ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿದೆ ಒಂದು ರೋಚಕ ಲವ್ ಸ್ಟೋರಿ!
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಲೋಕ ಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದರ ಸೋರಿಕೆ ಹಿಂದೆ ಒಂದು ರೋಚಕ ಲವ್ ಸ್ಟೋರಿಯಿದೆ. ! ಸಿಸಿಬಿ ಪೊಲೀಸರ ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಗೂ ಲವ್ ಸ್ಟೋರಿಗೂ ಇರುವ ಸಂಬಂಧ ಹೊರ ಬಿದ್ದಿದೆ. ಲವರ್ ಗಾಗಿ ಲೀಕ್ ಆದ ಪ್ರಶ್ನೆ ಪತ್ರಿಕೆ ಆನಂತರ ಅದನ್ನು ದುಡ್ಡು ಮಾಡಲು ಬಳಸಿಕೊಂಡು ಸಿಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸಿಕ್ಕಿಬಿದ್ದವರು :
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಈವರೆಗೂ 24 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ 7 ಆರೋಪಿಗಳು ಸರ್ಕಾರಿ ಉದ್ಯೋಗಿಗಳು. ಈ ಸರ್ಕಾರಿ ಅಧಿಕಾರಿಗಳಲ್ಲಿ ಒಂದು ಲವ್ ಜೋಡಿ ಇದೆ. ಇನ್ನು ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಚಂದ್ರು ಮೊದಲ ಆರೋಪಿ., ರಾಚಪ್ಪ, ಪ್ರಥಮಮ ದರ್ಜೆ ಸಹಾಯಕ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಪ್ರಥಮ ದರ್ಜೆ ಸಹಾಯಕ ರಾಮಪ್ಪ ಹೆರಕಲ್, ಕೆಪಿಎಸ್ ಸಿ ಸ್ಟೆನೋಗ್ರಾಫರ್ ಸನಾ ಬೇಡಿ, ಹಾವೇರಿ ಸಿಎಆರ್ ಪೇದೆ ಮುಸ್ತಾಕ್ ಕ್ವಾಟಿನಾಯ್ಕ, ಕೆಪಿಎಸ್ ಸಿ ಪ್ರಥಮ ದರ್ಜೆ ಸಹಾಯಕ ಬಸವರಾಜ ಕುಂಬಾರ ಹಾಗೂ ಕೊರಟಗೆರೆ ಅಂಬೇಡ್ಕರ್ ವಸತಿ ಶಾಲೆ ದೈಹಿಕ ಶಿಕ್ಷಕ ವೆಂಕಟೇಶ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸರ್ಕಾರಿ ಅಧಿಕಾರಿಗಳು.
ಪ್ರಶ್ನೆ ಪತ್ರಿಕೆ ಲೀಕ್ ಗೆ ಕಾರಣ ಈ ಲವ್ ಸ್ಟೋರಿ :
ಕರ್ನಾಟಕ ಲೋಕ ಸೇವಾ ಅಯೋಗ ಪ್ರಥಮ ದರ್ಜೆ ಸಹಾಯಕರ ನೇಮಕ ಸಂಬಂಧ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮುನ್ನ ಸೋರಿಕೆಯಾಗಿತ್ತು. ಉಳ್ಳಾಲ ಉಪ ನಗರದಲ್ಲಿ ಚಂದ್ರು ಎಂಬ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಮನೆ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಪ್ರಶ್ನೆ ಪತ್ರಿಕೆ ಹಾಗೂ ನಗದು ಹಣ ವಶಪಡಿಸಿಕೊಂಡಿದ್ದರು. ಪ್ರಶ್ನೆ ಪತ್ರಿಕೆಯನ್ನು ಕೆಪಿಎಸ್ ಸಿ ಅಧಿಕಾರಿಗಳಿಗೆ ರವಾನಿಸಿ ಪರಿಶೀಲಿಸಿದಾಗ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಖಚಿತವಾಗಿತ್ತು. ಮುಂದಿನ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದು ಕೆಪಿಎಸ್ ಸಿ ಸ್ಟೆನೋಗ್ರಾಫರ್ ಸನಾಬೇಡಿ. ಹೌದು. ಸನಾ ಬೇಡಿ ತನ್ನ ಲವರ್ ಗಾಗಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಳು. ಆದರೆ ಅದು ಬೇರೆ- ಬೇರೆಯವರ ಕೈ ತಲುಪಿ ಹಣ ಗಳಿಕೆ ಮೂಲ ಮಾಡಿಕೊಂಡರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.
ಸ್ಟೆನೋ ಹಾಗೂ ಸೆಂಟ್ರಿ ಲವ್ :
ಕೆಪಿಎಸ್ ಸಿ ಸ್ಟೆನೋಗ್ರಾಫರ್ ಸನಾ ಬೇಡಿ ಪರೀಕ್ಷಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಶ್ನೆ ಪತ್ರಿಕೆಗಳನ್ನು ಟೈಪ್ ಮಾಡಿ ಕೊಡುವ ಕೆಲಸ ವಹಿಸಸಲಾಗಿತ್ತು. ಸಿಎಆರ್ ಪೇದೆ ಮುಸ್ತಾಕ್ ಕಾಟಿ ನಾಯ್ಕ ಕೆಪಿಎಸ್ ಸಿಯಲ್ಲಿ ಸೆಂಟ್ರಿ ಡ್ಯೂಟಿಗೆ ನಿಯೋಜನೆ ಗೊಂಡಿದ್ದ. ಈ ವೇಳೆ ಸನಾ ಬೇಡಿ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮುಸ್ತಾಕ್ ಪ್ರೀತಿ ಹೆಚ್ಚು ಪಡೆಯಲು ಏನು ಬೇಕಾದರೂ ಮಾಡಲಿಕ್ಕೆ ಸನಾ ಸಿದ್ಧಳಿದ್ದಳು. ಇಬ್ಬರು ಪರಸ್ಪರ ಮದುವೆಯಾಗಲು ತೀರ್ಮಾನಿಸಿದ್ದರು. ಇದೇ ಸಲುಗೆಯಿಂದಲೇ ಪ್ರಥಮ ದರ್ಜೆ ಸಹಾಯಕ ಪ್ರಶ್ನೆ ಪತ್ರಿಕೆಯನ್ನು ಪೆನ್ ಡ್ರೈವ್ ನಲ್ಲಿ ಹಾಕಿ ಅದ್ನು ತನ್ನ ಲವರ್ ಬಾಯ್ ಮುಸ್ತಾಕ್ ಕಾಟಿನಾಯ್ಕಗೆ ನೀಡಿದ್ದಳು. ಮುಸ್ತಾಕ್ ಕಾಟಿ ನಾಯ್ಕ್ ತನ್ನ ಆಪ್ತ ರಾಚಪ್ಪ ಅವರಿಗೆ ನೀಡಿದ್ದ. ಇದನ್ನೂ ಬಳಸಿಕೊಂಡರು ಎಲ್ಲರೂ ಒಂದೇ ಸಲ ಶ್ರೀಮಂತರಾಗಲು ಯೋಜನೆ ರೂಪಿಸಿದ್ದರು. ಮೊದಲಿನಿಂದಲೂ ಕೆಪಿಎಸ್ ಸಿ ಜತೆ ನಿಕಟ ಸಂಪರ್ಕ ಹೊಂದಿದ್ದ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಚಂಧ್ರು ಕೈ ಸೇರಿದ ಬಳಿಕ ರಾತ್ರೋ ರಾತ್ರಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ಹಣ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಬಿ ವೇಣುಗೋಪಾಲ ನೇತೃತ್ದದ ತಂಡ ಕಾರ್ಯಾಚರಣೆ ನಡೆಸಿ ಚಂದ್ರು ನನ್ನು ಬಂಧಿಸಿತ್ತು. ಆನಂತರ ಸನಾ ಬೇಡಿ ಬಂಧನಕ್ಕೆ ಒಳಗಾಗಿದ್ದಳು. ಇದೀಗ ಸನಾ ಬೇಡಿ ತನ್ನ ಲವರ್ ಮುಸ್ತಾಕ್ ಗೆ ಪ್ರಶ್ನೆ ಪತ್ರಿಕೆ ಪೆನ್ ಡ್ರೈವ್ ಗೆ ಹಾಕಿ ಕೊಟ್ಟಿದ್ದ ಸಂಗತಿ ಹೊರ ಬಿದ್ದಿದೆ.
ಕೋಟಿ ಕೋಟಿ ಟಾರ್ಗೆಟ್ :
ದಿಢೀರ್ ಶ್ರೀಮಂತರಾಗುವ ಕನಸು ಕಾಣುತ್ತಿದ್ದ ಪ್ರಮುಖ ಆರೋಪಿ ಚಂದ್ರು ಕೂಡ ಮದುವೆಯಾಗಲು ಮುಂದಾಗಿದ್ದ. ಸಾಲ ಇಲ್ಲದೇ ಸ್ವಂತಕ್ಕೆ ಮನೆ ಮಾಡಿಕೊಂಡು ಅದ್ಧೂರಿ ಮದುವೆಯಾಗಲು ನಿರ್ಧರಿಸಿದ್ದ. ಹೀಗಾಗಿ ತನ್ನ ಕೈಗೆ ಸಿಕ್ಕಿದ ಪ್ರಶ್ನೆ ಪತ್ರಿಕೆಯನ್ನು ಸಾಧ್ಯವಾದಷ್ಟು ಮಂದಿಗೆ ಮಾರಾಟ ಮಾಡಿ ಕೋಟಿ ಕೋಟಿ ಗಳಿಕೆ ಮಾಡಲು ಮುಂದಾಗಿದ್ದ. ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಹಣ ಗಳಿಕೆ ಆತುರಕ್ಕೆ ಬಿದ್ದಿದ್ದ. ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ಸದಾ ನಿಗಾ ಇಡುವ ಸಿಸಿಬಿ ಪೊಲೀಸರ ಕಿವಿಗೆ ಚಂದ್ರು ವಿಚಾರ ಬಿದ್ದಿತ್ತು. ಮಾರು ವೇಷದಲ್ಲಿ ಕಾರ್ಯ ಚರಣೆ ನಡೆಸಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆನಂತರ ಸನಾ ಬೇಡಿ ಸಿಕ್ಕಿಬಿದ್ದಿದ್ದಳು. ಇನ್ನು ಐದ ರಿಂದ ಹದಿನೈದು ಲಕ್ಷ ರೂ. ವರೆಗೂ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಗ್ರಹ ಮಾಡಿದ್ದರು. ಕೆಲವರು ಪರೀಕ್ಷೆ ಬರೆದ ಬಳಿಕ ನೀಡುವುದಾಗಿ ಚೆಕ್ ಹಾಗೂ ಅಂಕ ಪಟ್ಟಿಗಳನ್ನು ನೀಡಿದ್ದರು.
Recommended Video
ಪ್ರಶ್ನೆ ಪತ್ರಿಕೆ ಲೀಕ್ ಮಾರ್ಗಗಳು :
ಕೆಪಿಎಸ್ ಸಿ ಪ್ರಶ್ನೆ ಪತ್ರಿಕೆ ಕೇವಲ ಒಂದು ಮಾರ್ಗದಲ್ಲಿ ಲೀಕ್ ಆಗಲ್ಲ. ಬದಲಿಗೆ ಅದು ನಾನಾ ಹಾದಿಯಲ್ಲಿ ಲೀಕ್ ಆಗುವುದನ್ನು ಸಿಸಿಬಿ ಪೊಲೀಸರು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಟೈಪ್ ಮಾಡುವ ಸ್ಟೆನೋ ಗ್ರಾಫರ್ ಮೂಲಕ ಲೀಕ್ ಆಗಿದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಕಂಪ್ಯೂಟರ್ ಬಳಸುವ ಅಧಿಕಾರಿಗಳಿಂದಲೂ ಲೀಕ್ ಆಗುವ ಸಾಧ್ಯತೆ. ಪ್ರಶ್ನೆ ಪತ್ರಿಕೆ ಮುದ್ರಿಸುವ ಗುತ್ತಿಗೆ ಪಡೆಯುವ ಮುದ್ರಣಾಲಯ ( ಬಹುತೇಕ ಹೊರ ರಾಜ್ಯ) ಮೂಲಕ ಲೀಕ್ ಆಗಲಿದೆ. ಕೆಪಿಎಸ್ ಸಿಯಲ್ಲಿ ಕೆಲಸ ನಿರ್ವಹಿಸುವ ಕೆಳ ದರ್ಜೆಯ ಅಧಿಕಾರಿಗಳಿಂದಲೂ ಪ್ರಶ್ನೆ ಪತ್ರಿಕೆ ಈ ಹಿಂದೆ ಲೀಕ್ ಆಗಿದೆ. ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ, ರಾಜಧಾನಿಯಿಂದ ದೂರದ ಸರ್ಕಾರಿ ಖಜಾನೆಗಳಲ್ಲಿ ಲೀಕ್ ಆಗುತ್ತದೆ. ಇನ್ನೂ ಕೆಲವು ಭ್ರಷ್ಟ ಅಧಿಕಾರಿಗಳು ಹಣದ ಆಸೆಗೆ ಬಿದ್ದು ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಸಾಧ್ಯತೆಯಿದೆ. ಸಿಸಿಬಿ ಪೊಲೀಸರು ಪ್ರತಿ ಸ್ಪರ್ಧಾತ್ಮಕ ಪರೀಕ್ಷೆ ವೇಳೆಯೂ ಇಷ್ಟು ಆಯಾಮ ಇಟ್ಟುಕೊಂಡೇ ಲೀಕ್ ಜಾಲವನ್ನು ಜಾಲಾಡುತ್ತಾರೆ.