ಬಾಯಿ ದುರ್ನಾಥ ಎಂದು ತಾಯಿಯನ್ನೇ ಮನೆಯಿಂದ ಹೊರಗಟ್ಟಿದ ಮಗ
ಬೆಂಗಳೂರು, ಮೇ 31: ಪೋಷಕರನ್ನು ಮನೆಯಿಂದ ಹೊರಗಟ್ಟಲು ಮಕ್ಕಳು ಎಂತೆಂಥಾ ಕಾರಣಗಳನ್ನು ಹುಡುಕುತ್ತಾರೆ ನೋಡಿ, ಮಗನೊಬ್ಬ ತಾಯಿಯ ಬಾಯಿಂದ ದುರ್ವಾಸನೆ ಬರುತ್ತಿದೆ ಎಂದು ಮನಯಿಂದ ಹೊರಗಟ್ಟಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜನವರಿಯಲ್ಲಿ ಮಹಿಳೆಯೊಬ್ಬರು ಹಲ್ಲು ನೋವು ಎಂದು ಖಾಸಗಿ ಆಸ್ಪತ್ರೆಗೆ ತೆರಳಿದ್ದರು ಅದಾದ ಬಳಿಕ ಹಲ್ಲನ್ನೇ ತೆಗೆಯಬೇಕು ಎಂದು ವೈದ್ಯರು ಹೇಳಿ ಹಲ್ಲನ್ನು ದವಡೆಯಿಂದ ಬೇರ್ಪಡಿಸಿದ್ದರು. ಕೆಲವೇ ದಿನಗಳಲ್ಲಿ ಸೋಂಕು ಇಡೀ ಬಾಯಿಯನ್ನೇ ಆವರಿಸಿಕೊಂಡು ವಸಡಿನಲ್ಲಿ ರಕ್ತಸ್ರಾವ ಹಾಗೂ ಕೀವು ಆಗಿತ್ತು.
ಅದಾದ ಬಳಿಕ ನಿಖಿಲ್ (ಹೆಸರು ಬದಲಿಸಲಾಗಿದೆ)ಹಾಗೂ ಆತನ ಪತ್ನಿ ಇಬ್ಬರು ಅತ್ತೆಯ ಜೊತೆ ಮಾತನಾಡುವುದನ್ನೇ ಕಡಿಮೆ ಮಾಡಿದರು. ಒಳ್ಳೆಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಬದಲು ಬಾಯಿಂದ ದುರ್ನಾಥ ಬರುತ್ತಿದೆ. ಮನೆಯಲ್ಲಿ ಇರಲು ಆಗುತ್ತಿಲ್ಲ, ನೀವು ತಕ್ಷಣವೇ ಮನೆಯಿಂದ ಹೊರಡಿ ಎಂದು ಹೇಳಿ ಮಹಿಳೆಯನ್ನು ಮಗ ಹಾಗೂ ಸೊಸೆ ಸೇರಿ ಮನೆಯಿಂದ ಹೊರಗಟ್ಟಿದ್ದಾರೆ.
ಬಳಿಕ ಮಹಿಳೆಯು ಬೆಂಗಳೂರು ಸಿಟಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ, ಪೊಲೀಸರು ನಿಖಿಲ್ ಹಾಗೂ ಆತನ ಪತ್ನಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ ಆದರೆ ತಿಂಗಳ ಪೆನ್ಷನ್ ಹಣವನ್ನು ನಮಗೆ ನೀಡಬೇಕು ಎಂದು ಷರತ್ತು ಹಾಕಿದರು.
ಬಳಿಕ ಇದರಿಂದ ಬೇಸರಗೊಂಡ ಮಹಿಳೆ ವೃದ್ಧಾಶ್ರಮಕ್ಕೆ ತೆರಳಿದ್ದಾರೆ. ಅವರಿಗೆ ಯಾವ ರೀತಿಯ ಸಹಾಯ ಬೇಕೋ ನಾವು ಮಾಡುತ್ತೇವೆ ಎಂದು ಭಾರತಿನಗರ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ತಿಳಿಸಿದ್ದಾರೆ.