ಅಶ್ವಿನಿ ನಾಚಪ್ಪ ಕಾರ್ಡ್ ಕದ್ದವ ಬಂಧನ
ಬೆಂಗಳೂರು, ಡಿ.9: ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದು, ವಂಚಕನಿಂದ 1.97 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಮೈಸೂರು ಜಿಲ್ಲೆ ಎರಗನಹಳ್ಳಿ ಮೂಲದ ರವಿ ಎಂದು ಗುರುತಿಸಲಾಗಿದೆ.
ಡಿ.3 ರಂದು ಮಧ್ಯಾಹ್ನ 12 ಗಂಟೆಯಲ್ಲಿ ಅಶ್ವಿನಿ ನಾಚಪ್ಪ ಅವರು ಜಯನಗರದ 2ನೇ ಬ್ಲಾಕಿನಲ್ಲಿನ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಆಯೋಜಿಸಿದಸ್ದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಲು ಹ್ಯಾಂಡ್ ಬ್ಯಾಗ್ ನ್ನು ಕುರ್ಚಿ ಮೇಲಿಟ್ಟು ಹೋಗಿದ್ದ ಸಂದರ್ಭದಲ್ಲಿ ಬ್ಯಾಗಿನಲ್ಲಿದ್ದ ವ್ಯಾಲೆಟ್ ಕಳ್ಳತನ ಮಾಡಿದ್ದ.
ಅಶ್ವಿನಿ ಅವರ ವ್ಯಾಲೆಟ್ ನಲ್ಲಿದ್ದ ಫೆಡರಲ್ ಬ್ಯಾಂಕ್ ಮತ್ತು ಕೋಟಾಕ್ ಮಹೀಂದ್ರ ಬ್ಯಾಂಕಿನ ಮೂರು ಎಟಿಎಂ ಕಾರ್ಡ್ ಕದ್ದು ಜಯನಗರ 4ನೇ ಬ್ಲಾಕಿನ ಕರ್ನಾಟಕ ಬ್ಯಾಂಕಿನ ಎಟಿಎಂ ಸೆಂಟರ್ ಮತ್ತು 3ನೇ ಬ್ಲಾಕಿನ ಎಸ್ ಬ್ಯಾಂಕಿನ ಎಟಿಎಂ ಸೆಂಟರ್ ಹಾಗೂ ಐಸಿಐಸಿ ಬ್ಯಾಂಕ್ ಎಟಿಎಂ ಸೆಂಟರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಒಟ್ಟು 2.40 ಲಕ್ಷ ರೂ.ಗಳನ್ನು ಡ್ರಾ ಮಾಡಿ ವಂಚಿಸಿದ್ದನು.
ಬ್ಯಾಂಕ್ ಎಟಿಎಂನ ಸಿಸಿಟಿವಿ ವಿಡಿಯೋ ತುಣುಕು, ಡಿ.3ರ ಕಾರ್ಯಕ್ರಮದ ಫೋಟೊ, ವಿಡಿಯೋ ಪರಿಶೀಲನೆ ಮಾಡಿ ಬಲೆ ಬೀಸಿದ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ತೀವ್ರಗೊಳಿಸಿ ಬೆಂಗಳೂರು ನಗರ ಮತ್ತು ಮೈಸೂರು ನಗರಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಸುತ್ತಾಡಿದ ತಂಡ ಮೈಸೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ 1.97 ಲಕ್ಷ ರೂ. ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರೋಪಿಯನ್ನು ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣ ಹಾಲಿ ಎರಗನಹಳ್ಳಿಯಲ್ಲಿ ನಿವಾಸಿ 44 ವರ್ಷದ ರವಿ ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ಏಜೆಂಟ್ ಕೆಲಸ ಮಾಡಿಕೊಂಡಿದ್ದು, ಒಂದಂಕಿ ಲಾಟರಿ ಮತ್ತು ಕುದುರೆ ರೇಸ್ ಆಡುವ ಚಟಕ್ಕೆ ಬಿದ್ದಿದ್ದ ಈತ ಸಾಲ ಮಾಡಿಕೊಂಡು ಹಣಕ್ಕಾಗಿ ಈ ಕೃತ್ಯ ವೆಸಗಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಈ ಚಾಲಕಿ ಆರೋಪಿ ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದಿ ಸಾರ್ವಜನಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸಮಾರಂಭಗಳಿಗೆ ತೆರಳಿ ವಿವಿಐಪಿಗಳ ಪರ್ಸ್, ಉಡುಗೊರೆ, ಹಣ ಕದ್ದಿಯುತ್ತಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ ಪಾರ್ಟಿಹಾಲ್, ಹೋಟೆಲ್, ರವೀಂದ್ರಕಲಾಕ್ಷೇತ್ರ, ಪ್ರತಿಷ್ಠಿತ ಕಲ್ಯಾಣ ಮಂಟಪಗಳು, ಪುಟ್ಟಣಚೆಟ್ಟಿ ಪುರಭವನ, ಚಿತ್ರಕಲಾ ಪರಿಷತ್ತು ಸೇರಿದಂತೆ ನಗರದ ಪ್ಯಾಲೇಸ್ ಸ್ಥಳಗಳಲ್ಲಿ ಐಷರಾಮಿಯಾಗಿ ನಡೆಯುವ ಸಭೆ-ಸಮಾರಂಭ, ಮದುವೆ-ನಿಶ್ಚಿತಾರ್ಥಗಳ ಮಾಹಿತಿ ಸಂಗ್ರಹಿಸಿ ಗಣ್ಯ ವ್ಯಕ್ತಿಯಂತೆ ಪೋಷಾಕು ಧರಿಸಿಕೊಂಡು ಅಥವಾ ಪತ್ರಕರ್ತರಂತೆ ಸಮಾರಂಭ ನಡೆಯುವ ಸ್ಥಳದ ಮುಂದಿನ ಸಾಲಿನಲ್ಲಿ ಕುಳಿತು ಶ್ರೀಮಂತ ವ್ಯಕ್ತಿಗಳನ್ನು ಗುರುತಿಸಿ ಅವರ ಪರ್ಸ್, ಬ್ಯಾಗ್ ದೋಚುತ್ತಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.