ಸ್ನಾನ ಮಾಡಿದರೆ ಸರ್ವರೋಗಗಳಿಂದ ಮುಕ್ತಿ!
(ಡಂಪಿಂಗ್ ಸ್ವಾಮಿ ಮಹಾತ್ಮೆ - ಭಾಗ 3) ಇಷ್ಟಾದರೂ ಸ್ವಾಮಿಯ ಹಸಿವು ಹಿಂಗಲಿಲ್ಲ. ಬಿಬಿಎಂಪಿಯ ಆದೇಶದಂತೆ ಬರಿ ಒಣ ಕಸವನ್ನು ತಂದು ಸ್ವಾಮಿಗೆ ಅರ್ಪಿಸುತ್ತಿದ್ದ ಕಂಟ್ರಾಕ್ಟರುಗಳು ಸ್ವಾಮಿಯ ಹಸಿವು ಹಿಂಗಿಸಲು ಒಣ ಕಸದೊಂದಿಗೆ ಹಸಿ ಕಸವನ್ನು ಬೆರೆಸಿ ನೀಡತೊಡಗಿದರು. ಹೀಗಾಗಿ ಕ್ರಮೇಣ ಲಾರಿಗಳ ಓಡಾಟ ಜಾಸ್ತಿಯಾಗಿ ಈಗ ಹತ್ತಿರ ಹತ್ತಿರ ಐದನೂರು ಲಾರಿಗಳು ಕಸ ತೆಗೆದುಕೊಂಡು ಬರುತ್ತಿವೆ. ಹಸಿ ಮತ್ತು ಒಣ ಕಸವನ್ನು ಬೆರೆಸಿ ಕೊಡಲು ಶುರುವಾದಾಗಿನಿಂದ ಸ್ವಾಮಿ ಸ್ವಲ್ಪ ಸಮಾಧಾನವಾಗಿ ನಮ್ಮ ಮೇಲೆ ಕೃಪೆ ತೋರಿದ್ದಾರೆ. ನಮ್ಮ ವೈಯಕ್ತಿಕ ಆದಾಯ ಈಗ ನೂರು ಪಟ್ಟು ಹೆಚ್ಚಾಗಿದೆ ಎಂದು ಕಂಟ್ರಾಕ್ಟರ್ ಒಬ್ಬ ಚಿನ್ನದ ಉಂಗುರಗಳಿರುವ ಐದು ಬೆರಳುಗಳಿಂದ ಗಡ್ಡ ಕೆರೆದುಕೊಳ್ಳುತ್ತಾ ನಮಗೆ ಹೇಳಿದ.
ಗ್ರಾಮಸ್ಥರ ಪ್ರಕಾರ ಸ್ವಾಮಿಯ ಪೂಜೆಗೆ ಯಾರು ಮುಂದೆ ಬರುತ್ತಿಲ್ಲ. ಜೀವಭಯದಿಂದ ಯಾರು ಹತ್ತಿರ ಹೋಗುತ್ತಿಲ್ಲ. ಬಂಗಾಳ, ಆಂಧ್ರ ಹಾಗೂ ಉತ್ತರ ಕರ್ನಾಟಕದಿಂದ ಬಂದು ನೆಲೆಸಿರುವ ಕುಟುಂಬಗಳು ಜೋಪಡಿಯಲ್ಲಿದ್ದುಕೊಂಡು ಸ್ವಾಮಿಯ ಸೇವೆ ಮಾಡುತ್ತಿದ್ದಾರೆ. ಯಾವುದೇ ಸುಗಂಧ, ಧೂಪಗಳನ್ನು ಹಚ್ಚದೇ ಇದ್ದರೂ ಕೂಡ ಸ್ವಾಮಿಯ ಸುವಾಸನೆ 4-5 ಕಿಲೋಮಿಟರವರೆಗೂ ಹರಡಿರುತ್ತೆ. ನೂರಾರು ಜಾತಿಯ ಸೊಳ್ಳೆಗಳು, ಯಾರು ನೋಡದೆ ಇರುವಂತಹ ನೊಣಗಳು, ರಣಹದ್ದುಗಳು, ಉಗ್ರ ನಾಯಿಗಳು ಈ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣುಸಿಗುತ್ತವೆ. ಇಲ್ಲಿರುವ ಕಲ್ಯಾಣಿಯಲ್ಲಿಯ ಪವಿತ್ರ ನೀರನ್ನು ಸೇವನೆ ಮಾಡಿದರೆ ಶೀಘ್ರ ಮುಕ್ತಿ ಸಿಗುತ್ತದಂತೆ! ಆ ನೀರನ್ನು ತಲೆಯ ಮೇಲೆ ಹಾಕ್ಕೊಂಡು ಸ್ನಾನ ಮಾಡಿದರೆ ಎಲ್ಲ ರೋಗಗಳಿಂದ ಮುಕ್ತಿ ಸಿಗುತ್ತದಂತೆ!
ಸ್ವಾಮಿಯ ದರ್ಶನಕ್ಕೆ ನಾನು ರವಿ ಧೈರ್ಯ ಮಾಡಿ ಹೋದಾಗ ಸ್ವಾಮಿ ನನ್ನ ಮೇಲೆ ಕೋಪ ಮಾಡಿಕೊಂಡರು. ಏನಪ್ಪಾ ಒಂದೂವರೆ ವರ್ಷಗಳ ನಂತರ ಬರ್ತಾ ಇದ್ದೀಯಾ...? ಯಾಕೆ ನಿಮ್ಮ ಏರಿಯಾದಿಂದ ನನಗೆ ಕಸವೇ ಬರ್ತಾ ಇಲ್ಲ? ಆ ಗ್ರಾಮ ಸ್ವಾಭಿಮಾನ ಟ್ರಸ್ಟನವರಿಗೆ ನನ್ನ ಕಸವನ್ನು ಮುಟ್ಟಬೇಡ ಅಂತ ಹೇಳು, ಇಲ್ಲಾಂದರೆ ಅವರನ್ನು ಸುಮ್ಮನೆ ಬಿಡೊದಿಲ್ಲ ನಾನು. ಪಾರ್ವತಿಯ ಮೈಯ ಕೊಳೆಯಿಂದ ತಯಾರಾದ ಗಣೇಶನನ್ನು ನಿತ್ಯ ಪೂಜೆ ಮಾಡೋ ಬೆಂಗಳೂರಿನವರು, ನಿಮ್ಮಲ್ಲರ ಮನೆಯ ಕಸದಿಂದಲೇ ಉದ್ಭವಿಸಿದ ನನ್ನನ್ನೇಕೆ ನೋಡಲು ಬರ್ತಾ ಇಲ್ಲ? ಅವರಿಗೆಲ್ಲ ಬರೋಕೆ ಹೇಳು ಇಲ್ಲಾಂದ್ರೆ ಅವರ ಗತಿ ನೆಟ್ಟಗಾಗಿರೊಲ್ಲ ಅಂತು.
ನಾನು ಎಲ್ಲದಕ್ಕೂ ಗೋಣು ಅಲ್ಲಾಡಿಸಿ ಹೊರಬಂದೆ. ಸ್ವಾಮಿಯ ವಕ್ರದೃಷ್ಟಿ ನಿಮ್ಮ ಮೇಲೆ ಬೀಳುವ ಮುಂಚೆಯೆ ನೀವೂ ಒಂದು ಸಲ ಭೇಟಿ ಕೊಟ್ಟು ಪೂಜೆ ಮಾಡಿಸಿಕೊಂಡು ಬನ್ನಿ, ಆಮೇಲೆ ನಾನು ಹೇಳಲಿಲ್ಲ ಅನ್ನಬೇಡಿ... (ಕೃಪೆ : ಚಂಚಲ ಮನಸ್ಸಿನ ಚಿತ್ತಾರಗಳು)