ಸರ್ ಎಂ. ವಿಶ್ವೇಶ್ವರಯ್ಯ ಸ್ಮರಣಾರ್ಥ ಎಜುಕೇಷನ್ ಕಾರಿಡಾರ್
ಬೆಂಗಳೂರು, ಸೆ. 15: ಸರ್.ಎಂ. ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ಮುದ್ದೇನಹಳ್ಳಿ - ನಂದಿ ಪ್ರದೇಶದಲ್ಲಿ ಎಜುಕೇಷನ್ ಕಾರಿಡಾರ್ ನಿರ್ಮಾಣದ ಯೋಜನೆ ರೂಪಿಸಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯಲ್ಲಿ ಮಂಗಳವಾರ ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಸರ್.ಎಂ. ವಿಶ್ವೇಶ್ವರಯ್ಯ ಇಂಟರ್ನ್ಯಾಷನ್ ಇನ್ಸ್ಟಿಟ್ಯೂಟ್ ಫಾರ್ ಸೂಪರ್ ಟ್ರೈನರ್ ಸಂಸ್ಥೆ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿ ಬಳಿಕ ಮಾತನಾಡಿದರು.
ಕೆಆರ್ ಎಸ್ ನಲ್ಲಿ ನಾಲ್ವಡಿಗೆ ಸರಿಸಮನಾದ ಎಂವಿ ಪ್ರತಿಮೆ ಏಕೆ ಬೇಡ?
ಇಡೀ ವಿಶ್ವಕ್ಕೆ ಕೀರ್ತಿ ತಂದುಕೊಟ್ಟ ವಿಶ್ವೇಶ್ವರಯ್ಯ ಅವರು ನಮ್ಮ ಜಿಲ್ಲೆಯಲ್ಲೆಯವರು ಎಂಬ ಹೆಮ್ಮೆ ಇದೆ. ಇವರ ಹುಟ್ಟೂರನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಕಲ್ಪನೆ ಹೊಂದಿದ್ದೇನೆ. ಅದರ ಭಾಗವಾಗಿ ಇಲ್ಲಿ ಎಜುಕೇಷನ್ ಕಾರಿಡಾರ್ ನಿರ್ಮಾಣ ಮಾಡಲಾಗುವುದು. ಜೊತೆಗೆ ಬೃಹತ್ ವಿಶ್ವವಿದ್ಯಾಲಯದ ನಿರ್ಮಾಣದ ಬಗ್ಗೆಯೂ ಸರಕಾರದ ಗಮನಕ್ಕೆ ತಂದಿದ್ದೇನೆ. ಒಟ್ಟಾರೆ ವಿಶ್ವೇಶ್ವರಯ್ಯ ಅವರ ಹುಟ್ಟೂರು ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗುವುದು ಎಂದರು.
ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿ ಸಹ ಅಷ್ಟೆ ಮುಖ್ಯ. ಶಿಕ್ಷಣ ಇಲ್ಲದೆ ಕೌಶಲ್ಯ ಇಲ್ಲ, ಕೌಶಲ್ಯ ಭರಿತ ಶಿಕ್ಷಣ ನೀಡುವ ಗುರಿಯೊಂದಿಗೆ ಈ ಭಾಗದಲ್ಲಿ ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಶಿಕ್ಷಣ ಮುಂದುವರೆಸದ, ಉದ್ಯೋಗ ವಂಚಿತ ಯುವಕರು ಇಲ್ಲಿ ಕೌಶಲ್ಯ ತರಬೇತಿ ಪಡೆದುಕೊಂಡು ಉದ್ಯೋಗ ಪಡೆಯುವಂತಾಗಲಿ ಎಂದರು.
ವಿಶ್ವೇಶ್ವರಯ್ಯ ಅವರು ತಮ್ಮ ದೂರ ದೃಷ್ಟಿಯಿಂದ ಕನ್ನಂಬಾಡಿ ಕಟ್ಟೆ ಕಟ್ಟಿಸಿದರು. ಬಡತನದ ಕುಟುಂಬದಲ್ಲಿ ಹುಟ್ಟಿದವರು ತಮ್ಮ ಪ್ರತಿಭೆ ಮೂಲಕ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.