ಮಹಾಶಿವರಾತ್ರಿ: ಶಿವನ ದರ್ಶನ ಪಡೆದ ರಾಜ್ಯದ ಪ್ರಭಾವಿ ರಾಜಕಾರಣಿಗಳು!
ಬೆಂಗಳೂರು, ಮಾ. 11: ಮಹಾಶಿವರಾತ್ರಿ ನಿಮಿತ್ತ ರಾಜಕೀಯ ನಾಯಕರು ದೇವಸ್ಥಾನಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಶಿವನ ದೇವಸ್ಥಾನಕ್ಕೆ ಜನನಾಯಕರು ಭೇಟಿ ನೀಡಿದ್ದಾರೆ.
Recommended Video
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹಾಶಿವರಾತ್ರಿ ಪ್ರಯುಕ್ತ ತಮ್ಮ ಪುತ್ರಿಯೊಂದಿಗೆ ಬೆಂಗಳೂರಿನ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದರು. ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಹಾಗೂ ಜೋಡಿ ತೆಂಗಿನ ಆರತಿಯನ್ನು ಸಿದ್ದರಾಮಯ್ಯ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ಬೆಳಗಿದ್ದು ವಿಶೇಷವಾಗಿತ್ತು. ದೇವರ ದರ್ಶನದ ಬಳಿಕ ಮಾದಪ್ಪನ ಪದ ಹಾಡುವವರ ಜೊತೆಗೆ ಕಂಸಾಳೆ ಬಾರಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಮನ ಸೆಳೆದರು.
ಮಾದಪ್ಪನ ದರ್ಶನ ಪಡೆದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಪ್ರತಿ ವರ್ಷ ಶಿವರಾತ್ರಿಯಂದು ಮಲೆಮಹದೇಶ್ವರ ದೇವಸ್ಥಾನಕ್ಕೆ ಬೇಟಿ ನೀಡುತ್ತೇನೆ. ಅದರಂತೆ ಇಂದೂ ಕೂಡ ದೇವಸ್ಥಾನಕ್ಕೆ ಬಂದಿದ್ದೇವೆ. ರಾಜ್ಯ ಸುಭಿಕ್ಷವಾಗಿರಲಿ, ಮಳೆ ಬೆಳೆ ಸಮೃದ್ದವಾಗಿ ಆಗಲಿ, ಜನ ಸುಖ ಶಾಂತಿ ಇಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪತ್ನಿ ಉಷಾ ಶಿವಕುಮಾರ್ ಅವರು ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲಕ್ಕೆ ಗುರುವಾರ ರಾತ್ರಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಒಟ್ಟಾರೆ ನಾಡಿನ ಪ್ರಮುಖ ರಾಜಕಾರಣಿಗಳು ಇವತ್ತು ರಾಜಕೀಯ ಬಿಟ್ಟು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು.