ಕಸ ಕಿತ್ತಾಟ: ಕಸ ವಿಲೇವಾರಿ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ
ಬೆಂಗಳೂರು,ಜೂ.18:ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಸರಕಾರದ ಸಂಧಾನಕ್ಕೆ ಮಂಡೂರಿನ ಗ್ರಾಮಸ್ಥರು ಸ್ಪಂದಿಸಿದ್ದರಿಂದ ಈ ಸಮಸ್ಯೆ ಸದ್ಯಕ್ಕೆ ಪರಿಹಾರವಾಗಿದೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡೂರಿನ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಸಭೆ ಆರಂಭದಲ್ಲಿ ಗ್ರಾಮಸ್ಥರು ಸರ್ಕಾರದ ನಿಲುವಿಗೆ ಒಪ್ಪದಿದ್ದರೂ ಕೊನೆಗೆ ಸರ್ಕಾರದ ಭರವಸೆಯ ಮೇಲೆ ಮುಂದಿನ 5 ತಿಂಗಳ ಕಾಲ ಮಂಡೂರಿನಲ್ಲಿ ಕಸ ಸುರಿಯಲು ಅನುಮತಿ ನೀಡಿದರು.
ಮಂಡೂರು ಗ್ರಾಮಸ್ಥರ ಪರ ಪ್ರತಿಭಟನೆ ಕೈಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಂಸದ ಪಿ.ಸಿ. ಮೋಹನ್, ಶಾಸಕ ಅರವಿಂದ ಲಿಂಬಾವಳಿ, ಮೇಯರ್ ಬಿ.ಎಸ್. ಸತ್ಯನಾರಾಯಣ, ಬಿಬಿಎಂಪಿ ಉನ್ನತಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಕಸ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಮಂಡೂರು ಜನತೆ ಮಾಡಿಕೊಂಡಿರುವ ಒಪ್ಪಂದದ ವಿವರಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.
ಡಿಸೆಂಬರ್ 1ರಿಂದ ಕಸ ಸುರಿಯುವಂತಿಲ್ಲ:
ನವೆಂಬರ್ 31ರವರಗೆ ಕಸ ಸುರಿಯಲು ಗ್ರಾಮಸ್ಥರು ಅನುಮತಿ ನೀಡಿದ್ದು ಡಿಸೆಂಬರ್ 1ರಿಂದ ಯಾವುದೇ ಕಾರಣಕ್ಕೂ ಕಸ ಸುರಿಯುವಂತಿಲ್ಲ. ಅಲ್ಲಿಯವರೆಗೆ ಹೊಸ ಸ್ಥಳ ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
ತಿಂಗಳಿಗೊಮ್ಮೆ ಪರಿಶೀಲನಾ ಸಭೆ:
ಮಂಡೂರಿನಲ್ಲಿ ಹಾಲಿ ಇರುವ ತ್ಯಾಜ್ಯದ ಮೇಲೆ ಮಣ್ಣಿನ ಹೊದಿಕೆ ಹಾಕಬೇಕು. ಜೊತೆಗೆ ತ್ಯಾಜ್ಯವನ್ನು ಜೈವಿಕ ವಿಧಾನದ ಮೂಲಕ ಸಂಸ್ಕರಿಸಿ ಗೊಬ್ಬರ ಮಾಡಬೇಕು. ಕಸ ವಿಲೇವಾರಿ ಪ್ರಗತಿಯ ಬಗ್ಗೆ ಬಿಬಿಎಂಪಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ತಿಂಗಳಿಗೊಮ್ಮೆ ಮಂಡೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು.
ಕಾಂಕ್ರೀಟ್ ಕಂದಕ ನಿರ್ಮಿಸಿ
ಕಸದಿಂದ ಹೊರಬರುವ ಹಾನಿಕಾರಕ ದ್ರವ್ಯ ಭೂಮಿಗೆ ಸೇರದಂತೆ ತಡೆಯಲು ಘಟಕದ ಸುತ್ತಲೂ ಕಾಂಕ್ರೀಟ್ ಕಂದಕ ವನ್ನು ನಿರ್ಮಿಸಬೇಕು. ಸೊಳ್ಳೆ ಮತ್ತು ನೊಣಗಳ ಕಾಟ ನಿವಾರಿಸಬೇಕು.
ಕಸದ ಲಾರಿಗಳಿಗೆ ಸಂಖ್ಯಾ ಫಲಕ
ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಮಾತ್ರ ಕಸ ಸಾಗಣೆ ಮಾಡಬೇಕು. ಕಸದ ಲಾರಿಗಳಿಗೆ ಸಂಖ್ಯಾ ಫಲಕ ಹಾಕಬೇಕು. ದೇವನಹಳ್ಳಿ ಹಾಗೂ ಹೊಸಕೋಟೆಯಿಂದ ಬರುವ ಕಸ ತುಂಬಿದ ಲಾರಿಗಳನ್ನು ನಿಷೇಧಿಸಬೇಕು.
ಗ್ರಾಮಸ್ಥರ ಬೇಡಿಕೆಗಳು:
ಕಸ ಸುರಿಯುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೆ 144 ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಬಾರದು. ಗ್ರಾಮಸ್ಥರ ಮೇಲೆ ಈಗ ಹಾಕಿರುವ ಪ್ರಕರಣ ವಾಪಸ್ ಪಡೆಯಬೇಕು. ಜೊತೆಗೆ ಆರೋಗ್ಯ ತಪಾಸಣೆ ಉಸ್ತುವಾರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ.
ಸಿಎಂ ಭೇಟಿ:
ಡಿಸೆಂಬರ್ ವರೆಗೆ ಪ್ರತಿ ವಾರವೂ ಮೇಯರ್ ಮಂಡೂರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸುತ್ತಾರೆ. ವಿಧಾನಮಂಡಲ ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಯವರು ಮಂಡೂರಿಗೆ ಭೇಟಿ ನೀಡಲಿದ್ದಾರೆ. ಅಷ್ಟೇ ಅಲ್ಲದೇ ತಿಂಗಳಿಗೊಮ್ಮೆ ನಾನು ಮಂಡೂರಿಗೆ ತೆರಳಿ ಪರಿಶೀಲನೆ ನಡೆಸುತ್ತೇನೆ ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಕಂಪೆನಿಗಳನ್ನು ಓಡಿಸಿ
ಮಂಡೂರಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಸಮಸ್ಯೆಗೆ ಕಾರಣವಾದ ಗಾಯಿತ್ರಿ ಶ್ರೀನಿವಾಸ ಸಂಸ್ಥೆ ಹಾಗೂ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವುದಾಗಿ ಒಪ್ಪಂದ ಮಾಡಿಕೊಂಡಿರುವ ಆ್ಯರ್ಗಾನಿಕ್ ವೇಸ್ಟ್ ಕಂಪನಿಯನ್ನು ಮೊದಲು ಅಲ್ಲಿಂದ ಓಡಿಸಿ ಎಂದು ಶಾಸಕ ಅರವಿಂದ ಲಿಂಬಾವಳಿ ಆಕ್ರೋಶ ವ್ಯಕ್ತಪಡಿಸಿದರು. ಲಿಂಬಾವಳಿ ಹೇಳಿಕೆಗೆ ಗ್ರಾಮಸ್ಥರು ಧ್ವನಿಗೂಡಿಸಿದರು. ಅಂತಿಮವಾಗಿ ಸಭೆಯಲ್ಲಿ ಗಾಯಿತ್ರಿ ಶ್ರೀನಿವಾಸ್ ಕಂಪೆನಿಯ ಅವ್ಯವಹಾರ ತನಿಖೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.