ಗಾಂಧಿಯನ್ನು ನೆನಪಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಿದೆ
ಬೆಂಗಳೂರು, ಅಕ್ಟೋಬರ್ 2: ಮೋಹನದಾಸ ಕರಮಚಂದ ಗಾಂಧಿ ಮಹಾತ್ಮಗಾಂಧಿಯಾದದ್ದು, ವಿಶ್ವದ ಸಾಧಕರ ಅಗ್ರಸಾಲಿನಲ್ಲಿ ನಿಂತದ್ದು ಭಾರತದ ಹೆಮ್ಮೆ. ಪ್ರಪಂಚದ ಎಲ್ಲರೂ ನಿಬ್ಬೆರಗಾಗುವಂತೆ ಬದುಕಿದ ಗಾಂಧಿ ಅವರು ನಮ್ಮಿಂದ ದೂರವಾಗುತ್ತಿದ್ದಾರೆಯೇ? ಎಂಬ ಅನುಮಾನಗಳು ಮೂಡುತ್ತಿರುವ ನಡುವೆ ಗಾಂಧಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಾಗಿದೆ ಎಂದು ಅಮರ ಬಾಪೂ ಚಿಂತನದ ಉಪಸಂಪಾದಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯಪಟ್ಟರು.
ನಗರದ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಅಕಾಡೆಮಿ ಆಫ್ ಬ್ಯುಸಿನೆಸ್ ಸ್ಟಡೀಸ್ನಲ್ಲಿ ಗಾಂಧಿ ಅಧ್ಯಯನ ಕೇಂದ್ರ ಬುಧವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ 150ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ಜೀವನ ಪ್ರಯೋಗದ ಫಲವೇ ಇಂದಿನ ಸ್ವತಂತ್ರ ಭಾರತ
ಜಗತ್ತು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ತಂತ್ರಜ್ಞಾನ, ಯಾಂತ್ರಿಕ ಜೀವನಕ್ಕೆ ಇಷ್ಟಪಟ್ಟೋ, ಕಷ್ಟಪಟ್ಟೋ ನಾವು ಹೊಂದಿಕೊಳ್ಳುತ್ತಿದ್ದೇವೆ. ಹಿಂದಿನದ್ದೆಲ್ಲವನ್ನೂ ಕೈಬಿಟ್ಟು, ಮುಂದಿನದು ಏನೊಂದೂ ಕಾಣದಾದಾಗ, ಥಟ್ಟನೆ ನಮಗೆ ಗಾಂಧಿ ನೆನಪಾಗುತ್ತಾರೆ .ಏಕೆಂದರೆ ಗಾಂಧಿ ಕಾಲಾತೀತ ವ್ಯಕ್ತಿ . ಕಸ್ತೂರ ಬಾ ಮತ್ತು ಗಾಂಧೀಜಿಯವರ 150 ನೇ ವರ್ಷಾಚರಣೆಯ ಸಂದರ್ಭದಲ್ಲಿ ನಾವಿರುವುದೇ ನಮ್ಮ ಪುಣ್ಯ. ಭಾರತ ಮಾತ್ರವಲ್ಲದೇ ಜಗತ್ತಿನ ಬಹುತೇಕ ರಾಷ್ಟ್ರಗಳು ಗಾಂಧೀಜಿ ಅವರ ನಡೆ ನುಡಿಗಳಿಗೆ ಕಾರಣವಾದ ಸತ್ಯ ಮತ್ತು ಅಹಿಂಸೆಯ ಮಹತ್ವ ಹಾಗೂ ಅವಶ್ಯಕತೆಯನ್ನು ಮನಗಾಣಲು ಪ್ರಾರಂಭಿಸಿವೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಜಯರಾಮ ಮಾತನಾಡಿ, ಇಂದಿಗೆ 150 ವರ್ಷಗಳ ಹಿಂದೆ ಮೋಹನದಾಸ ಕರಮಚಂದ ಗಾಂಧಿ ಎಂಬ ಅಪರೂಪದ ಬೆಳಕು ಗುಜರಾತಿನಲ್ಲಿ ಜನಿಸಿತು. ನಂತರ ಮಹಾತ್ಮ ಗಾಂಧಿ ಎಂದು ಹೆಸರಾದ ಇವರ ಬಗ್ಗೆ ಭಾರತದ ಹೊಸ ಪೀಳಿಗೆಯ ಯುವಕರಿಗೆ ಹೆಚ್ಚು ಗೊತ್ತಿಲ್ಲ. ಆದರೆ ಜಗತ್ತು ಮಾತ್ರ ಗಾಂಧೀಜಿಯನ್ನು ಸದಾ ನೆನಪಿಸಿಕೊಳ್ಳುತ್ತಿದೆ. ಯುವ ಸಮುದಾಯ ಗಾಂದಿ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಚಿತ್ರದುರ್ಗ: ಮಹಾತ್ಮಾ ಗಾಂಧಿಗೆ ದೇವಸ್ಥಾನ, ನಿತ್ಯ ಪೂಜೆ-ಪುನಸ್ಕಾರ
ಗಾಂಧಿ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಭಾಷಣ, ಗಾಯನ , ಸಮೂಹ ಚರ್ಚೆ, ರಸಪ್ರಶ್ನೆ, ಭಿತ್ತಿಪತ್ರ ವಿನ್ಯಾಸ, ಮುಂತಾದ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಮಂಜುನಾಥ್ ಜಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.