ಕಾರು ಮತ್ತು ಲಾರಿ ನಡುವೆ ಅಪಘಾತ: ಮಾಗಡಿ ರಸ್ತೆ ಪೊಲೀಸ್ ಸಿಬ್ಬಂದಿಗೆ ಗಾಯ
ಬೆಂಗಳೂರು, ನವೆಂಬರ್ 25: ಮಹಜರಿಗೆ ಆರೋಪಿಯನ್ನು ಕರೆದೊಯ್ಯುತ್ತಿದ್ದ ಮಾಗಡಿ ರಸ್ತೆ ಪೊಲೀಸ್ ಠಾಣೆಯ ಪೊಲೀಸರ ವಾಹನ ಹರಿಹರ ಸಮೀಪ ಅಪಘಾತ ಸಂಭವಿಸಿ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಜತೆ ಪೊಲೀಸರು ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ಚಾಲಕನನ್ನು ದಾವಣಗೆರೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಭಾನುವಾರ ಬೆಂಗಳೂರಿನಲ್ಲಿ ಕೆಎಸ್ ಆರ್ ಪಿ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ನಡೆಯುತ್ತಿತ್ತು. ಬೇರೊಬ್ಬರ ಪರೀಕ್ಷೆ ಬರೆಯಲು ಹೋಗಿ ಆರೋಪಿ ಮಲ್ಲಿಕಾರ್ಜುನ್ ಸಿಕ್ಕಿಬಿದ್ದರು. ಆರೋಪಿ ಅಭ್ಯರ್ಥಿಯನ್ನು ಬಂಧಿಸಿದ್ದ ಮಾಗಡಿ ರಸ್ತೆ ಪೊಲೀಸರು ಮಹಜರು ಮಾಡಲು ಬೆಳಗಾವಿಗೆ ಇನ್ನೋವಾ ಖಾಸಗಿ ಕಾರನ್ನು ಬಾಡಿಗೆ ತೆಗೆದುಕೊಂಡು ತೆರಳಿದ್ದರು.
Recommended Video
ಪಿಎಸ್ಐ ಸುಧಾ, ಮುಖ್ಯಪೇದೆ ಮಹೇಶ್, ಇತರೆ ಸಿಬ್ಬಂದಿ ಹಾಗೂ ಚಾಲಕ ಮೋಹನ್ ತೆರಳಿದ್ದರು. ಎದುರಿನಿಂದ ಬರುತ್ತಿದ್ದ ಲಾರಿ ಹಾಗೂ ಇನ್ನೋವಾ ನಡುವೆ ಅಪಘಾತ ಸಂಭವಿಸಿ ಪಿಎಸ್ಐ ಸುಧಾ ಸೇರಿ ಮೂವರುಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಗಾಯಾಳುಗಳಿಗೆ ಯಾವುದೇ ಪ್ರಾಣಾಪಾಯವಿಲ್ಲ, ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.