ಬೆಂಗಳೂರು: ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಯುವತಿಯ ಹತ್ಯೆ ಮಾಡಿದ ಯುವಕ
ಬೆಂಗಳೂರು, ನ. 30: ಸಿಲಿಕಾನ್ ಸಿಟಿಯ ಟಿಸಿ ಪಾಳ್ಯದಲ್ಲಿ 23 ವರ್ಷದ ಯುವತಿಯನ್ನು ಆಕೆಯ ಲಿವ್-ಇನ್ ಸಂಗಾತಿಯೇ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಮೃತಳನ್ನು ನೇಪಾಳ ಮೂಲದ ಮೃತ ಕೃಷ್ಣಕುಮಾರಿ ಅಮ್ಮೈ ಎಂದು ಗುರುತಿಸಲಾಗಿದೆ. ಕೃಷ್ಣಕುಮಾರಿ ಮತ್ತು ಆರೋಪಿ ಸಂತೋಷ್ ಧಾಮಿ ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಕೇರಳದ ಯುವತಿ ಮೇಲೆ ಅತ್ಯಾಚಾರ, ಆರೋಪಿಗಳ ಬಂಧನ
ನವೆಂಬರ್ 29, ಮಂಗಳವಾರದಂದು, ಇಬ್ಬರ ನಡುವೆ ಯಾವುದೋ ಕಾರಣಕ್ಕೆ ತೀವ್ರ ವಾಗ್ವಾದ ಉಂಟಾಗಿದ್ದು, ಆರೋಪಿ ಸಂತೋಷ್ ಆಕೆಯ ಕತ್ತು ಹಿಸುಕಿ ತಲೆಯನ್ನು ಗೋಡೆಗೆ ಹೊಡೆದಿದ್ದಾರೆ. ಇದರಿಂದ ಕೃಷ್ಣಕುಮಾರಿ ಮೃತಪಟ್ಟಿದ್ದಾರೆ ಎಂದು ಉಪ ಪೊಲೀಸ್ ಕಮಿಷನರ್ (ಬೆಂಗಳೂರು ಪೂರ್ವ) ಭೀಮಾಶಂಕರ್ ಎಸ್ ಗುಳೇದ್ ಹೇಳಿದ್ದಾರೆ.
ಕೃಷ್ಣಕುಮಾರಿ ಅವರ ಸ್ನೇಹಿತೆಯ ದೂರಿನ ಆಧಾರದ ಮೇಲೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ.
"ಆರೋಫಿ ಸಂತೋಷ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾನೆ ಎಂದು ಕೃಷ್ಣಕುಮಾರಿ ಅನೇಕ ಸಂದರ್ಭಗಳಲ್ಲಿ ಹೇಳಿದ್ದರು. ನಾನು ಅವರ ಮನೆಗೆ ತಲುಪಿದಾಗ, ಕೃಷ್ಣಕುಮಾರಿ ಪ್ರಜ್ಞೆ ತಪ್ಪಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ನೋಡಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದೆ. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು'' ಎಂದು ಸ್ನೇಹಿತೆ ದೂರಿನಲ್ಲಿ ತಿಳಿಸಿದ್ದಾರೆ.
"ಮಂಗಳವಾರ ಇಬ್ಬರು ಜಗಳ ಮಾಡುವಾಗ ಕೃಷ್ಣಕುಮಾರಿಯಿಂದ ತನಗೆ ವಿಡಿಯೋ ಕಾಲ್ ಮಾಡಿದ್ದರು. ಅದರಲ್ಲಿ ಸಂತೋಷ್ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುವುದನ್ನು ಸ್ಪಷ್ಟವಾಗಿ ನೋಡಿದ್ದೇನೆ" ಎಂದು ದೂರುದಾರರು ಹೇಳಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಇದೇ ರೀತಿಯ ಘಟನೆ ಕೆಆರ್ ಪುರಂನಲ್ಲಿ ನಡೆದಿತ್ತು. 32 ವರ್ಷದ ನ್ಯಾನ್ಸಿ ಫ್ಲೋರಾ ಅವರನ್ನು ಆಕೆಯ ಪತಿ ಸುಪ್ರೀತ್ ಕೊಲೆ ಮಾಡಿದ್ದರು. ನ್ಯಾನ್ಸಿ ಕೂಡ ತನ್ನ ಪತಿಯಿಂದ ಹಲವಾರು ವರ್ಷಗಳಿಂದ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿದ್ದರು. ನ್ಯಾನ್ಸಿ ಮೇಲೆ ಅನುಮಾನಪಟ್ಟು ಹತ್ಯೆ ಮಾಡಿದ್ದ ಸುಪ್ರೀತ್ ಪೊಲೀಸರಿಗೆ ಶರಣಾಗಿದ್ದ. ದಂಪತಿಗೆ 11 ಮತ್ತು ಎಂಟು ವರ್ಷದ ಇಬ್ಬರು ಮಕ್ಕಳಿದ್ದಾರೆ.