ಅಗಸರು, ಕ್ಷೌರಿಕರ ಪರ್ಯಾಯ ವೃತ್ತಿಗೆ ವಿಶೇಷ ಸಾಲ
ಬೆಂಗಳೂರು, ಜೂ.20: ಮಡಿವಾಳ ಮತ್ತು ಸವಿತಾ ಸಮಾಜದವರು ವಂಶಪಾರಂಪರ್ಯವಾಗಿ ಬಂದಿರುವ ತಮ್ಮ ಕುಲಕಸುಬು ಬಿಟ್ಟು ಬೇರೆ ವೃತ್ತಿಯನ್ನು ಕೈಗೊಳ್ಳಲು ಬಯಸಿದರೆ ಅಂತಹವರಿಗೆ ಆರ್ಥಿಕ ನೆರವು ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರು ತಿಳಿಸಿದ್ದಾರೆ.
ಏನಪ್ಪಾ ಇದು ಯೋಜನೆ ಅಂದರೆ ಮಡಿವಾಳ (ಅಗಸರು) ಮತ್ತು ಸವಿತಾ (ಕ್ಷೌರಿಕರು) ಸಮಾಜದವರು ಮೂಲ ಕಸುಬನ್ನು ಬಿಟ್ಟು ಪರ್ಯಾಯ ವೃತ್ತಿ ಮಾಡುವುದಾದರೆ ರಾಜ್ಯ ಸರಕಾರವು ಅಂತಹವರಿಗೆ ಶೇ. 4ರಷ್ಟು ಬಡ್ಡಿದರದಲ್ಲಿ 5 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಪ್ಯಾಕೇಜ್ ಇದಾಗಿದೆ.
ಜೀವನೋಪಾಯಕ್ಕೆ ಪರ್ಯಾಯ ವೃತ್ತಿ ಕೈಗೊಳ್ಳುವವರಿಗೆ ದೇವರಾಜು ಅರಸು ಅಭಿವೃದ್ಧಿ ನಿಗಮದ ವತಿಯಿಂದ 1 ಲಕ್ಷ ರೂ ನಿಂದ 5 ಲಕ್ಷ ರೂ ವರೆಗೆ ಸಬ್ಸಿಡಿ ಸಹಿತ ಸಾಲ ದೊರೆಯಲಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸವ ಸಲುವಾಗಿ ತಲಾ 5 ಕೋಟಿ ರೂ ಮೀಸಲಿಡಲಾಗಿದೆ. (ಸಾಲ ಪಡೆಯುವುದು ಒಂದು ಅದ್ಭುತ ಕಲೆ)
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಆಂಜನೇಯ ಅವರು ಮಡಿವಾಳ ಮತ್ತು ಸವಿತಾ ಸಮಾಜದವರು ಕುಲಕಸುವಿಗೆ ಪರ್ಯಾಯವಾಗಿ ಅಂದರೆ ಹೈನುಗಾರಿಕೆ, ವ್ಯಾಪಾರ, ಕಂಒಪ್ಯೂಟರ್, ಜೆರಾಕ್ಸ್ ಮಳಿಗೆ ಮುಂತಾದವನ್ನು ಪ್ರಾರಂಭಿಸಿದರೆ ಶೇ. 4 ರ ಬಡ್ಡಿ ದರದಲ್ಲಿ ಸಾಲ ನೀಡುವ ಪ್ಯಾಕೇಜ್ ರೂಪಿಸಲಾಗಿದೆ ಎಂದು ವಿವರ ನೀಡಿದ್ದಾರೆ.
ಹಾಗೆಯೇ, ಎರಡೂ ಸಮುದಾಯದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇಲ್ಲದಿದ್ದರೆ ವಿದ್ಯಾಸಿರಿ ಯೋಜನೆಯಡಿ ಮಾಸಿಕ 1500 ರೂ ಸಹಾಯಧನ ನೀಡಲು ಸರಕಾರ ನಿರ್ಧರಿಸಿದೆ.