ಕೋವಿಡ್ ಭೀತಿ; ಈ ಬಾರಿ ಕಡಲೆಕಾಯಿ ಪರಿಷೆಯೂ ಇಲ್ಲ!
ಬೆಂಗಳೂರು, ನವೆಂಬರ್ 19: ಕಾರ್ತಿಕ ಮಾಸ ಬರುತ್ತಿದ್ದಂತೆ ಬೆಂಗಳೂರಿನ ಜನರು ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಎಂದು? ಎಂಬ ಲೆಕ್ಕಾಚಾರ ಆರಂಭಿಸುತ್ತಾರೆ. ಕರಗ ಬಿಟ್ಟರೆ ಬೆಂಗಳೂರಲ್ಲಿ ನಡೆಯುವ ಬಹುದೊಡ್ಡ ಉತ್ಸವ ಕಡಲೆಕಾಯಿ ಪರಿಷೆ.
ಕೋವಿಡ್ ಹಿನ್ನಲೆಯಲ್ಲಿ ಈ ಬಾರಿ ಹಲವು ಬದಲಾವಣೆಯಾಗಿದೆ. ಬೆಂಗಳೂರು ಕರಗವನ್ನು ಸಂಪ್ರದಾಯಿಕವಾಗಿ ಮಾತ್ರ ಆಚರಣೆ ಮಾಡಲು ಅವಕಾಶ ನೀಡಲಾಗಿತ್ತು. ಈಗ ಕಡಲೆಕಾಯಿ ಪರಿಷೆಯನ್ನು ರದ್ದು ಮಾಡಲಾಗುತ್ತಿದೆ.
ಕೊನೆಯ ಕಾರ್ತಿಕ ಸೋಮವಾರ ಬಸವನಗುಡಿಯ ಬಸವಣ್ಣ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಈ ಬಾರಿಯ ಪರಿಷೆ ದೇವಾಲಯದ ಆವರಣಕ್ಕೆ ಮಾತ್ರ ಸೀಮಿತವಾಗಲಿದೆ. ಲಕ್ಷಾಂತರ ಜನರು ಈ ಬಾರಿ ಪರಿಷೆಗೆ ಬರುವಂತಿಲ್ಲ.
ಅನಂತ ಕುಮಾರ್ ಇಲ್ಲದ ಬಸವನಗುಡಿ ಕಡಲೆಕಾಯಿ ಪರಿಷೆ
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ಇಲಾಖೆ ದೇವಾಲಯದ ಆವರಣದಲ್ಲಿ ಮಾತ್ರ ಕಡಲೆಕಾಯಿ ಪರಿಷೆ ನಡೆಸಲು ತೀರ್ಮಾನಿಸಿದೆ. ದೇವಾಲಯದ ಅರ್ಚಕರು, ಸಿಬ್ಬಂದಿ ಉಪಸ್ಥಿತಿಯಲ್ಲಿ ಪರಿಷೆ ನಡೆಯಲಿದೆ.
ಪರಿಷೆ ಆರಂಭ, ಕಡಲೆಕಾಯಿ ಕೊಳ್ಳಲು ಬನ್ನಿ
ಲಕ್ಷಾಂತರ ಜನರು ಸೇರುವ ಉತ್ಸವ
ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಮೂರು ದಿನಗಳ ಕಾಲ ನಡೆಯುತ್ತಿತ್ತು. ಒಂದು ವಾರದ ಮೊದಲು ಬುಲ್ ಟೆಂಪಲ್ ರಸ್ತೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ಕಡಲೆಕಾಯಿ ಮಾರುವ ಸಾಲು-ಸಾಲು ಅಂಗಡಿಗಳು ಬಂದಿರುತ್ತಿದ್ದವು. ಲಕ್ಷಾಂತರ ಭಕ್ತರು ಮೂರು ದಿನಗಳ ಪರಿಷೆಗೆ ಸಾಕ್ಷಿಯಾಗುತ್ತಿದ್ದರು.
ಎಲ್ಲವನ್ನು ಬದಲಾಯಿಸಿದ ಕೋವಿಡ್
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸಾಂಪ್ರದಾಯಿಕವಾಗಿ ಈ ಬಾರಿ ಕಡಲೆಕಾಯಿ ಪರಿಷೆ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ರಸ್ತೆ ಬದಿಯ ಸಾಲು-ಸಾಲು ಅಂಗಡಿಗಳು ಈ ಬಾರಿ ಕಾಣಿಸುವುದಿಲ್ಲ. ದೇವಾಲಯದ ಆವರಣಕ್ಕೆ ಮಾತ್ರ ಪರಿಷೆ ಸೀಮಿತ.
ಜನರಿಗೆ ಜಾಗೃತಿ ಮೂಡಿಸಿ
ಬುಲ್ ಟೆಂಪಲ್ ರಸ್ತೆಯಲ್ಲಿ ಅಂಗಡಿಗಳನ್ನು ಹಾಕದಂತೆ, ಕಡಲೆಕಾಯಿ ವ್ಯಾಪಾರ ಮಾಡದಂತೆ ಅರಿವು ಮೂಡಿಸಬೇಕು ಎಂದು ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ದೊಡ್ಡ ಗಣಪತಿ ಮತ್ತು ಸಮೂಹ ದೇವಾಲಯಗಳ ಕಾರ್ಯ ನಿರ್ವಹಣಾಧಿಕಾರಿಗಳು ಮನವಿ ಮಾಡಿದ್ದಾರೆ.
ಬೇರೆ ರಾಜ್ಯದ ವ್ಯಾಪಾರಿಗಳು
ಕಡಲೆಕಾಯಿ ಪರಿಷೆಗೆ ಬೆಂಗಳೂರು ಸುತ್ತಮುತ್ತಲಿನ ವ್ಯಾಪಾರಿಗಳು ಮಾತ್ರವಲ್ಲ ಬೇರೆ-ಬೇರೆ ರಾಜ್ಯದ ವ್ಯಾಪಾರಿಗಳು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಯಾವುದೇ ಸಂಭ್ರಮ ಇರುವುದಿಲ್ಲ. ಕೋವಿಡ್ ಹಿನ್ನಲೆಯಲ್ಲಿ ಪರಿಷೆಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತದೆ.
ಬೆಂಗಳೂರು ಅಗ್ರಸ್ಥಾನದಲ್ಲಿದೆ
ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿರುವ ನಗರ ಬೆಂಗಳೂರು. ಬುಧವಾರವೂ ನಗರದಲ್ಲಿ 933 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,59,539ಕ್ಕೆ ಏರಿಕೆಯಾಗಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 17,703.