ಮಂಡ್ಯದ ಕಾಂಗ್ರೆಸ್ ಮುಖಂಡರಾದ ಚೆಲುವರಾಯಸ್ವಾಮಿ, ರಘುವೀರ್ ಗೌಡ, ಮಳವಳ್ಳಿ ನರೇಂದ್ರ ಸ್ವಾಮಿ, ಮಳವಳ್ಳಿ ಶಿವಣ್ಣ, ಮಾಗಡಿ ಬಾಲಕೃಷ್ಣ ಇನ್ನೂ ಕೆಲವು ಮುಖಂಡರು ಭಾಗವಹಿಸಿದ್ದುದು ವಿಡಿಯೋ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗುತ್ತಿದೆ. ಸಭೆಯ ನೃತೃತ್ವವನ್ನು ಸುಮಲತಾ ಅವರು ವಹಿಸಿದ್ದರು.
ಮಂಡ್ಯ ಚುನಾವಣೆಯಲ್ಲಿ ಕುಮಾರಸ್ವಾಮಿ ತಪ್ಪು ಮಾಡಿದ್ದಾರೆ: ಜಮೀರ್
ಮಂಡ್ಯದಲ್ಲಿ ಚೆಲುವರಾಯಸ್ವಾಮಿ ಸೇರಿದಂತೆ ಹಲವು ಮುಖಂಡರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡದೆ ಚುನಾವಣೆಯಿಂದ ದೂರುಳಿದಿದ್ದರು, ಇವರು ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿತ್ತು. ಈಗ ಅದೇ ನಾಯಕರು ಸುಮಲತಾ ಅವರೊಂದಿಗೆ ಸಭೆ ನಡೆಸಿರುವುದು ಈ ಅನುಮಾನಕ್ಕೆ ಹೆಚ್ಚಿನ ಪುಷ್ಟಿ ನೀಡಿದೆ.
ನಗರದ ಖಾಸಗಿ ಹೊಟೆಲ್ ಒಂದರಲ್ಲಿ ಸಭೆ
ನಗರದ ಖಾಸಗಿ ಹೊಟೆಲ್ ಒಂದರಲ್ಲಿ ಈ ರಹಸ್ಯ ಸಭೆ ನಡೆದಿದ್ದು, ರಾಕ್ಲೈನ್ ವೆಂಕಟೇಶ್ ಅವರು ಈ ಪಾರ್ಟಿಯನ್ನು ಸುಮಲತಾ ಅವರ ಪರವಾಗಿ ಆಯೋಜಿಸಿದ್ದರು ಎನ್ನಲಾಗುತ್ತಿದೆ, ಸಭೆಯಲ್ಲಿ ಸುಮಲತಾ ಅವರು ಭಾಗವಹಿಸಿದ್ದರು, ಅವರ ಜೊತೆ ಇನ್ನೊಬ್ಬ ಮಹಿಳೆ ಸಹ ಭಾಗವಹಿಸಿದ್ದರು. ಜೊತೆಗೆ ರಾಕ್ಲೈನ್ ವೆಂಟಕೇಶ್ ಸಹ ಭಾಗವಹಿಸಿದ್ದರು.
ಸುಮಲತಾ ಅವರನ್ನು ಬೆಂಬಲಿಸಿದ್ದವರ ಉಚ್ಚಾಟಿಸಿದ ಕೆಪಿಸಿಸಿ
ಸುಮಲತಾ ಅವರಿಗೆ ಬೆಂಬಲ ನೀಡಿದ್ದ ಎಂಟು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕೆಪಿಸಿಸಿ ಈಗಾಗಲೇ ವಜಾ ಮಾಡಿತ್ತು, ಅಷ್ಟೆ ಅಲ್ಲದೆ ಚೆಲುವರಾಯಸ್ವಾಮಿ ಮತ್ತು ಇತರರಿಗೆ ಎಚ್ಚರಿಕೆ ಸಹ ನೀಡಿತ್ತು ಆದರೂ ಸಹ ಹಲವು ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಸುಮಲತಾ ಅವರಿಗೆ ಬೆಂಬಲ ಘೋಷಿಸಿದ್ದರು.
ಮಂಡ್ಯದಲ್ಲಿ ಭಾರಿ ತುರುಸಿನ ಪೈಪೋಟಿ
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ನಡುವೆ ಭಾರಿ ತುರುಸಿನ ಪೈಪೋಟಿ ನಡೆದಿದೆ. ಮಂಡ್ಯದಲ್ಲಿ ಯಾರೇ ಗೆದ್ದರೂ ಬಹು ಕನಿಷ್ಟ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸುಮಲತಾ ಅವರಿಗೆ ಅವಕಾಶಗಳು ಹೆಚ್ಚಿವೆ ಎಂಬ ಊಹಾಪೋಹ ಕೇಳಿಬರುತ್ತಿದೆ.
ಜಿ.ಟಿ.ದೇವೇಗೌಡ ಇಂದಿನ ಹೇಳಿಕೆಗೆ ತಾಳೆ
ಇಂದಷ್ಟೆ ಜಿ.ಟಿ.ದೇವೇಗೌಡ ಅವರು ಮಾಧ್ಯಮಗಳೊಟ್ಟಿಗೆ ಮಾತನಾಡಿ 'ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ಹಲವರು ಬಿಜೆಪಿಗೆ ಮತ ಹಾಕಿದ್ದಾರೆ' ಎಂದಿದ್ದರು. ನಿನ್ನೆಯ ಸಭೆಯನ್ನು ಗಮನಿಸುವುದಾದರೆ ಮಂಡ್ಯದಲ್ಲಿ ಕಾಂಗ್ರೆಸ್ನವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದಂತಿದೆ.