ಭಾನುವಾರ ಬೆಂಗಳೂರಿನಲ್ಲಿ ಡಾ. ಎಂ ಚಿದಾನಂದಮೂರ್ತಿ ಅಂತ್ಯಕ್ರಿಯೆ
ಬೆಂಗಳೂರು, ಜನವರಿ 11: ಶನಿವಾರ ಬೆಳಿಗ್ಗೆ ನಿಧನರಾದ ಹಿರಿಯ ಸಾಹಿತಿ ಡಾ. ಎಂ ಚಿದಾನಂದಮೂರ್ತಿ ಅವರ ಅಂತ್ಯಕ್ರಿಯೆ ಜನವರಿ 12 ರಂದು ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ನಿಧನ
ಚಿದಾನಂದಮೂರ್ತಿ ಅವರ ಕೊನೆ ಆಸೆಯಂತೆ ಅವರ ದೇಹವನ್ನು ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ. ವಿಜಯನಗರದ ಹಂಪಿನಗರದ 3 ನೇ ಕ್ರಾಸ್ನ ಚಿದಾನಂದಮೂರ್ತಿ ಅವರ ಮನೆಯಲ್ಲಿ ಶನಿವಾರ ಬೆಳಿಗ್ಗೆ 9 ರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ರಾಜಕೀಯ ಮುಖಂಡರು, ಸಾಹಿತಿಗಳು, ಗಣ್ಯರು ಹಾಗೂ ಅವರ ವಿದ್ಯಾರ್ಥಿಗಳು ಅಪಾರ ಪ್ರಮಾಣದಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು.
ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಚಿದಾನಂದಮೂರ್ತಿ ಅವರು ತಮ್ಮ ತಮ್ಮ 88 ನೇ ವಯಸ್ಸಿನಲ್ಲಿ ಶನಿವಾರ ನಸುಕಿನ ವೇಳೆ 4 ಕ್ಕೆ ನಿಧನರಾದರು. ಮಗ ವಿನಯಕುಮಾರ್ ಹಾಗೂ ಮಗಳು ಶೋಭಾ ಅವರನ್ನು ಚಿದಾನಂದಮೂರ್ತಿ ಅಗಲಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆಯವರಾದ ಚಿದಾನಂದಮೂರ್ತಿಯವರು ಮೇ 10, 1931 ರಲ್ಲಿ ಜನಿಸಿದ್ದರು. ಕನ್ನಡದ ಲೇಖಕ, ವಿದ್ವಾಂಸ, ಸಂಶೋದಕ ಹಾಗು ಇತಿಹಾಸತಜ್ಞರಾಗಿ ಜನಮಾನಸರಾಗಿದ್ದರು. ಇವರು ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಗಳಿಸಲು ಮಾಡಿದ್ದ ಚಳವಳಿಗೆ ಪ್ರಸಿದ್ಧರಾಗಿದ್ದರು.