ಸಚಿವ ಸ್ಥಾನ ವಂಚಿತ ಮಹೇಶ್ ಕುಮಟಳ್ಳಿಗೆ ಸಮಾಧಾನಕರ ಹುದ್ದೆ ನೀಡಿದ ಬಿಎಸ್ವೈ
ಬೆಂಗಳೂರು, ಫೆಬ್ರವರಿ 10: ಉಪಚುನಾವಣೆಯಲ್ಲಿ ಗೆದ್ದು ಅರ್ಹರಾಗಿ ಬದಲಾಗಿದ್ದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಮಹೇಶ್ ಕುಮಟಳ್ಳಿ ಅವರಿಗೆ 'ಸಮಾಧಾನಕರ ಹುದ್ದೆ'ಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ.
ಮಹೇಶ್ ಕುಮಟಳ್ಳಿ ಅವರನ್ನು 'ಲಾಭದಾಯಕ' ಎಂಎಸ್ಐಎಲ್ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಮಹೇಶ್ ಕುಮಟಳ್ಳಿ ಅವರ ಅಸಮಾಧಾನ ಶಮನ ಮಾಡುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ಕುರ್ಚಿಯ ಮೇಲೆ ಕಣ್ಣು ಹಾಕಿದ ಉಮೇಶ್ ಕತ್ತಿ
ಉಪಚುನಾವಣೆ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಈ ಮುಂಚೆ ಘೋಷಿಸಿದ್ದರು. ಅದರಂತೆ ಉಪಚುನಾವಣೆ ಗೆದ್ದ 11 ಮಾಜಿ ಅನರ್ಹರಲ್ಲಿ 10 ಮಂದಿಗೆ ಮಾತ್ರವೇ ಸಚಿವ ಸ್ಥಾನ ನೀಡಿ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನಿರಾಕರಿಸಲಾಗಿತ್ತು.
ರಮೇಶ್ ಜಾರಕಿಹೊಳಿ ಸೇರಿದಂತೆ ಬೆಳಗಾವಿಗೆ ಈಗಾಗಲೇ ನಾಲ್ಕು ಸಚಿವ ಸ್ಥಾನ ಇರುವ ಕಾರಣ ಕುಮಟಳ್ಳಿಗೆ ಸಚಿವ ಸ್ಥಾನ ನೀಡಿ ಸಂಖ್ಯೆ ಇನ್ನೂ ಹೆಚ್ಚು ಮಾಡಿ ಟೀಕೆಗೆ ಗುರಿ ಆಗುವುದು ಇಷ್ಟವಿಲ್ಲದೆ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನಿರಾಕರಿಸಲಾಗಿತ್ತು.