ಬೆಂಗಳೂರಲ್ಲಿ ಮಹಾದಾಯಿ ಕಿಚ್ಚು: ರೈಲ್ವೆ ನಿಲ್ದಾಣದಲ್ಲೇ ರೈತರ ಹೋರಾಟ
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರಲ್ಲಿ ಮಹಾದಾಯಿ, ಕಳಸಾಬಂಡೂರಿ ಹೋರಾಟದ ಕಿಚ್ಚು ಹೆಚ್ಚಾಗಿದೆ.
ರೈಲ್ವೆ ನಿಲ್ದಾಣದಲ್ಲೇ ರೈತರು ಹೋರಾಟ ನಡೆಸುತ್ತಿದ್ದಾರೆ. ಮಹಾದಾಯಿ ವಿಚಾರವಾಗಿ ಬೆಂಗಳೂರಿಗೆ ಬಂದಿದ್ದ ರೈತರಿಗೆ ನಿರಾಸೆಯಾಗಿತ್ತು.ಮುಖ್ಯಮಂತ್ರಿಗಳು ಭೇಟಿಗೆ ಸಿಗದೆ ಮಹಾರಾಷ್ಟ್ರಕ್ಕೆ ತೆರಳಿದ್ದರು. ಅದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ರಾತ್ರಿಯಿಡೀ ರೈಲ್ವೆ ನಿಲ್ದಾಣದಲ್ಲೇ ಕಳೆದ ರೈತರ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ರೈಲ್ವೆ ನಿಲ್ದಾಣದಲ್ಲಿ ರೈತ ಹೋರಾಟಗಾರರನ್ನು ಅಡ್ಡಹಾಕಿ ನಗರದೊಳಗೆ ಪ್ರವೇಶಿಸದಂತೆ ಪೊಲೀಸರು ಎಚ್ಚರ ವಹಿಸಿದ್ದರು. ಆದರೆ, ಅಷ್ಟಕ್ಕೆ ವಾಪಾಸ್ ಹೋಗದ ಹೋರಾಟಗಾರರು ರಾತ್ರಿಯಿಡೀ ರೈಲು ನಿಲ್ದಾಣದಲ್ಲೇ ಕಳೆದಿದ್ದಾರೆ.
ರೈಲು ನಿಲ್ದಾಣದಲ್ಲಿ ಅಹೋರಾತ್ರಿ ಧರಣಿ ನಡೆಸಿರುವ ರೈತ ಹೋರಾಟಗಾರರು ಇಂದು ಕೂಡ ತಮ್ಮ ಹೋರಾಟ ಮುಂದುವರೆಸಲಿದ್ದಾರೆ. ಇಂದು ಸ್ಟೇಷನ್ ಒಳಗಿನಿಂದ ಹೊರಗೆ ಹೋಗಿ ಪ್ರತಿಭಟನೆ ಮಾಡಲು ಸಿದ್ದತೆ ನಡೆಸಲಾಗಿದೆ. ಇಂದಾದರೂ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.