'ಮಹದೇವಪುರದ ಸೊಳ್ಳೆ ಕಾಟ ಯಾವಾಗ ನಿವಾರಣೆ ಆಗುತ್ತೆ?'
ಬೆಂಗಳೂರು, ಏಪ್ರಿಲ್ 29: 'ವೈಟ್ಫೀಲ್ಡ್ ರೈಸಿಂಗ್' ಸಂಸ್ಥೆ ಆಯೋಜಿಸಿದ್ದ ಮಹದೇವಪುರ ಕ್ಷೇತ್ರದ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳು ಹಾಗೂ ಮಹದೇವಪುರ ಮತದಾರರ ನಡುವೆ ಸಂವಾದ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದು ಸೊಳ್ಳೆ ಕಾಟದ ಸಮಸ್ಯೆ.
ಪ್ರಸ್ತುತ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಎಲ್ಲ ಅಭ್ಯರ್ಥಿಗಳೂ ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚರ್ಚಿಸಿದರು. ಮಹದೇವಪುರದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಆಗಿರುವ ಕಾರಣ ಕಸದ ನಿರ್ವಹಣೆ 100% ಸರಿಯಾಗಿ ಆಗದೇ ಇರುವ ಕಾರಣ ಸೊಳ್ಳೆ ಕಾಟ ಉದ್ಭವಿಸಿದೆ ಎಂಬುದು ಲಿಂಬಾವಳಿ ಕೊಟ್ಟ ಕಾರಣ.
ಮಹದೇವಪುರ ಕ್ಷೇತ್ರದ ಅಭ್ಯರ್ಥಿಗಳು ಮತದಾರರೊಂದಿಗೆ ಮುಖಾ-ಮುಖಿ
ಎಲ್ಲ ಅಭ್ಯರ್ಥಿಗಳು ಇದನ್ನೊಂದು ಗಂಭೀರ ಸಮಸ್ಯೆಯೆಂದು ಅನುಮೋಧಿಸಿ ಸೊಳ್ಳೆ ಕಾಟ ನಿಯಂತ್ರಣಕ್ಕೆ ಸ್ವಚ್ಛತೆಯೇ ಮದ್ದಾಗಿರುವ ಕಾರಣ ಶಾಸಕರಾಗಿ ಅಧಿಕಾರಕ್ಕೆ ಬಂದರೆ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಸಂವಾದದಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದ ವಿಷಯಗಳು ಈ ಕೆಳಕಂಡಂತಿವೆ...
ಟ್ರಾಫಿಕ್ ಸಮಸ್ಯೆಗೆ ಪರಿಹಾರ ಬೇಕು
ಮಹದೇವಪುರ ಕ್ಷೇತ್ರದ ವೈಟ್ಫೀಲ್ಡ್ ಈಗಾಗಲೇ ಐಟಿ ಹಬ್ ಆಗಿ ಹೆಸರುವಾಸಿ ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಬಹುತೇಕ ವೈಯಕ್ತಿಕ ವಾಹನಗಳಲ್ಲೇ ಕಚೇರಿಗೆ ಆಗಮಿಸುವವರು ಇಲ್ಲಿ ಹೆಚ್ಚು. ಹಾಗಾಗಿ ಎಸ್ಇಜೆಡ್ಗಳಿಗೆ ಬೆಂಗಳೂರಿನಿಂದ ಹೊರಗೆ ಸ್ಥಳ ನೀಡಿ ಬೆಂಗಳೂರಿನ ಹೊರವಲಯವೂ ಅಭಿವೃದ್ಧಿ ಆಗುವಂತೆ ಮಾಡಬೇಕೆಂಬ ಸಲಹೆ ಮತದಾರರಿಂದ ಕೇಳಿ ಬಂತು.
ಐಟಿ ಸಂಸ್ಥೆಗಳಿಂದಲೇ ಟ್ರಾಫಿಕ್ ಹೆಚ್ಚು
ಟ್ರಾಫಿಕ್ ಸಮಸ್ಯೆ ಬಗ್ಗೆ ಅರವಿಂದ ಲಿಂಬಾವಳಿ ಹೇಳಿದ ಉತ್ತರ ಹೀಗಿತ್ತು; ಇಲ್ಲಿನ ಬಹುತೇಕ ಸಾಫ್ಟ್ವೇರ್ ಕಂಪೆನಿಗಳ ನೌಕರರು ಕಚೇರಿಗೆ ಬರಲು ವೈಯಕ್ತಿಕ ವಾಹನ ಬಳಸುತ್ತಾರೆ. ಅದರಿಂದ ಟ್ರಾಫಿಕ್ ಹೆಚ್ಚಾಗಿದೆ. ಸಂಸ್ಥೆಗಳೇ ತಮ್ಮ ನೌಕರರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಿದಲ್ಲಿ ಸಮಸ್ಯೆ ಕಡಿಮೆ ಆಗುತ್ತದೆ ಈ ಬಗ್ಗೆ ಕಂಪೆನಿಗಳೊಂದಿಗೆ ಮಾತನಾಡಲಾಗುವುದು.
ಪಟ್ಟಂದೂರು ಕೆರೆಯ ಸ್ಥಿತಿ ಏನು?
ಕೆರೆ ಒತ್ತುವರಿ ಬಗ್ಗೆ ಸಂವಾದದಲ್ಲಿ ಚರ್ಚೆ ನಡೆಯಿತು. ಕೆರೆ ಒತ್ತುವರಿ ಬೆಂಗಳೂರಿಗೆ ಅಂಟಿದ ಭೂತ ಎಂದು ಐದೂ ಜನ ಅಭ್ಯರ್ಥಿಗಳು ಒಪ್ಪಿಕೊಂಡರು. ಪಟ್ಟಂದೂರು ಕೆರೆಯನ್ನು ನಕಲಿ ದಾಖಲೆ ಸೃಷ್ಠಿಸಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಕೆರೆ ಒತ್ತುವರಿ ತನಿಖೆ ಮಾಡಿರುವ ಆಯೋಗವು ವಿಸ್ತೃತ ವರದಿ ಕೊಟ್ಟಿದ್ದು ವರದಿಯನ್ನು ಜಾರಿತರುವುದಾಗಿ ಎಲ್ಲ ಅಭ್ಯರ್ಥಿಗಳೂ ಭರವಸೆ ನೀಡಿದರು.
ವಾರ್ಡ್ ಹಂತದ ಕಮಿಟಿ ಸ್ಥಾಪನೆ
ಕಸ ವಿಲೇವಾರಿ ಬಗ್ಗೆಯೂ ಸಂವಾದದಲ್ಲಿ ಚರ್ಚೆ ನಡೆಯಿತು. ಕಸ ವಿಲೇವಾರಿ ಮಾಡುವ ಕಾಂಟ್ರಾಕ್ಟರ್ಗಳು ಅವೈಜ್ಞಾನಿಕವಾಗಿ ಕಸ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ಲಿಂಬಾವಳಿ ಅವರು, ಕಸವನ್ನು ಮಹದೇವಪುರ ಕ್ಷೇತ್ರ ವ್ಯಾಪ್ತಿ ಮಿಟ್ಟಗಾನಹಳ್ಳಿ ಡಂಪ್ ಮಾಡಲಾಗುತ್ತಿದೆ ಆದರೆ ಅದಕ್ಕೆ ಸರಿಯಾದ ಟ್ರೀಟ್ಮೆಂಟ್ ಮಾಡುತ್ತಿಲ್ಲ ಇದನ್ನು ಸರ್ಕಾರದ ಹಂತದಲ್ಲಿ ಸರಿ ಮಾಡಬೇಕು ಎಂದರು. ಕಾಂಗ್ರೆಸ್ನ ಎಸಿ ಶ್ರೀನಿವಾಸ್ ಅವರು ಕಸ ಮಾಫಿಯಾ ಬೆಂಗಳೂರಿನಲ್ಲಿ ಹೆಚ್ಚಿದೆ ಅದಕ್ಕೆ ಕಡಿವಾಣ ಹಾಕಬೇಕು ಎಂದರು. ಕಸ ವಿಲೇವಾರಿ ಮೇಲುಸ್ತುವಾರಿಗೆ ವಾರ್ಡ್ ಹಂತದಲ್ಲಿ ಕಮಿಟಿ ಮಾಡುತ್ತೇವೆ ಎಂದು ಆಮ್ ಆದ್ಮಿಯ ಭಾಸ್ಕರ್ ಪ್ರಸಾದ್ ಭರವಸೆ ನೀಡಿದರು.
ಸೋತರೆ ಏನು ಮಾಡ್ತೀರಾ?
ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಏನು ಮಾಡ್ತೀರಾ ಎಂದು ಅಭ್ಯರ್ಥಿಗಳನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅಭ್ಯರ್ಥಿಗಳು ಕ್ಷೇತ್ರದಲ್ಲಿಯೇ ಇದ್ದು ಜನರೊಂದಿಗೆ ಅವರ ಹಕ್ಕುಗಳಿಗಾಗಿ ಹೋರಾಡುತ್ತೇವೆ ಎಂದರು. ಕಾಂಗ್ರೆಸ್ನ ಎಸಿ ಶ್ರೀನಿವಾಸ್ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದೆ ಆದರೆ ಅಂದಿನಿಂದ ಇಂದಿನವರೆಗೂ ಕ್ಷೇತ್ರ ಪರ್ಯಟನೆ ಬಿಟ್ಟಿಲ್ಲ ಬೇಕಾದರೆ ಮೊಬೈಲ್ ನೆಟ್ವರ್ಕ್ ಚೆಕ್ ಮಾಡಿಕೊಳ್ಳಿ ಎಂದು ಸವಾಲು ಹಾಕಿದರು.
ಭ್ರಷ್ಟಾಚಾರ ಕಡಿಮೆ ಹೇಗೆ ಮಾಡ್ತೀರಾ?
ಎಲ್ಲ ಸಮಸ್ಯೆಗಳ ತಾಯಿ ಎನ್ನಲಾಗುವ ಭ್ರಷ್ಟಾಚಾರದ ಪ್ರಶ್ನೆಗೆ ಎಲ್ಲ ಅಭ್ಯರ್ಥಿಗಳು ಒಂದೇ ತೆರನಾದ ಉತ್ತರ ನೀಡಿದರು. ಸರ್ಕಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟು, ನಾವೂ ಲಂಚಕ್ಕೆ ಪ್ರೋತ್ಸಾಹ ಕೊಡದೆ ನಾವೂ ಸ್ವಚ್ಛವಾಗಿದ್ದು ಅಧಿಕಾರಿಗಳನ್ನೂ ನ್ಯಾಯಪರವಾಗಿ ಕಾರ್ಯ ಮಾಡುವಂತೆ ಪ್ರೇರೇಪಿಸುತ್ತೇವೆ ಎಂದರು.