ಯಜ್ಞ, ಪಕ್ಷಕ್ಕಾಗಿ ಅಲ್ಲ ಗೋವಿಗಾಗಿ: ಸಿದ್ದಾರ್ಥ್ ಗೋಯೆಂಕಾ
Recommended Video
ಬೆಂಗಳೂರು, ಫೆಬ್ರವರಿ 02: ಗೋ ಹತ್ಯೆ ತಡೆ ಹಾಗೂ ಗೋವಿನಿಂದಾಗುವ ವಿವಿಧ ಉಪಯೋಗಗಳ ಕುರಿತು ಜಾಗೃತಿ ಮೂಡಿಸಲು ಬಿಜೆಪಿಯ ಗೋ ಸಂರಕ್ಷಣಾ ಪ್ರಕಾಷ್ಠದ ವತಿಯಿಂದ ಜೆ.ಪಿ.ನಗರದ ಪುಟ್ಟೇನಹಳ್ಳಿಯಸತ್ಯ ಗಣಪತಿ ದೇವಾಲಯ ಮೈದಾನದಲ್ಲಿ 'ಗೋ ಸಂರಕ್ಷಣಾ ಅಷ್ಟಯಾಮ ಮಹಾಯಜ್ಞ' ಆಯೋಜಿಸಲಾಗಿದೆ.
24 ಗಂಟೆ ಸತತವಾಗಿ ಯಜ್ಞ ನಡೆಯಲಿದ್ದು ನಾಳೆ ಬಿಜೆಪಿಯ ರಾಜ್ಯನಾಯಕರುಗಳು ಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಪುರೋಹಿತರ ತಂಡ ಯಜ್ಞವನ್ನು ನಡೆಸಿಕೊಡುತಿದ್ದು, ಹೋಮ ಈಗಾಗಲೇ ಪ್ರಾರಂಭವಾಗಿದೆ. ಅದರ ಜೊತೆಗೆ ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಮಾಡಲಾಗುತ್ತಿದೆ. ಜೊತೆಗೆ ಭಜನೆ ಸಹ ಆಯೋಜಿಸಲಾಗಿದೆ.
ಯಜ್ಞದ ಪ್ರಮುಖ ಆಯೋಜಕ ಬಿಜೆಪಿ ಗೋ ಸಂರಕ್ಷಣಾ ಪ್ರಕಾಷ್ಠದ ಅಧ್ಯಕ್ಷ ಸಿದ್ದಾರ್ಥ್ ಗೋಯೆಂಕಾ ಮಾತನಾಡಿ 'ಗೋವು ನಮ್ಮ ಸಂಸ್ಕೃತಿಯ ಪ್ರಮುಖ ಭಾಗ. ಅದನ್ನು ಉಳಿಸುವುದು ನಮ್ಮ ಹೊಣೆ, ಗೋವಿನ ಜೀವದ ಮೇಲೆ ಆಗುತ್ತಿರುವ ನಿರಂತರ ದಬ್ಬಾಳಿಕೆ ವಿರುದ್ಧ ಈ ಮಹಾಯಜ್ಞವನ್ನು ಆಯೋಜಿಸಲಾಗಿದೆ ಎಂದರು.
ಪ್ರತಿದಿನ ಉಲ್ಲಂಘನೆ
1964 ರಲ್ಲಿ ಕರ್ನಾಟಕದಲ್ಲಿ ಗೋವು ಹತ್ಯೆ ತಡೆಗೆಂದು ವಿಧೇಯಕವೊಂದನ್ನು ತರಲಾಯಿತು ಆದರೆ ಆ ವಿಧೇಯಕ ಕೇವಲ ಮೂಲೆಗುಂಪಾಗಿದೆ. ಕಾಯ್ದೆಗೆ ಅನುಗುಣವಾಗಿ ಯಾವುದೂ ನಡೆಯುತ್ತಿಲ್ಲ, ಕಾಯ್ದೆಯನ್ನು ಕಾಪಾಡಬೇಕಾದವರೆ ಮುರಿಯುತ್ತಿದ್ದಾರೆ ಎಂದು ಯಜ್ಞದ ಪ್ರಮುಖ ಆಯೋಜಕ ಗೋ ಸಂರಕ್ಷಣಾ ಪ್ರಕಾಷ್ಠದ ಅಧ್ಯಕ್ಷ ಸಿದ್ದಾರ್ಥ್ ಗೋಯೆಂಕಾ ಹೇಳಿದರು.
ಅಕ್ರಮ ಕಸಾಯಿ ಖಾನೆಯಿಂದ ಪರಿಸರಕ್ಕೂ ಹಾನಿ
ಬೆಂಗಳೂರೊಂದರಲ್ಲೇ 200-300 ಅಕ್ರಮ ಕಸಾಯಿ ಖಾನೆ ಇವೆ. ಅಕ್ರಮವಾಗಿ, ಅವೈಜ್ಞಾನಿಕವಾಗಿ, ಕಾನೂನಿನ ವಿರುದ್ಧವಾಗಿ ಹಸುಗಳನ್ನು ಕೊಲ್ಲುವ ಈ ಕಸಾಯಿ ಖಾನೆಗಳು ಅಳಿದುಳಿದ ಭಾಗಗಳನ್ನು, ಗೋವಿನ ತ್ಯಾಜ್ಯವನ್ನು ಜಲ ಮೂಲಗಳಿಗೆ ಸೇರಿಸುವ ಮೂಲಕ ಪರಿಸರವನ್ನೂ ಹಾಳು ಮಾಡುತ್ತಿದ್ದಾರೆ ಎಂದರು.
ಅನಂಕುರ್ ಹೆಗಡೆ, ಸಿಟಿ ರವಿ ಕೂಡ ಭಾಗಿ
ನಾಳೆ ಯಾಗದ ಅಂತಿಮ ಘಟ್ಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಸಿಟಿ ರವಿ, ಅಶೋಕ್ ಮುಂತಾದ ಪ್ರಮುಖ ಬಿಜೆಪಿ ನಾಯಕರು ಆಗಮಿಸಲಿದ್ದಾರೆ. ಯಾಗದ ನಂತರ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಮೋದಿ ಆಗನಕ್ಕೂ ಇದಕ್ಕೂ ಸಂಬಂಧ ಇಲ್ಲ
ಬಿಜಪಿ ಗೋ ಸಂರಕ್ಷಣಾ ಪ್ರಕಾಷ್ಠವೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರೂ ಕೂಡ ಪಕ್ಷಕ್ಕೂ ಯಾಗಕ್ಕೂ ಸಂಬಂಧವಿಲ್ಲ ಎಂದು ಸಿದ್ದಾರ್ಥ್ ಗೋಯೆಂಕಾ ಹೇಳಿದರು. ಇದು ಸಾರ್ವಜನಿಕ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮ ಅಲ್ಲ ಎಂದ ಅವರು ಇದು ಗೋವಿನ ಉಳಿವಿಗಾಗಿ ಮಾಡುತ್ತಿರುವ ಕಾರ್ಯಕ್ರಮ ಎಂದರು.
ನಾಳೆ ಬಹಿರಂಗ
ಆಯೋಜಕರೂ ಏನೇ ಹೇಳಿದರು ಕಾರ್ಯಕ್ರಮದ ಹಿಂದೆ ಚುನಾವಣೆ ಉದ್ದೇಶ ಇರುವುದು ಎಂತಹವರಿಗೂ ಸುಲಭಕ್ಕೆ ತಿಳಿಯುವ ವಿಷಯವೇ ಆಗಿದೆ. ನಾಳೆ ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ವೇದಿಕೆಯಲ್ಲಿ ಭಾಷಣಕ್ಕೆ ನಿಂತಾಗ ಈ ವಿಷಯ ಬಹಿರಂಗ ವಾಗಲಿದೆ. ಬಿಜೆಪಿಯು ಗೋ ವಿಷಯ ಆಧರಿಸಿ ಮತ ಕೇಳುವ ಮಾಮೂಲಿ ಪರಿಪಾಠದ ಹೊಸ ಉದಾಹರಣೆ ಈ ಯಾಗ ಎನ್ನಲಾಗುತ್ತಿದೆ.