'ನ. 5 ರೊಳಗೆ ಡಿಸೇಲ್ ದರ ಇಳಿಸಿ': ರಾಜ್ಯ ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ ಲಾರಿ ಮಾಲೀಕರ ಸಂಘ
ಬೆಂಗಳೂರು, ಅಕ್ಟೋಬರ್ 24: ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಾಣುತ್ತಲೇ ಇದೆ. ಈ ನಡುವೆ ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಮಾಡಬೇಕು ಎಂಬ ಕೂಗು ಕೂಡಾ ಕೇಳಿ ಬರುತ್ತಿದೆ. ಈಗ ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರುದ್ದ ಲಾರಿ ಮಾಲೀಕರ ಸಂಘವು ಆಕ್ರೋಶ ವ್ಯಕ್ತಪಡಿಸಿದೆ. ಇಂಧನ ಬೆಲೆ ಇಳಿಕೆಗೆ ನವೆಂಬರ್ 5 ರವರೆಗೆ ಗಡುವು ನೀಡಿರುವ ಲಾರಿ ಮಾಲೀಕರ ಸಂಘವು, ಅದರೊಳಗೆ ಬೆಲೆ ಇಳಿಕೆ ಮಾಡದಿದ್ದರೆ ಮುಷ್ಕರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, "ರಾಜ್ಯ ಸರ್ಕಾರ ಡಿಸೇಲ್ ಬೆಲೆ ಇಳಿಕೆ ಮಾಡಲು ನಾವು ಗಡುವು ನೀಡುತ್ತೇವೆ. ನವೆಂಬರ್ 5 ರ ಒಳಗೆ ಡಿಸೇಲ್ ಬೆಲೆಯಲ್ಲಿ ಹತ್ತು ರೂಪಾಯಿ ಇಳಿಕೆ ಮಾಡಬೇಕು. ಇಲ್ಲವಾದರೆ ಮುಷ್ಕರ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
ಅ. 24: ಸತತವಾಗಿ 5ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಈ ಹಿಂದೆ ಪೆಟ್ರೋಲ್ ಹಾಗೂ ಡಿಸೇಲ್ ದರ ಇಳಿಕೆಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘವು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದವು. ಬೆಲೆ ಏರಿಕೆಯನ್ನು ಖಂಡಿಸಿ ಕಳೆದ ವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಲಾರಿ ಮಾಲೀಕರ ಸಂಘವು, ಅಕ್ಟೋಬರ್ 23 ರ ಗಡುವು ನೀಡಿತ್ತು. ಈಗ ಮುಂದಿನ ವಾರದವರೆಗೆ ರಾಜ್ಯ ಸರ್ಕಾರಕ್ಕೆ ಲಾರಿ ಮಾಲೀಕರ ಸಂಘವು ಗಡುವು ನೀಡಿದೆ.
ಒಂದು ವರ್ಷದಲ್ಲಿ ಸುಮಾರು 26 ರೂಪಾಯಿ ಡಿಸೇಲ್ ಬೆಲೆ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಪೆಟ್ರೋಲ್, ಡಿಸೇಲ್ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಈ ನಡುವೆ ಲಾರಿ ಮುಷ್ಕರ ನಡೆದರೆ ಅಗತ್ಯ ವಸ್ತುಗಳ ಬೆಲೆಯು ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಗೂಡ್ಸ್ ಲಾರಿಗಳ ಓಡಾಟ ಸ್ಥಗಿತವಾದರೆ ಎಲ್ಲ ರೀತಿಯ ವಸ್ತುಗಳ ಸರಬರಾಜು ಬಂದ್ ಆಗಲಿದೆ.
ಬೆಲೆ ಇಳಿಕೆ ಬಗ್ಗೆ ಈಗಾಗಲೇ ಸುಳಿವು ನೀಡಿದ್ದಾರೆ ಸಿಎಂ
ಈ ನಡುವೆ ಡಿಸೇಲ್, ಪೆಟ್ರೋಲ್ ಬೆಲೆ ಇಳಿಕೆಯ ಬಗ್ಗೆ ಅಕ್ಟೋಬರ್ 17ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಇಂಧನ ಬೆಲೆ ಏರಿಕೆಯು ಆರ್ಥಿಕತೆ ಮೇಲೆ ನೇರವಾಗಿ ಪರಿಣಾಮ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಆರ್ಥಿಕತೆ ಸುಧಾರಣೆ ಆದರೆ ಉಪಚುನಾವಣೆಯ ನಂತರ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ," ಎಂದು ಹೇಳುವ ಮೂಲಕ ಡಿಸೇಲ್, ಪೆಟ್ರೋಲ್ ಬೆಲೆ ಇಳಿಕೆಯ ಬಗ್ಗೆ ಸುಳಿವು ನೀಡಿದ್ದರು.
ಲಾರಿ ಮಾಲೀಕರ ಸಮಸ್ಯೆಯನ್ನು ತೆರೆದಿಟ್ಟ ಷಣ್ಮುಗಪ್ಪ
ಇನ್ನು ಈ ಸಂದರ್ಭದಲ್ಲೇ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಲಾರಿ ಮಾಲೀಕರ ಇತರೆ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಪರ್ಮಿಟ್ ಅವಧಿಯನ್ನು ಜನವರಿ ಅಂತ್ಯದವರೆಗೂ ವಿಸ್ತರಿಸಬೇಕು ಎಂದು ಕೂಡಾ ಆಗ್ರಹ ಮಾಡಿದ್ದಾರ. "ನಮಗೆ ಲೋಡಿಂಗ್ ಮತ್ತು ಅನ್ಲೋಡಿಂಗ್ನಲ್ಲಿ ಹಲವಾರು ಸಮಸ್ಯೆಗಳು ಆಗುತ್ತಿದೆ. ಈ ಸಮಸ್ಯೆಗಳು ಶೀಘ್ರವೇ ಬಗೆಹರಿಸಬೇಕು. ಈ ನಡುವೆ ಆರ್ಟಿಒ ಹಾಗೂ ಪೊಲೀಸ್ ಕಿರುಕುಳವು ನಮಗೆ ತಪ್ಪಿದ್ದಲ್ಲ, ಅದರ ವಿರುದ್ಧವೂ ಕ್ರಮಕೈಗೊಳ್ಳಬೇಕು," ಎಂದು ಒತ್ತಾಯ ಮಾಡಿದ್ದಾರೆ.
'ಇಂಧನ ಬೆಲೆ ಇಳಿಸದಿದ್ದರೆ ಅನಿರ್ದಿಷ್ಟ ಮುಷ್ಕರ ನಡೆಸುತ್ತೇವೆ' ಎಂದ ಲಾರಿ ಮಾಲೀಕರು
"ಆರ್ಟಿಒ ಹಾಗೂ ಪೊಲೀಸ್ ಕಿರುಕುಳವೂ ನಮಗೆ ಇದೆ. ಆರ್ಟಿಒ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಓವರ್ಲೋಡ್ ಲಾರಿಗಳನ್ನು ಬಿಟ್ಟು ಬಿಡಲು ಈ ಲಂಚವನ್ನು ಆರ್ಟಿಒ ಅಧಿಕಾರಿಗಳು ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು," ಎಂದು ಆಗ್ರಹ ಮಾಡಿದ್ದಾರೆ. "ನಮಗೆ ಅಧಿಕಾರಿಗಳ ಕಿರುಕುಳ ತಪ್ಪಬೇಕು ಎಂದು ಆಗ್ರಹ ಮಾಡಿ ನಾವು ನ.5ರಂದು ರಾಜ್ಯದ ಎಲ್ಲಾ ಆರ್ಟಿಒ ಕಚೇರಿ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಬೇಡಿಕೆ ಈಡೇರದಿದ್ದರೆ ಮುಷ್ಟರ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)