ಹೋರಾಟದಿಂದಲೇ ಕರವೇ ಯುವಜನರನ್ನು ಸಂಘಟಿಸಿದೆ: ಚನ್ನಯ್ಯ ಶ್ರೀ
ಬೆಂಗಳೂರು ಜೂ. 20: ಕನ್ನಡ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ)ಯು ಕನ್ನಡಪರ ಕಾರ್ಯಗಳಿಂದಲೇ ಯುವಮೂಹವನ್ನು ಸಂಘಟಿಸಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ನಾಡು-ನುಡಿಯ ಸೇವೆ, ಚಳವಳಿಯಿಂದಲೇ ಗುರುತಿಸಿಕೊಂಡಿದ್ದಾರೆ ಎಂದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಶುಕ್ರವಾರ ನಗರದ ಗಾಂಧಿಭವನದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ 55ನೇ ಜನ್ಮದಿನ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯಪುಸ್ತಕ ವಿವಾದ: ಬೊಮ್ಮಾಯಿ ಮಧ್ಯಪ್ರವೇಶಕ್ಕೆ ಕರವೇ ಆಗ್ರಹ
ಟಿ.ಎ. ನಾರಾಯಣಗೌಡರಲ್ಲಿ ಇರುವ ಕನ್ನಡ ನಾಡು- ನುಡಿ ಕುರಿತಾದ ಬದ್ಧತೆ ಅಪಾರ. ಕನ್ನಡದ ಯುವಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಅವರಿಗಿದೆ. ಕನ್ನಡ ಅಸ್ಮಿತೆಗೆ ಧಕ್ಕೆ ಉಂಟಾದರೆ ರಾಜಿರಹಿತ ಹೋರಾಟ ಮಾಡಿಕೊಂಡು ಬಂದಿರುವ ಅವರು ಆ ಗುಣದಿಂದಲೇ ಕರವೇ ಸಂಘಟನೆ ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು.
ಒಳಿತಿಗಾಗಿ ಸಂಘ-ಸಂಸ್ಥೆ ಸ್ಥಾಪನೆ: ಶ್ರೀಗಳ ಶ್ಲಾಘನೆ
ಕರ್ನಾಟಕದ ಅಭ್ಯುದಯದಲ್ಲಿ ಚಳವಳಿಗಳ ಪಾತ್ರ ಬಹಳ ಪ್ರಮುಖವಾದದು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಮತ್ತವರ ಒಡನಾಡಿಗಳು ರೈತ ಸಂಘವನ್ನು ಕಟ್ಟಿ, ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಹೋರಾಟ ಮಾಡಿದವರು. ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ ಬಿ.ಕೃಷ್ಣಪ್ಪನವರು ದಲಿತರಿಗೆ ಘನತೆಯ ಬದುಕು ತಂದು ಕೊಡುವಲ್ಲಿ ಅಪಾವಾಗಿ ಶ್ರಮಿಸಿದವರು. ಅದೇ ರೀತಿ ಇಂದು ಕರವೇ ಮೂಲಕ ಕನ್ನಡಿಗರಿಗೆ, ಕನ್ನಡಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿರುವವರ ಪೈಕಿ ನಾರಾಯಣಗೌಡರು ಒಬ್ಬರು ಎಂದು ಶ್ಲಾಘಿಸಿದರು.
ಕರವೇಯಿಂದ #ಸಂಸ್ಕೃತವಿವಿಬೇಡ ಟ್ವಿಟ್ಟರ್ ಅಭಿಯಾನ ಯಶಸ್ವಿ
ಈ ವೇಳೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಜನ್ಮದಿನದ ಪ್ರಯುಕ್ತ ಈ ಬಾರಿ ನೂರಾರು ಕಾರ್ಯಕರ್ತರು ಕಿದ್ವಾಯಿ ಆಸ್ಪತ್ರೆ ರಕ್ತನಿಧಿಗೆ ರಕ್ತ ನೀಡುತ್ತಿದ್ದಾರೆ. ನೀವು ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿದರೆ ಅಲ್ಲಿ ಸಾವಿರಾರು ಕ್ಯಾನ್ಸರ್ ರೋಗಿಗಳನ್ನು ನೋಡಿದರೆ ಬದುಕು ಇಷ್ಟೇನಾ ಎಂದು ಅನ್ನಿಸದಿರದು. ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳು ಬಡವರು. ಅಂಥ ರೋಗಿಗಳಿಗೆ ಅನುಕೂಲ ಮಾಡಿಕೊಡಲು ಕಿದ್ವಾಯಿ ಆಸ್ಪತ್ರೆಗೆ ರಕ್ತ ನೀಡುತ್ತಿದ್ದೇವೆ ಎಂದು ಇಂದಿನ ಕಾರ್ಯಕ್ರಮ ಕುರಿತು ಅವರು ವಿವರಿಸಿದರು.
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕರವೇ ಕಾರ್ಯಕರ್ತರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬನವಾಸಿ ಬಳಗದ ಮುಖಂಡ ಗಣೇಶ್ ಚೇತನ್, ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪ್ರಕಾಶ್ ಮೂರ್ತಿ, ಕರವೇ ರಾಜ್ಯ ಉಪಾಧ್ಯಕ್ಷರಾದ ದಾ.ಪಿ.ಆಂಜನಪ್ಪ, ಬಿ.ಎಚ್.ಸತೀಶ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ಬಸವರಾಜ ಪಡುಕೋಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಮತ್ತಿತರರು ಉಪಸ್ಥಿತರಿದ್ದರು.
(ಒನ್ಇಂಡಿಯಾ ಸುದ್ದಿ)