ಬಂದ್ ವೈಫಲ್ಯಕ್ಕೆ ಮಾಧ್ಯಮದ ಮೇಲೆ ಗೂಬೆ ಕೂರಿಸಿದ ವಾಟಾಳ್
ಬೆಂಗಳೂರು, ಜೂನ್ 12: ಮಾಧ್ಯಮಗಳಿಂದಲೇ ಬಂದ್ ವಿಫಲವಾಗುತ್ತಿದೆ ಎಂದು ಕನ್ನಡ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ವೈಫಲ್ಯಕ್ಕೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಂದು (ಜೂನ್ 12) ಬೆಳಗ್ಗೆ ಬೆಂಗಳೂರಿನ ಟೌನ್ ಹಾಲ್ ಬಳಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ವಾಟಾಳ್ ನಾಗರಾಜ್ ಸುದ್ದಿ ಗೋಷ್ಠಿ ನಡೆಸಿದರು. ನಾಳೆಯಿಂದ ಮತ್ತೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಕರ್ನಾಟಕ ಬಂದ್ ಗೆ ರಾಜಧಾನಿಯಲ್ಲಿ ನೀರಸ ಪ್ರತಿಕ್ರಿಯೆ
ನಮ್ಮ ಹೋರಾಟವೇನಿದ್ದರೂ ರಾಜ್ಯದ ರೈತರ ಪರ. ನಮ್ಮ ರೈತರು ಕುಡಿಯೋಕೆ ನೀರು ಸಿಗದೆ ಪರದಾಡುತ್ತಿದ್ದಾರೆ, ಆದರೆ ಸರ್ಕಾರ ಮಾತ್ರ ಈ ಯಾವುದರ ಬಗ್ಗೆಯು ತಲೆಕೆಡಿಸಿಕೊಳ್ಳದೆ ದಿವ್ಯ ಮೌನ ವಹಿಸಿದೆ ಎಂದು ಅವರು ದೂರಿದರು.
ಕಾಸರಗೋಡಿನಲ್ಲಿ ಮಲಯಾಳಿ,ಬೆಳಗಾವಿಯಲ್ಲಿ ಮರಾಠಿಯನ್ನು ಹೇರಲಾಗುತ್ತಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಮಹಾದಾಯಿ ಸೇರಿದಂತೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗಿರುವುದನ್ನು ಖಂಡಿಸಿ, ಇಂದು ( ಜೂ. 12) ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆನೀಡಿದ್ದವು.