ಐಬಿಎಂ ಹೆಸರಿನಲ್ಲಿ ನಕಲಿ ಜಾಬ್ ಆಫರ್ ಪತ್ರ ಕೊಟ್ಟು 40 ಮಂದಿಗೆ ಮೋಸ
ಬೆಂಗಳೂರು, ಜ. 24: ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 40 ಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದು ವಂಚಿಸಿರುವುದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಐಬಿಎಂ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೊಸ ಮಾಡಿದ್ದ ಮಹಾರಾಷ್ಟ್ರ ಮೂಲದ ಗಂಗಾರಾಮ್ ಎಂಬಾತನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಐಬಿಎಂನಲ್ಲಿ ಕೆಲಸ ಖಾಲಿಯಿದೆ ಎಂದು ಸಂಜೀವ್ ಕುಮಾರ್ ಒಎಲ್ಎಕ್ಸ್ ನಲ್ಲಿ ಜಾಹೀರಾತು ಪ್ರಕಟಿಸಿದ್ದ. ಜಾಬ್ ಆಫರ್ ನೋಡಿ ಸಂಪರ್ಕಿಸಿದರಿಂದ ತಲಾ 50 ಸಾವಿರ ರೂ. ನಂತೆ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಆ ಬಳಿಕ ನಕಲಿ ಉದ್ಯೋಗ ಪತ್ರ ನೀಡಿ ಐಬಿಎಂ ಎಚ್ಆರ್ ಪ್ರದೀಪ್ ಎಂಬುವರನ್ನು ಭೇಟಿ ಮಾಡುವಂತೆ ಸೂಚಿಸಿದ್ದ. ಇದನ್ನು ನಂಬಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಸಂಜೀವ್ ನನ್ನು ನಂಬಿ ಹಣ ನೀಡಿ ನಕಲಿ ಉದ್ಯೋಗ ಪತ್ರ ಪಡೆದಿದ್ದರು.
ಈ ಜಾಬ್ ಆಫರ್ ಪತ್ರ ಪಡೆದು ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಐಬಿಎಂ ಸಂಪರ್ಕಿಸಿದಾಗ ಪ್ರದೀಪ್ ಹೆಸರಿನ ಎಚ್ ಆರ್ ಇಲ್ಲ ಎಂಬ ಸಂಗತಿ ಗೊತ್ತಾಗಿದೆ. ಕೊಟ್ಟಿರುವುದು ಖೊಟ್ಟಿ ಉದ್ಯೋಗ ಪತ್ರ ಎಂಬುದು ಗೊತ್ತಾಗಿದೆ. ವಂಚನೆಗೆ ಒಳಗಾಗಿದ್ದ ಅಭಿಜಿತ್ ರಾಯ್ ಎಂಬಾತ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದ.
ದೂರು ಆಧರಿಸಿ ಮಹಾರಾಷ್ಟ್ರ ಮೂಲದ ಸಂಜೀವ್ ಗಂಗಾರಾಮ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಇದನ್ನೇ ಕಸುಬು ಮಾಡಿಕೊಂಡಿದ್ದ. ಅಲ್ಲದೇ ಸುಮಾರು ಎಂಟು ಬ್ಯಾಂಕ್ ಖಾತೆ ಹೊಂದಿದ್ದು, ಅದಕ್ಕೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ. ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು ಈ ಹಿಂದೆ ಇದೇ ರೀತಿ ವಂಚನೆ ಮಾಡಿರುವ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.