ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದ ನಿಗೂಢ ಶಬ್ದ
ಬೆಂಗಳೂರು, ಮೇ 20: ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಬುಧವಾರ ಮಧ್ಯಾಹ್ನ ಭಾರಿ ಶಬ್ದ ಕೇಳಿಸಿದೆ. ಹಲವು ಲೇಔಟ್ ಗಳಲ್ಲಿನ ನಾಗರಿಕರು ಈ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ವಿಪತ್ತು ನಿರ್ವಹಣಾ ಕೇಂದ್ರ ಪರಿಶೀಲನೆ ನಡೆಸುತ್ತಿದೆ.
ಭೂಕಂಪದಂತೆ ಭಾರಿ ಶಬ್ದ ಕೇಳಿ ಬಂದಿದ್ದು ಮಧ್ಯಾಹ್ನ 1.20 ರಿಂದ 1.30ರೊಳಗೆ ನಿಗೂಢ ಶಬ್ದದ ಅನುಭವವಾಗಿದೆ. ನಂತರ ಆ ಭಾಗದಲ್ಲಿ ಪವರ್ ಕಟ್ ಆಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರ(kSNDMC)ಕ್ಕೆ ಈ ಬಗ್ಗೆ ಕರೆ ಬಂದಿದೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಆರಂಭಿಸಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಜಯನಗರ, ಬಸವನಗುಡಿ, ಎಚ್ ಎಸ್ ಆರ್ ಲೇ ಔಟ್, ಕೆ. ಆರ್ ಪುರಂ, ಹೆಬ್ಬಾಳ, ಬನ್ನೇರುಘಟ್ಟ ರಸ್ತೆ, ಮುಂತಾದೆಡೆ ಈ ಶಬ್ದ ಕೇಳಿ ಬಂದಿದೆ.
ಭೂಕಂಪದ ಅನುಭವವಾಗಿಲ್ಲ, ಟ್ರಾನ್ಸ್ ಫಾರ್ಮರ್ ಸ್ಫೋಟ ಎಂದು ಭಾವಿಸಿದೆವು ಆದರೆ, ನಂತರ ಇದು ಭೂಕಂಪವಲ್ಲ ಎಂದು ತಿಳಿದು ಬಂದಿದೆ. ತಕ್ಷಣವೇ ತಮ್ಮ ವಾಟ್ಸಾಪ್ ಗುಂಪಿನಲ್ಲಿ ಈ ಬಗ್ಗೆ ವಿಷಯ ಹಂಚಿಕೊಂಡೆವು ಎಂದು ಎಚ್ ಎಸ್ ಆರ್ ಲೇ ಔಟ್ ನ ಅಪಾರ್ಟ್ಮೆಂಟ್ ನಿವಾಸಿ ಸುಷ್ಮಾ ಅವರು ತಿಳಿಸಿದ್ದಾರೆ.
The activity reported in Bengaluru is not due to an Earthquake. The Seismometers did not capture any Ground Vibration as generally happens during a mild Tremor. The activity is purely a loud unknown noise.
— KSNDMC (@KarnatakaSNDMC) May 20, 2020
''ಇದು ಭೂಕಂಪವಾಗಿರಲು ಸಾಧ್ಯವಿಲ್ಲ ನಮ್ಮ ಮಾಪಕಗಳಲ್ಲಿ ಯಾವುದೇ ದಾಖಲೆ ರೆಕಾರ್ಡ್ ಆಗಿಲ್ಲ. ಈ ಬಗ್ಗೆ ಕಂಟ್ರೋಲ್ ರೂಮಿಗೆ ಸಾಕಷ್ಟು ಕರೆಗಳು ಬಂದಿವೆ. ಕೆಲವು ಭೂ ಕಂಪನದ ಅನುಭವ ಹಂಚಿಕೊಂಡಿದ್ದಾರೆ. ಹಲವಾರು ಮಂದಿ ಭಾರಿ ಶಬ್ದ ಕೇಳಿಸಿದೆ ಎಂದಿದ್ದಾರೆ, ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ'' ಎಂದು ಕೆಎಸ್ ಎನ್ ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಪೊಲೀಸ್ ಆಯುಕ್ತರ ಪ್ರತಿಕ್ರಿಯೆ: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿ, ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮ್ 100ಕ್ಕೆ ಯಾವುದೇ ಕರೆ ಬಂದಿಲ್ಲ. ಏರ್ ಫೋರ್ಸ್ ಕಂಟ್ರೋಮ್ ರೂಮ್ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಲ್ಲಾದರೂ ವಿಮಾನ ಪತನವಾಗಿದೆಯೆ ಎಂಬುದರ ಬಗ್ಗೆ ಚೆಕ್ ಮಾಡಲಾಗುತ್ತಿದೆ ಎಂದಿದ್ದಾರೆ.
ಡಾ ಪ್ರಕಾಶ್, KSNMDC : ಅಂಫಾನ್ ಚಂಡಮಾರುತದ ದೆಸೆಯಿಂದ ತಂಪಾದ ವಾತವಾರಣವಿದೆ. ಈ ಸಂದರ್ಭದಲ್ಲಿ ಸೈಕ್ಲೋನ್ ಗಾಳಿ ರಭಸವಾಗಿ ನಿರ್ವಾತಕ್ಕೆ ನುಗ್ಗಿದಾಗ ಆಗಸದಲ್ಲಿ ಉಂಟಾದ ಶಬ್ದ ಇದು ಎಂದು ಹೇಳಬಹುದು. ಇದು ಭೂಕಂಪವಲ್ಲ. ಅತ್ಯಂತ ಸಣ್ಣ ಪ್ರಮಾಣದ ಕಂಪನವಾದರೂ ಅದನ್ನು ದಾಖಲಿಸುವ ಸಾಧನಗಳನ್ನು ನಮ್ಮ ಮೂರು ಕೇಂದ್ರಗಳು ಹೊಂದಿವೆ. ಬೆಂಗಳೂರು, ಗೌರಿಬಿದನೂರು ಕೇಂದ್ರಗಳಲ್ಲಿ ಯಾವುದೇ ಕಂಪನದ ದಾಖಲೆಗಳಾಗಿಲ್ಲ. ಇದು ಆಗಸದಲ್ಲಿ ಬಿಸಿ ಹಾಗೂ ತಂಪು ವಾಯುವಿನ ನಡುವಿನ ಸಂಘರ್ಷದಿಂದ ಉಂಟಾದ ಶಬ್ದ ಎಂದಿದ್ದಾರೆ.