ವಿದೇಶಿ ಕರೆನ್ಸಿ ಆಸೆಗೆ 1 ಲಕ್ಷ ಕಳೆದುಕೊಂಡ ಉದ್ಯಮಿ
ಬೆಂಗಳೂರು, ಮೇ 25: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಯಾರನ್ನೋ ನಂಬಿ ಹಣ, ಒಡವೆ ಕೊಡಬೇಡಿ ಎಂದು ಪೊಲೀಸರು ಎಷ್ಟೇ ಮನವಿ ಮಾಡಿದರು ವಂಚಕರ ನಯ ನಾಜೂಕಿಗೆ ಮರುಳಾಗಿ ಲಕ್ಷಾಂತರ ಹಣ, ಚಿನ್ನ ಕಳೆದುಕೊಂಡು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದವರೇ ಹೆಚ್ಚು.
ಅಂತಹದ್ದೇ ಒಂದು ಪ್ರಕರಣ ಈಗ ವರದಿಯಾಗಿದೆ, ಕಡಿಮೆ ದರದಲ್ಲಿ ವಿದೇಶಿ ಕರೆನ್ಸಿ ನೀಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 1 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
OLX ನಲ್ಲಿ ಕಾರು ಮಾರೋಕೆ ಹೋದ್ರೆ ಪಂಗನಾಮ ಗ್ಯಾರೆಂಟಿ ಹುಷಾರ್
ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶೇಷಾದ್ರಿಪುರಂನ ಉದ್ಯಮಿ ನಿಖಿಲ್ ಕುಮಾರ್ ಜೈನ್ ಮೈಕೋ ಲೇ ಔಟ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳಾದ ವಿನೋದ್ ಕುಮಾರ್ ಮತ್ತು ಅಶ್ವಿನ್ ಎನ್ನುವವರು ಯೋರೋ ಕರೆನ್ಸಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದರು.
ಮಗಳ ಹುಟ್ಟುಹಬ್ಬಕ್ಕೆ ಕೇಕ್ ಕಳುಹಿಸಲು ಹೋಗಿ 1.9 ಲಕ್ಷ ರೂ. ಕಳೆದುಕೊಂಡ ತಂದೆ
ಕುಮಾರ್ ಸ್ನೇಹಿತ ಅಶ್ವಿನ್ ಬಳಿ ಇದ್ದ 8 ಕೋಟಿ ರೂಪಾಯಿ ಮೌಲ್ಯದ ಯೋರೋ ಕರೆನ್ಸಿಯನ್ನು 2 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲು ಸಿದ್ಧರಾಗಿದ್ದರು ಎಂದು ಹೇಳಿದ್ದಾರೆ.
1 ಲಕ್ಷ ಅಡ್ವಾನ್ಸ್ ಪಡೆದು ಮೋಸ
ಆರೋಪಿಗಳು ನಿಖಿಲ್ ಕುಮಾರ್ ಜೈನ್ನನ್ನು ಖಾಸಗಿ ಹೋಟೆಲ್ ಒಂದರಲ್ಲಿ ಭೇಟೆಯಾಗಿ ಯೋರೋ ಕರೆನ್ಸಿಯ ಎರಡು ನೋಟುಗಳನ್ನು ನೀಡಿ ನಂಬಿಸಿದ್ದಾರೆ. ನೋಟುಗಳನ್ನು ನೋಡಿದ ಜೈನ್ ಆರೋಪಿಗಳನ್ನು ನಂಬಿದ್ದಾರೆ ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಜೈನ್ ಬಳಿ ಮುಂಗಡವಾಗಿ 1 ಲಕ್ಷ ರೂಪಾಯಿಗಳನ್ನು ನೀಡಲು ಬೇಡಿಕೆ ಇಟ್ಟಿದ್ದಾರೆ.
ಆರೋಪಿಗಳು ತೋರಿಸಿದ್ದ ಯೋರೋ ಕರೆನ್ಸಿಯ ನೋಟುಗಳನ್ನು ನೋಡಿ ನಂಬಿದ್ದ ಜೈನ್ ಆರೋಪಿಗಳಿಗೆ 1 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಹಣ ಪಡೆದ ನಂತರ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಆರೋಪಿಗಳನ್ನು ಸಂಪರ್ಕಿಸಲು ಯತ್ನಿಸಿದ ಬಳಿಕ ಜೈನ್ಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
6 ಆರೋಪಿಗಳ ಬಂಧನ
ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿರುವ ಜೈನ್ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಮೈಕೋ ಲೇಔಟ್ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಕುಮಾರ್, ಅಶ್ವಿನ್ ಸೇರಿದಂತೆ 6 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಕುರಿತಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇದಕ್ಕೂ ಮೊದಲು ಯಾರಿಗಾದರೂ ಈ ರೀತಿ ವಂಚನೆ ಮಾಡಿದ್ದಾರಾ ಎನ್ನುವುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
78 ಲಕ್ಷ ವಂಚಿಸಿದ್ದವರ ಬಂಧನ
ಮೇ ತಿಂಗಳ ಆರಂಭದಲ್ಲಿ ಒಂದು ವಂಚನೆ ಪ್ರಕರಣ ವರದಿಯಾಗಿತ್ತು. ಬೆಂಗಳೂರಿನ ನಂಜಾಂಬ ಅಗ್ರಹಾರದಲ್ಲಿ ಬಿಸ್ಕತ್ತು ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಲಾಭ ಬರುತ್ತೆ ಎಂದು ಆಮಿಷ ಒಡ್ಡಿ 78 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
28 ವರ್ಷದ ಮನೋಜ್ ರಾವ್ ವ್ಯಕ್ತಿಯೊಬ್ಬರಿಗೆ ಮತ್ತು ಅವರ ಕುಟುಂಬದ ಸದಸ್ಯರು ಸಂತ್ರಸ್ತರನ್ನು ರಾವ್ ಅವರ ವ್ಯವಹಾರದಲ್ಲಿ ಹೂಡಿಕೆ ಮಾಡಲು ಆಮಿಷವೊಡ್ಡಿದರು. ಉತ್ತಮ ಲಾಭ ನೀಡುವ ಆಸೆ ತೋರಿಸಿ 78 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾವ್ ಮತ್ತು ಅವರ ತಾಯಿ ಮತ್ತು ಸಹೋದರಿ ಸೇರಿದಂತೆ ಅವರ ಕುಟುಂಬದ ನಾಲ್ವರು ಸದಸ್ಯರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಆಮಿಷಕ್ಕೆ ಮರುಳಾಗಬೇಡಿ
ಅಧಿಕ ಬಡ್ಡಿ ಆಸೆ ತೋರಿಸಿ ಹಣ ಪಡೆದು ವಂಚಿಸಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಅಧಿಕ ಬಡ್ಡಿ ಆಸೆಗೆ ಹಣ ಕೊಡುವ ಸಾಹಸಕ್ಕೆ ಹೋಗಬೇಡಿ, ಬಡ್ಡಿಯಾಸೆಗೆ ಹಣ ಪಡೆದವರು ವಂಚಿಸಿದ ಪ್ರಕರಣಗಳೇ ಹೆಚ್ಚಾಗಿವೆ, ಅದರಲ್ಲೂ ಅಪರಿಚಿತರ ಜೊತೆ ಹಣಕಾಸಿನ ಸಹವಾಸವೇ ಬೇಡ.
ಆನ್ಲೈನ್ನಲ್ಲಿ ಆಫರ್ ಬಂದಿದೆ ಎಂದು ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ಘಟನೆಗಳು ನಡೆದಿವೆ. ಯಾರಾದರೂ ಅಪರಿಚಿತರು ಕರೆ ಮಾಡಿ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಮಾಹಿತಿ ಕೇಳಿದಾಗ ಕೊಡಬೇಡಿ, ಈ ಬಗ್ಗೆ ಜಾಗೃತಿ ವಹಿಸಿದರೆ ವಂಚನೆಯಿಂದ ಪಾರಾಗಬಹುದು.
Recommended Video