ಮಂಡೂರು ಕ್ಷೇತ್ರದ ಡಂಪಿಂಗ್ ಸ್ವಾಮಿ ಮಹಾತ್ಮೆ
ಯಾವ ದೇವರಿಗೆ ನೈವೇದ್ಯ ಅಂದ್ರೆ ಇಷ್ಟವಾಗಲ್ಲ ಹೇಳಿ? ತೆಂಗಿನಕಾಯಿ ಜೊತೆಗೆ ತರಹೇವಾರಿ ಹಣ್ಣುಗಳೆಂದರೆ ನಮ್ಮ ತರಹೇವಾರಿ ದೇವರುಗಳಿಗೆ ಬಲು ಪ್ರೀತಿ. ಆದರೆ, ಕಸ-ಕಡ್ಡಿ, ಅನ್ನ-ಮುಸುರೆ, ಹೊಸಲು ಮಣ್ಣುಮಸಿಯಿಂದ ತುಂಬಿದ ಕಸದ ರಾಶಿಯನ್ನು ನೈವೇದ್ಯವಾಗಿ ಇಷ್ಟಪಡುವ ಈ ವಿಶಿಷ್ಟ ದೇವರ ಬಗ್ಗೆ ಕೇಳಿದ್ದೀರಾ? ನಿಮಗೆ ಗೊತ್ತಿಲ್ಲವಾದರೂ, ನಿಮ್ಮ ಅರಿವಿಗೆ ಬಾರದಂತೆ ಆ ಸ್ವಾಮಿಗೆ ಕಸದ ನೈವೇದ್ಯವನ್ನು ಕಳಿಸುತ್ತಿರುತ್ತೀರಿ ಎಂಬುದು ನೆನಪಿರಲಿ. ದೂರದವರೆಗೆ ಹಬ್ಬಿರುವ ಡಂಪಿಂಗ್ ಸ್ವಾಮಿಯ ಮಹಾತ್ಮೆಯನ್ನು ಒಮ್ಮೆ ಕಣ್ತುಂಬಾ ಓದಿಬಿಡಿ - ಸಂಪಾದಕ.
ನಾನು ಸ್ವಯಂಪ್ರೇರಿತನಾಗಿ ದೇವಸ್ಥಾನಗಳಿಗೆ ಹೋಗುವುದು ಕಡಿಮೆ. ಹೆಚ್ಚಾಗಿ ನನ್ನ ಹೆಂಡತಿಯೊಂದಿಗೆ ಅವಳ ಬಲವಂತಕ್ಕೆ ಹೋದದ್ದೆ ಹೆಚ್ಚು. ಹಾಗಂತ ನಾನು ನಾಸ್ತಿಕನಲ್ಲ. ನನಗೆ ನನ್ನದೆ ಆದ ದೇವಾಲಯಗಳಿವೆ. ಅಲ್ಲಿ ವಾರಕ್ಕೆ ಒಂದು ಸಲವಾದರೂ ಬೇಟಿ ಕೊಟ್ಟು ಆ ದೇವರುಗಳು ನನ್ನ ಮೇಲೆ ವಕ್ರದೃಷ್ಟಿ ಬೀಳದಂತೆ ಕೇಳಿಕೊಳ್ಳುತ್ತೇನೆ ಮತ್ತು ಭಕ್ತಿಯಿಂದ ಸೇವೆ ಮಾಡುತ್ತೇನೆ. ಆ ದೇವರುಗಳು ಮುನಿದರೆ ಮಹಾ ಮಾರಿಗಳು, ಹೀಗಾಗಿ ನಾನು ತುಂಬಾ ಭಯ ಭಕ್ತಿಯಿಂದ ಅವರುಗಳಿಗೆ ನಡೆದುಕೊಳ್ಳುತ್ತೇನೆ.
ಅವುಗಳಲ್ಲಿ ಒಂದು ನಿಸರ್ಗ ದೇವತೆ. ಇದರ ದೇವಸ್ಥಾನ ನಮ್ಮ ಮನೆಯ ಪಕ್ಕದಲ್ಲಿರುವ ಆಲಹಳ್ಳಿ ಕೆರೆಯಲ್ಲಿದೆ. ನಮ್ಮೆಲ್ಲರ ನಿರ್ಲಕ್ಷ್ಯದಿಂದ ಹಾಳು ಬಿದ್ದಿರುವ ಈ ಕೆರೆ ಇಂದು ದುಃಸ್ಥಿತಿಯಲ್ಲಿದೆ. ಇದರ ಜೀರ್ಣೋದ್ಧಾರಕ್ಕಾಗಿ ಕಳೆದ ಎರಡು ವರ್ಷಗಳಿಂದ ನಾವೆಲ್ಲ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸರ್ಕಾರವು ಕೂಡ ಏಳೂವರೆ ಕೋಟಿ ಹಣವನ್ನು ಕೊಡಲು ಮುಂದಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭವಾಗಿ ಕೆರೆ ದೇವತೆಯ ಮುನಿಸು ಕಡಿಮೆಯಾಗಿ ನಮ್ಮೆಲ್ಲರ ಮೇಲೆ ಕೃಪೆ ತೋರುತ್ತಾಳೆ ಎಂದುಕೊಂಡಿದ್ದೇವೆ. [ಮೇ 31ರ ನಂತರ ಕಸ ಹಾಕೋದು ಎಲ್ಲಿ?]
ಈಗ ಹೇಳಲು ಹೊರಟಿರುವುದು ಡಂಪಿಂಗ್ ಸ್ವಾಮಿ ಕುರಿತು. ನಿನ್ನೆ ನಮ್ಮ ರವಿ ಕೃಷ್ಣಾರೆಡ್ಡಿ (ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿ) ಫೋನ್ ಮಾಡಿ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ತಿಪ್ಪೆಸ್ವಾಮಿಯ ದೇವಸ್ಥಾನವಿರುವ ಮಂಡೂರಿಗೆ ಹೋಗೋಣ ಬನ್ನಿ, ಅಲ್ಲಿಯ ಭಕ್ತರು ಬರಹೇಳಿದ್ದಾರೆ ಎಂದರು. ನಾನು ಅಲ್ಲಿಗೆ ಹೋಗಿ ದರ್ಶನ ಪಡೆದು ಒಂದೂವರೆ ವರ್ಷವಾಗಿತ್ತು. ಸ್ವಾಮಿ ಮುನಿಸಿಕೊಂಡಿದ್ದರೆ ಕಷ್ಟ, ಹೋಗಿ ಬರುವುದು ಒಳ್ಳೆಯದು ಎಂದು ಬರುತ್ತೇನೆ ಎಂದೆ. ಹೊಸಕೋಟೆ ರಸ್ತೆಯಲ್ಲಿರುವ ಬೆಂಗಳೂರಿನಿಂದ ಸುಮಾರು 40 ಕಿಲೋಮಿಟರ್ ದೂರದಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ನಾವು ತಲುಪಿದಾಗ ಸಮಯ ಮಧ್ಯಾನ್ಹ 12 ಗಂಟೆ.