ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟರಾ ಗೋಪಾಲಯ್ಯ?
ಬೆಂಗಳೂರು, ಡಿಸೆಂಬರ್.10: ವಿಧಾನಸಭಾ ಚುನಾವಣೆಯ ಮಿನಿಸಮರ ಮುಗಿದಿದ್ದು ಬಿಜೆಪಿ ಸರ್ಕಾರಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಬಿಜೆಪಿ-ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ ಶಾಸಕರು ಗೆದ್ದಿದ್ದಾರೆ. ಈಗ ಗೆದ್ದ ಶಾಸಕರಿಗೆ ಯಾವ ಸಚಿವ ಸ್ಥಾನ ಕೊಡಬೇಕು ಎಂಬುದೇ ದೊಡ್ಡ ಸವಾಲಾಗಿದೆ.
ಬಿಜೆಪಿ ಸರ್ಕಾರದಲ್ಲಿ ನನಗೇ ಸಚಿವ ಸ್ಥಾನ ಸಿಕ್ಕಿಲ್ಲ, ಡಿಸಿಎಂ ಸ್ಥಾನ ಸಿಕ್ಕಿಲ್ಲ ಎಂದು ಕೆಲ ನಾಯಕರು ಹೇಳುತ್ತಿದ್ದಾರೆ. ಇದರ ಮಧ್ಯೆ ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕರಿಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಯಡಿಯೂರಪ್ಪಗೆ ತಲೆನೋವಾದ ಸಂಪುಟ ವಿಸ್ತರಣೆ: ಆಕಾಂಕ್ಷಿಗಳು ಯಾರ್ಯಾರು?
ಒಂದು ಕಡೆ ಯಾರಿಗೆ ಯಾವ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಸಿಎಂ ಚಿಂತನೆ ನಡೆಸುತ್ತಿದ್ದರೆ, ಇನ್ನೊಂದೆಡೆ ನನಗೆ ಇಂಥದ್ದೇ ಖಾತೆ ಬೇಕು ಎಂದು ಕೆಲವರು ಡಿಮ್ಯಾಂಡ್ ಮಾಡುತ್ತಿದ್ದಾರೆ. ಈಗದೇ ಪಟ್ಟಿಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಮೇಲೆ ಕಣ್ಣು:
ಮಂಗಳವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಶಾಸಕ ಗೋಪಾಲಯ್ಯ ದಂಪತಿ ನಿರ್ಮಲಾನಂದ ಶ್ರೀಗಳ ಆಶಿರ್ವಾದ ಪಡೆದರು. ನಂತರ ಮಾತನಾಡಿದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು ಎನ್ನುವ ಬೇಡಿಕೆಯನ್ನು ಪರೋಕ್ಷವಾಗಿ ಇಟ್ಟಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಅಭಿವೃದ್ಧಿ ಆಗಿರುವಂತೆ ಇಡಿ ಬೆಂಗಳೂರು ಅಭಿವೃದ್ಧಿ ಆಗಬೇಕು. ಆ ರೀತಿಯ ಅಭಿವೃದ್ಧಿ ಕೆಲಸವನ್ನು ನಾನು ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಆ ಮೂಲಕ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕೆಂದು ಪರೋಕ್ಷವಾಗಿ ಕೆ.ಗೋಪಾಲಯ್ಯ ಹೇಳಿದ್ದಾರೆ.
ಬೇಕಾದ ಖಾತೆಯ ಪಟ್ಟಿ ಸಿಎಂ ಗೆ ನೀಡಿರುವ ಬೈರತಿ ಬಸವರಾಜ್
ಇನ್ನು, ಹೊಸಕೋಟೆ ಹಾಗೂ ಹುಣಸೂರಿನಲ್ಲಿ ಸೋತಿರುವ ಎಂಟಿಬಿ ನಾಗರಾಜ್ ಹಾಗೂ ಹೆಚ್.ವಿಶ್ವನಾಥ್ ಇಬ್ಬರೂ ಕಷ್ಟದಲ್ಲಿ ಇದ್ದಾರೆ. ಈಗ ಅವರ ಕೈ ಹಿಡಿಯಬೇಕಿದೆ. ಅವರನ್ನು ಮಂತ್ರಿ ಮಾಡುವುದು, ಬಿಡುವುದೂ ಸಿಎಂಗೆ ಬಿಟ್ಟ ವಿಚಾರವಾಗಿದ್ದು, ಈ ಸಂಬಂಧ ಇಂದು ರಾತ್ರಿಯೇ ಸಭೆ ನಡೆಸಲಾಗುತ್ತದೆ ಎಂದು ಗೋಪಾಲಯ್ಯ ಹೇಳಿದ್ದಾರೆ.