ಮಹಾಲಕ್ಷ್ಮೀ ಲೇಔಟ್ ಕದನ; ಬಿಜೆಪಿಯ ಎಸ್. ಹರೀಶ್ ನಡೆ ಏನು?
ಬೆಂಗಳೂರು, ನವೆಂಬರ್ 12 : "ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಆದರೆ, ಸ್ವಾಭಿಮಾನವಿದೆ" ಎಂದು ಮಾಜಿ ಉಪ ಮೇಯರ್ ಮತ್ತು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ನಾಯಕ ಎಸ್. ಹರೀಶ್ ಹೇಳಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ. ಅನರ್ಹ ಶಾಸಕ ಕೆ. ಗೋಪಾಲಯ್ಯಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿ ಹೈಕಮಾಂಡ್ಗೆ ದೂರು ಹೋಗಿದೆ.
ಕೆ. ಗೋಪಾಲಯ್ಯ ವಿರುದ್ಧ ಬಿಜೆಪಿ ಹೈಕಮಾಂಡ್ಗೆ ದೂರು
ಮಾಜಿ ಉಪ ಮೇಯರ್ ಎಸ್. ಹರೀಶ್ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋತಿದ್ದ ನೆ. ಲ. ನರೇಂದ್ರ ಬಾಬು ಸಹ ಆಕಾಂಕ್ಷಿ.
ಯಡಿಯೂರಪ್ಪ ಮುಂದೆ ಕೆ. ಗೋಪಾಲಯ್ಯ ಇಟ್ಟ ಬೇಡಿಕೆ ಏನು?
2018ರಲ್ಲಿ ಜೆಡಿಎಸ್ ಗೆದ್ದಿದ್ದ ಕ್ಷೇತ್ರವಿದು, ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಕ್ಷೇತ್ರವನ್ನು ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಎಂ. ಶಿವರಾಜ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಪ್ರಚಾರ ಕಾರ್ಯವನ್ನು ಆರಂಭಿಸಿದೆ.
ಉಪ ಚುನಾವಣೆ; ಬೆಂಗಳೂರಿನ 4 ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿ
ನನ್ನ ತೀರ್ಮಾನವನ್ನು ತಿಳಿಸುವೆ
"ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಆದರೆ, ಸ್ವಾಭಿಮಾನವಿದೆ. ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ನನ್ನ ತೀರ್ಮಾನವನ್ನು ತಿಳಿಸುತ್ತೇನೆ" ಎಂದು ಮಾಜಿ ಉಪ ಮೇಯರ್ ಎಸ್. ಹರೀಶ್ ಹೇಳಿದ್ದು ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಹೈಕಮಾಂಡ್ಗೆ ದೂರು
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಅನ್ನು ಕೆ. ಗೋಪಾಲಯ್ಯಗೆ ನೀಡಬಾರದು ಎಂದು ಎಸ್. ಹರೀಶ್ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾಗೆ ದೂರು ನೀಡಿದ್ದಾರೆ. ನಾವು ಅವರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈಗ ಅವರಿಗೆ ಪಕ್ಷದ ಟಿಕೆಟ್ ನೀಡಿದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಯಾರಿಗೆ ಟಿಕೆಟ್ ಖಚಿತವಾಗಿಲ್ಲ
"ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ಇನ್ನೂ ಖಚಿತವಾಗಿಲ್ಲ. ಕೆ. ಗೋಪಾಲಯ್ಯಗೆ ಟಿಕೆಟ್ ನೀಡಬಾರದು ಎಂದು ಹಿಂದಿನಿಂದಲೂ ನಾನು ಒತ್ತಾಯಿಸುತ್ತಿದ್ದೇನೆ" ಎಂದು ಎಸ್. ಹರೀಶ್ ಹೇಳಿದ್ದಾರೆ.
ನೆ. ಲ. ನರೇಂದ್ರ ಬಾಬು
2018ರ ಚುನಾವಣೆಯಲ್ಲಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ನೆ. ಲ. ನರೇಂದ್ರ ಬಾಬು ಬಿಜೆಪಿಯಿಂದ ಕಣಕ್ಕಿಳಿದಿದ್ದರು. 47,118 ಮತಗಳನ್ನು ಪಡೆದಿದ್ದರು. ಈ ಉಪ ಚುನಾವಣೆಯಲ್ಲಿ ಅವರು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕೆ. ಗೋಪಾಲಯ್ಯಗೆ ಟಿಕೆಟ್ ಅನ್ನು ಪಕ್ಷ ನೀಡಿದರೆ ನರೇಂದ್ರ ಬಾಬು ಮುಂದಿನ ನಡೆ ಏನು? ಕಾದು ನೋಡಬೇಕಿದೆ.