ಮದುವೆ ಬೇಡ ಎಂದಿದ್ದಕ್ಕೆ ರಸ್ತೆಯಲ್ಲೇ ವಿಷ ಕುಡಿದರು
ಬೆಂಗಳೂರು, ಅಕ್ಟೋಬರ್. 09: : ಅವರದ್ದು ನಿಷ್ಕಳಂಕ ಪ್ರೀತಿ. ಒಟ್ಟಿಗೆ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣವನ್ನು ಪಡೆದುಕೊಂಡಿದ್ದರು. ಬಾಲ್ಯ ಸ್ನೇಹಿತರು ಇದೀಗ ಪ್ರೇಮಿಗಳಾಗಿ ಬದಲಾಗಿದ್ದರು. ಚಿಕ್ಕ ವಯಸ್ಸು ನಿಮಗೆ ಈಗಲೇ ಮದುವೆ ಬೇಡ ಎಂದು ಮನೆಯವರು ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿದ ಯುವಜೋಡಿ ಆತ್ಮಹತ್ಯೆಗೆ ಶರಣಾಗಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಅಕ್ಟೋಬರ್ 6 ರಂದು ರಾತ್ರಿ ವಿಷ ಕುಡಿ ಕುಡಿದು ಅಸ್ವಸ್ಥಗೊಂಡಿದ್ದ ಪ್ರೇಮಿಗಳು ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಮರಿಯಪ್ಪನಪಾಳ್ಯದ ಸೋನಿಯಾ (19) ಹಾಗೂ ಆಂದ್ರಹಳ್ಳಿಯ ಭರತ್ (21) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.[ರಾಜ್ಯದಲ್ಲಿ ಪ್ರಸಕ್ತ ವರ್ಷಎಲ್ಲೆಲ್ಲಿ,ಎಷ್ಟೆಷ್ಟು ರೈತರು ಆತ್ಮಹತ್ಯೆಗೆ ಶರಣು?]
ಅ.6ರ ರಾತ್ರಿ 11.30ರ ಸುಮಾರಿಗೆ ರಾಜ್ಕುಮಾರ್ ರಸ್ತೆಗೆ ಬಂದಿದ್ದ ಈ ಪ್ರೇಮಿಗಳು, ರಾಘವೇಂದ್ರಸ್ವಾಮಿ ದೇವಸ್ಥಾನದ ಬಳಿ ವಿಷ ಕುಡಿದು ಪೋಷಕರಿಗೆ ಕರೆ ಮಾಡಿದ್ದರು.
ಕೂಡಲೇ ಸ್ಥಳಕ್ಕೆ ಬಂದ ಇಬ್ಬರ ಪೋಷಕರು, ಅಸ್ವಸ್ಥರಾಗಿ ರಸ್ತೆ ಮೇಲೆ ಬಿದ್ದಿದ್ದ ಮಕ್ಕಳನ್ನು ಹತ್ತಿರದ ಸುಗುಣ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸೋನಿಯಾ ಅವರನ್ನು ಸಂಜೀವಿನಿ ಆಸ್ಪತ್ರೆಗೂ, ಭರತ್ ಅವರನ್ನು ಮಣಿಪಾಲ ಆಸ್ಪತ್ರೆಗೂ ವರ್ಗಾಯಿಸಲಾಗಿತ್ತು. ಆದರೆ ಇಬ್ಬರ ಜೀವವನ್ನು ಕುಡಿದಿದ್ದ ವಿಷ ಕಿತ್ತುಕೊಂಡಿತ್ತು .
ಇಬ್ಬರ ಕುಟುಂಬವೂ ಮರಿಯಪ್ಪನಪಾಳ್ಯದಲ್ಲೇ ವಾಸವಿತ್ತು. ಹೀಗಾಗಿ ಬಾಲ್ಯದಿಂದಲೂ ಸೋನಿಯಾ ಅವರ ಪರಿಚಯವಿತ್ತು. ಸಹಪಾಠಿಗಳಾಗಿದ್ದ ಇಬ್ಬರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಮುಗಿಸಿದ್ದರು. ನಂತರ ಪರಸ್ಪರ ನಡುವೆ ಪ್ರೀತಿ ಬೆಳೆದಿತ್ತು. ಡಿಪ್ಲೊಮಾ ಮುಗಿಸಿದ ಸೋನಿಯಾ, ಎರಡು ವಾರಗಳಿಂದ ಖಾಸಗಿ ಕಂಪೆನಿ ಯೊಂದರಲ್ಲಿ ತರಬೇತಿಗೆ ಹೋಗುತ್ತಿದ್ದರು. ಪಿಯುಸಿಗೆ ವ್ಯಾಸಂಗ ನಿಲ್ಲಿಸಿದ ಭರತ್ ಕೆಲಸದ ಹುಡುಕಾಟದಲ್ಲಿದ್ದರು.[ಮಗನ ಸಾವು ತಾಳದೆ ದಂಪತಿಗಳಿಬ್ಬರ ಆತ್ಮಹತ್ಯೆ]
ತಮ್ಮ ಪ್ರೀತಿಯನ್ನು ಸೋನಿಯಾ ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ, 'ಇಬ್ಬರದ್ದೂ ಚಿಕ್ಕ ವಯಸ್ಸು. ಹೀಗಾಗಿ ಈಗಲೇ ಮದುವೆ ಮಾಡುವುದಿಲ್ಲ' ಎಂದು ಪಾಲಕರು ಹೇಳಿದ್ದರು. ಇದಾದ ಕೆಲ ದಿನದಲ್ಲೇ ಭರತ್ ಕುಟುಂಬ ವಾಸ್ತವ್ಯವನ್ನು ಆಂದ್ರಹಳ್ಳಿಗೆ ಬದಲಾಯಿಸಿತ್ತು. ತಮ್ಮ ಮದುವೆಗೆ ಪಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಭಾವಿಸಿದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಯ್ಯೋ ವಿಧಿಯೇ..