ಲಾಟರಿ ಹಗರಣ: ಕಿಂಗ್ ಪಿನ್ ಮಾರ್ಟಿನ್ ಗೆ ಸೇರಿದ 595 ಕೋಟಿ ರು ವಶ
ಬೆಂಗಳೂರು, ಮೇ 06: ಕೊಯಮತ್ತೂರು ಮೂಲದ ಲಾಟರಿ ಏಜೆಂಟ್ ಸ್ಯಾಂಟಿಯಾಗೋ ಮಾರ್ಟಿನ್ ಗೆ ಸೇರಿದ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 595 ಕೋಟಿ ರು ಮೌಲ್ಯದ ಅಕ್ರಮ ಆಸ್ತಿ ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಲಾಟರಿ ದಂಧೆಯ ಅಕ್ರಮ ಆಸ್ತಿಯನ್ನು ಲೋಕಸಭೆ ಚುನಾವಣೆ ವೇಳೆ ಏನಾದ್ರೂ ಬಳಸಲಾಗಿದೆಯೇ ಎಂಬ ದೃಷ್ಟಿಯಿಂದ ತನಿಖೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಇನ್ನಷ್ಟು ದಾಳಿ ನಡೆಯುವ ಸಾಧ್ಯತೆಯಿದೆ.
ಮಾರ್ಟಿನ್ ಕರಾಳ ಸಾಮ್ರಾಜ್ಯದಲ್ಲಿ ಒಂದು ಸುತ್ತು
ಕೊಯಮತ್ತೂರಿನ 20 ಕಡೆ ಹಾಗೂ ದೇಶದ 70 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ದಾಳಿ ಇನ್ನು ಮುಂದುವರೆಯಲಿದೆ. ಅಪಾರ ಪ್ರಮಾಣದಲ್ಲಿ ನಗದು, ಚಿನ್ನಾಭರಣ, ಆಸ್ತಿ ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಟ್ಕಾ: ಯಾವ ನಂಬರು ಇವತ್ತಿಗೆ ಫಿಟ್ ಆಗುತ್ತದೆ?
ಕೊಯಮತ್ತೂರಿನ ಗಾಂಧಿನಗರಂನ ನಿವಾಸಿ ಮಾರ್ಟಿನ್ ಒಬ್ಬ ಸಾಧಾರಣ ಲಾಟರಿ ಏಜೆಂಟ್ ಆಗಿದ್ದ. ಬಡವರು, ಮಧ್ಯಮ ವರ್ಗದವರ ಪಾಲಿಗೆ ಕನಸು ಹಂಚುವ ವ್ಯಾಪಾರಿ. ದಿನನಿತ್ಯ ಲಾಟರಿ ಮಾರಿ ಜೀವನ ಸಾಗಿಸುತ್ತಿದ್ದ ಮಾರ್ಟಿನ್ ಮುಂದೊಂದು ದಿನ 7,000 ಕೋಟಿ ರು ಮೌಲ್ಯದ ಲಾಟರಿ ಹಗರಣದ ಕಿಂಗ್ ಪಿನ್ ಎನಿಸಿದ. 2000 ಕೋಟಿ ರು ಒಡೆಯನಾದ, ದಂಧೆ ನಡೆದಷ್ಟು ದಿನ ರಾಜನಂತೆ ಮೆರೆದ ಈತನ ಜೀವನ ಕಥೆ ಒಳ್ಳೆ ಸಿನಿಮಾ ಸರಕಾಗಬಲ್ಲದು.
ಕೈಗಾರಿಕಾ ದಿಗ್ಗಜರಿಗಿಂತ ಅಧಿಕ ಗಳಿಕೆ
ತಮಿಳುನಾಡಿನ 17 ಸ್ಕೀಮ್ ಗಳು, ಸಿಕ್ಕಿಂ ಸರ್ಕಾರದ 28,ಅರುಣಾಚಲ ಪ್ರದೇಶದ 6 ಲಾಟರಿ ಯೋಜನೆಗಳನ್ನು ಸುಲಭವಾಗಿ ನಿಭಾಯಿಸುತ್ತಿದ್ದ ಮಾರ್ಟಿನ್ ಆ ಕಾಲದಲ್ಲಿ ದಿನವೊಂದಕ್ಕೆ ಗಳಿಸುತ್ತಿದ್ದ ಲಾಭದ ಮೊತ್ತವು ಐಟಿ ದಿಗ್ಗಜರಾದ ಇನ್ಫಿ ಮೂರ್ತಿ, ಕೈಗಾರಿಕಾ ದಿಗ್ಗಜ ಧೀರೂಬಾಯಿ ಅಂಬಾನಿಯ ಒಂದು ದಿನದ ಗಳಿಕೆಗೂ ಅಧಿಕವಾಗಿತ್ತು.
ಆತ್ಮಹತ್ಯೆ ಮಾಡಿಕೊಂಡ ಮಾರ್ಟಿನ್ ಆಪ್ತ
ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಟಿನ್ ಅವರ ಒಡೆತನದ ಹೋಮಿಯೋಪಥಿ ಕಾಲೇಜಿನ ಅಕೌಂಟೆಂಟ್ ಪಳನಿಸ್ವಾಮಿ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಆದರೆ, ವಿಚಾರಣೆ ಬಳಿಕ ಆತ ಮಣಿಕಟ್ಟು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಜಕೀಯ ಪುಢಾರಿಗಳ ಜೊತೆ ಮಾರ್ಟಿನ್ ಗೆಳೆತನ
ಮಾರ್ಟಿನ್ ಮೇಲೆ 14 ಪ್ರಕರಣಗಳಿವೆ
ಮಾರ್ಟಿನ್ ಮೇಲೆ ಸರಿ ಸುಮಾರು 14ಕ್ಕೂ ಅಧಿಕ ಪ್ರಕರಣಗಳಿವೆ. ಭೂ ಕಬಳಿಕೆ, ಅಕ್ರಮ ಲಾಟರಿ ದಂಧೆ, ವಂಚನೆ ..ಇತ್ಯಾದಿ, ಡಿಎಂಕೆ ಜೊತೆ ಗೆಳೆತನದಿಂದ ಭೂ ವಿವಾದದಲ್ಲಿ ಸಿಲುಕಿಕೊಂಡಿದ್ದ ಮಾರ್ಟಿನ್ ಅವರ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಕಿಂಗ್ ಪಿನ್ ಸ್ಯಾಂಟಿಯಾಗೋ ಮಾರ್ಟಿನ್ ಬಳಿ ಪಿಆರ್ ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಾರಿ ರಾಜನ್ ಈಗ ಬೆಂಗಳೂರಿನ ಕಾರಾಗೃಹದಲ್ಲಿದ್ದಾರೆ.
ಬಿಜೆಪಿ ಮಿತ್ರಪಕ್ಷದಲ್ಲಿ ಮಾರ್ಟಿನ್ ಪತ್ನಿ
ಲೋಕಸಭೆ ಚುನಾವಣೆ 2014 ಸಂದರ್ಭದಲ್ಲಿ ಸ್ಯಾಂಟಿಯಾಗೋ ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್ ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ) ಪರ ಕಾರ್ಯಕರ್ತೆಯಾಗಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಲ್ಲಿ ಐಜೆಕೆ ಕೂಡಾ ಸೇರಿಕೊಂಡಿತ್ತು. ಚುನಾವಣಾ ಪ್ರಚಾರಕ್ಕೆ ತಮಿಳುನಾಡಿನ ಕೊಯಮತ್ತೂರಿಗೆ ನರೇಂದ್ರ ಮೋದಿ ಅವರು ಬಂದಾಗ ಒಂದೇ ವೇದಿಕೆಯಲ್ಲಿ ಲೀಮಾ ರೋಸ್ ಹಾಗೂ ಮೋದಿ ಕಾಣಿಸಿಕೊಂಡಿದ್ದರು.