''ಎಲ್ ಪಿಜಿ ಬೆಲೆ ಏರಿಕೆ, ನಿರ್ಮಲಾ ಆರ್ಥಿಕತೆ ಮುಳುಗಿಸಿದ್ರಲ್ಲಕ್ಕಾ''
ಬೆಂಗಳೂರು, ಫೆಬ್ರವರಿ 18: ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಏರಿಕೆ ಮಾಡಿರುವ ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಿಲಿಂಡರ್ ಶ್ರಾದ್ಧ ಕಾರ್ಯದ ರೀತಿಯಲ್ಲಿ ಪೂಜೆ ಮಾಡಿ, ಸಿಲಿಂಡರ್ ಉರುಳು ಸೇವೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ಬೆಂಗಳೂರು ಘಟದ ಅಧ್ಯಕ್ಷರಾದ ಮೋಹನ್ ದಾಸರಿಯವರು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೂ ಆರು ಬಾರಿ ಗೃಹ ಬಳಕೆಯ ಎಲ್ಪಿಜಿ ಬೆಲೆ ಏರಿಕೆ ಮಾಡಲಾಗಿದ್ದು, ಫೆಬ್ರವರಿ 12ರಂದು ಒಂದೇ ಬಾರಿಗೆ 144.5 ರೂಗಳಷ್ಟು ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಆಮ್ ಆದ್ಮಿಗಳು
ಸಬ್ಸಿಡಿ ಕೊಡುತ್ತಿದ್ದೇವೆಂಬ ವಿತಂಡ ವಾದವನ್ನು ಸರ್ಕಾರ ಮುಂದಿಟ್ಟು ನುಣುಚಿಕೊಳ್ಳುವ ಖಯಾಲಿಯಲ್ಲಿ ತೊಡಗಿಕೊಂಡಿದೆ. ಆದರೆ, ಸರ್ಕಾರ ನೀಡುವ ಸಬ್ಸಿಡಿಯ ಹಣವೂ ಜನರ ತೆರಿಗೆಯ ಹಣವೇ ಎಂಬುದನ್ನು ಕೇಂದ್ರ ಸರ್ಕಾರ ಮರೆತಂತಿದೆ. ಸಬ್ಸಿಡಿಯಿಂದ ಜನರಿಗೆ ಉಪಯೋಗವಾಗುತ್ತಿದ್ದರೂ, ಬೆಲೆ ಹೆಚ್ಚಳ ಮಾಡಿ ಸಬ್ಸಿಡಿ ಕೊಡುವುದರಿಂದ ಖಾಸಗಿ ಒಡೆತನದ ಮಾಲೀಕರ ಖಜಾನೆ ತುಂಬುತ್ತದೆಯೇ ಹೊರತು, ದೇಶದ ಆರ್ಥಿಕತೆಗೆ ಯಾವ ಉಪಯೋಗವೂ ಇಲ್ಲ ಎಂದು ತಿಳಿಸಿದರು.
ಸ್ಮೃತಿ ಇರಾನಿಗೂ ಎಎಪಿ ಟಾಂಗ್
2014ರಲ್ಲಿ ಯುಪಿಎ ಸರ್ಕಾರ LPG ಬೆಲೆಯನ್ನು ಕೇವಲ 11 ರೂಗಳಷ್ಟು ಏರಿಕೆ ಮಾಡಿದ್ದಾಗ, ಬೀದಿಗಿಳಿದು ಸರ್ಕಾರದ ವಿರುದ್ಧ ಸರಣಿ ಹೋರಾಟಗಳನ್ನು ಮಾಡಿದ್ದ ಸಂಸದೆ ಸ್ಮೃತಿ ಇರಾನಿಯವರು ಇಂದು ತಮ್ಮದೇ ಸರ್ಕಾರ 144.5 ರೂಪಾಯಿಗಳಷ್ಟು ಅಧಿಕ ಮೊತ್ತದ ಬೆಲೆ ಏರಿಕೆ ಮಾಡಿದ್ದರೂ ತುಟಿ ಬಿಚ್ಚದೇ ಕಾಣೆಯಾಗಿದ್ದಾರೆ. ಅವರನ್ನೂ "ಸ್ಮೃತಿ ಇರಾನಿ ಅಕ್ಕಾ ಎಲ್ಲಿದ್ದೀಯಕ್ಕಾ" ಎಂದು ಹುಡುಕಬೇಕಾಗಿದೆ ಎಂದು ಅವರು ಕುಟುಕಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಲೇ ಇವೆ. ಕಳೆದ ಮೂರು-ನಾಲ್ಕು ತಿಂಗಳಲ್ಲಿ ಏರಿಕೆಯಾಗಿದ್ದ ಈರುಳ್ಳಿ ಬೆಲೆಯನ್ನು ಸುಧಾರಿಸಲಾಗದ ಬೆಲೆ ಏರಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.
ಹಾಲಿನ ಬೆಲೆ ಹೆಚ್ಚಳ ಮಾಡಿದೆ
ರಾಜ್ಯ ಸರ್ಕಾರವು ಹಾಲಿನ ಬೆಲೆ ಹೆಚ್ಚಳ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ, ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರವನ್ನು ಹೆಚ್ಚಿಸುವುದಾಗಿ ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಎಲ್ಪಿಜಿ ಬೆಲೆ ಹೆಚ್ಚಿಸಿ ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಮುಖ್ಯ ಉದ್ದೇಶ ದೇಶದ ಜನರನ್ನು ತನ್ನ ದುರಾಡಳಿತದಿಂದ ಹೈರಾಣಾಗುವಂತೆ ಮಾಡುವುದೇ ಎಂದು ಕಾಣುತ್ತದೆ. ತರಕಾರಿ, ದಿನಸಿ ಸಾಮಗ್ರಿಗಳ ಬೆಲೆಗಳು ಗಗನಕ್ಕೇರುತ್ತಿವೆ. ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವ ಇಚ್ಛಾಶಕ್ತಿ ಕೇಂದ್ರ ಸರ್ಕಾರಕ್ಕೆ ಇದ್ದಂತಿಲ್ಲ. ಸಗಟುಬೆಲೆ ಹಣದುಬ್ಬರ ಶೇ.1.92ರಷ್ಟು ಹೆಚ್ಚಾಗಿದೆ ಎಂದು ಮೋಹನ್ ದಸರಿಯವರು ಅರೋಪಿಸಿದರು.
25 ಲಕ್ಷ ಜನರನ್ನು ತಲುಪಿದ ಆಪ್ ನ 'ಹೊಸ ಬೆಂಗಳೂರಿಗಾಗಿ ನಿರ್ಮಾಣ' ಪಾದಯಾತ್ರೆ
ಜನಸಾಮಾನ್ಯರ ಕಿಸೆಗೆ ಕನ್ನ ಹಾಕುತ್ತಿದೆ
ಇಷ್ಟೆಲ್ಲಾ ಸಮಸ್ಯೆಗಳು ಜನರ ಬದುಕನ್ನು ಅಸ್ಥವ್ಯಸ್ಥ ಗೊಳಿಸುವಂತಹ ಪರಿಸ್ಥಿತಿ ದೇಶದಲ್ಲಿದ್ದರೂ, ಜನಸಾಮಾನ್ಯರ ಕಿಸೆಗೆ ಕನ್ನ ಹಾಕುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿವೆ.
•ದಿನ ಬಳಕೆ ಸಾಮಗ್ರಿಗಳ ಮೇಲಿನ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು.
•ಬಡವರು ಮತ್ತು ಸಾಮಾನ್ಯ ಜನರು ಕೊಳ್ಳಲು ಸಾಧ್ಯವಷ್ಟು ಹಂತಕ್ಕೆ ದಿನೋಪಯೋಗಿ ವಸ್ತುಗಳ ಬೆಲೆಯನ್ನು ಇಳಿಸಬೇಕು.
•ಆರ್ಥಿಕತೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದು ರಾಜಕೀಯ ಚಟುವಟಿಕೆಗಳ ಉಸ್ತುವಾರಿ ವಿ. ಲಕ್ಷ್ಮೀಕಾಂತ್ ರಾವ್ ಆಗ್ರಹಿಸಿದರು.
ನಿರ್ಮಲಾ ಬೇಜವಾಬ್ದಾರಿಯುತ ಹೇಳಿಕೆ
ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು "ನಾನು ಈರುಳ್ಳಿ ತಿನ್ನುವುದಿಲ್ಲ, ಬೆಲೆ ಏರಿಕೆ ಇಂದ ನನಗೇನು ಸಮಸ್ಯೆ ಇಲ್ಲ" ಎಂಬರ್ಥದ ಬೇಜವಾಬ್ದಾರಿ ಹೇಳಿಕೆಯನ್ನು ಸಂಸತ್ ನಲ್ಲಿಯೇ ಕೊಟ್ಟಿದ್ದರು. ಇಂತಹ ಹೇಳಿಕೆಗಳು ಬಿಜೆಪಿ ಸಂಸದರಿಂದ ಸಾರಾಸಗಟಾಗಿ ಬರುತ್ತಿರುವುದು ದೇಶವನ್ನು ಮುನ್ನಡೆಸಲಾಗದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸುತ್ತದೆ.
ಪ್ರತಿಭಟನೆಯಲ್ಲಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್, ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ, ಪಕ್ಷದ ಮುಖಂಡರಾದ ರೇಣುಕಾ ವಿಶ್ವನಾಥನ್, ರಾಜಕೀಯ ಚಟುವಟಿಕೆಗಳ ಉಸ್ತುವಾರಿಗಳಾದ ಲಕ್ಷ್ಮೀಕಾಂತ್ ರಾವ್, ಚನ್ನಪ್ಪ ನಲ್ಲೂರು, ಜಗದೀಶ್ ಚಂದ್ರ, ಆಯುಬ್ ಖಾನ್ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.