ಗೂಂಡಾ ಕಾಯ್ದೆಯಡಿ ರೌಡಿ ವಿನಯ್ ಅಲಿಯಾಸ್ ಮಿಂಡ ಬಂಧನ
ಬೆಂಗಳೂರು, ಸೆ. 3: ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಖ್ಯಾತ ರೌಡಿ ಆಸಾಮಿಯಾದ ವಿನಯ ಕುಮಾರ್ ಅಲಿಯಾಸ್ ಮಿಂಡ (30 ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Recommended Video
ಮಹಾಲಕ್ಷ್ಮೀಲೇಔಟ್ ವ್ಯಾಪ್ತಿಯ ಶ್ರೀರಾಮನಗರದ ನಿವಾಸಿಯಾದ ವಿನಯ್ ಕುಮಾರ್ ನನ್ನು ಗೂಂಡಾಕಾಯ್ದೆಯಲ್ಲಿ ಬಂಧಿಸಲಾಗಿದೆ. ಈತನು ಬೆಂಗಳೂರು ನಗರದ ನಂದಿನಿಲೇಔಟ್, ಮಹಾಲಕ್ಷ್ಮೀಲೇಔಟ್, ಪೀಣ್ಯ, ವಿಲ್ಸನ್ಗಾರ್ಡನ್, ವಯಾಲಿಕಾವಲ್ ಪೊಲೀಸ್ ಠಾಣೆಗಳಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಕೊಲೆ, ಕೊಲೆ ಪ್ರಯತ್ನ, ಸುಲಿಗೆ, ದರೋಡೆಗೆ ಸಂಚು, ದರೋಡೆ, ಹಲ್ಲೆ ಹಾಗೂ ಇತರೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ ಎಂದು ಪೊಲೀಸರು ಹೇಳಿದರು.
ಈತನು 2010 ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ. 2015 ನೇ ಸಾಲಿನಲ್ಲಿ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ಗೂಂಡಾ ಕಾಯ್ದೆಯಡಿ ಬಂಧನವಾಗಿತ್ತು. ಆದರೆ 2016 ಜುಲೈ ತಿಂಗಳಿನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ. ನಂತರ ವಿಲ್ಸನ್ಗಾ ರ್ಡನ್, ಮಹಾಲಕ್ಷ್ಮೀಲೇಔಟ್, ನಂದಿನಿ ಲೇಔಟ್ ಪೊಲೀಸ್ ಠಾಣೆಗಳಲ್ಲಿನ ಕೊಲೆ ಪ್ರಯತ್ನ, ದರೋಡೆಗೆ ಸಂಚು, ಹಲ್ಲೆ ಪ್ರಕರಣಗಳಲ್ಲಿ ತೊಡಗಿಕೊಂಡಿದ್ದ. ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿರುವುದರಿಂದ ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ವಿನಯ್ ಬಂಧಿಸಲು ಕಾಂತರಾಜ್ ಹೆಚ್.ಎಂ. , ಪೊಲೀಸ್ ಇನ್ಸ್ಪೆಕ್ಟರ್, ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆ ರವರು ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಮಾಡಿದ್ದರು.