ಶಾಸಕ ಮುನಿರತ್ನ ಸೋದರನ ವಿರುದ್ಧ ಲೋಕಾಯುಕ್ತ ಚಾರ್ಜ್ ಶೀಟ್
ಬೆಂಗಳೂರು, ನವೆಂಬರ್ 27 : ಶಾಸಕ ಮುನಿರತ್ನ ಅವರ ಸಹೋದರ ವೆಂಕಟರತ್ನ ಸೇರಿದಂತೆ 10 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಬಿಬಿಎಂಪಿ ಎಂಜಿನಿಯರ್ ಗಳನ್ನು ಸೇರಿದಂತೆ 10 ಮಂದಿಯ ಮೇಲೆ ಆರ್.ಆರ್.ನಗರ ಟೆಂಡರ್ ನ ನಕಲಿ ಬಿಲ್ ಸೃಷ್ಠಿ ಆರೋಪದ ಮೇಲೆ ಜಾರ್ಜ್ ಶೀಟ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ವೆಂಕಟರತ್ನ ಅವರನ್ನು ಪ್ರಮುಖ ಆರೋಪಿ ಎಂದು ಹೇಳಿದ್ದಾರೆ.
ಆರೋಪಿಗಳು 2012 ರಿಂದ 2014ರ ವರೆಗೆ ಕಾಮಗಾರಿಯ ನಕಲಿ ದಾಖಲೆ ಸೃಷ್ಟಿಮಾಡಿರುವುದು ದೃಢಪಟ್ಟಿದೆ. ಬಿ.ಆರ್. ಬುಕ್ ಗಳಲ್ಲಿ ದಾಖಲೆಗಳನ್ನು ಸೇರಿಸುವುದು, ಎಂ.ಬಿ.ಗಳಲ್ಲಿ ಮಾಹಿತಿ ತುಂಬುವುದು, ಸಹಿ, ಟೆಂಡರ್ ಕಾಮಗಾರಿ ಅಳತೆಯನ್ನು ನಮೂದಿಸಿರುವುದು, ದಾಖಲೆಗಳನ್ನು ಸೃಷ್ಟಿಸಿ ಸೀಲು ಹಾಕಿರುವುದು ಎಲ್ಲ ಅಂಶಗಳನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.
ಈ ಮುಂಚೆ ಇದೇ ಕೇಸಿನಲ್ಲಿ ಶಾಸಕ ಮುನಿರತ್ನ ಅವರ ಹೆಸರನ್ನೂ ಸೇರ್ಪಡಿಸಲಾಗಿತ್ತು. ಆದರೆ ಶಾಸಕ ಮುನಿರತ್ನ ಅವರು ಲೋಕಾಯುಕ್ತ ಮುಂದೆ ಹಾಜರಾಗಿ ಹೇಳಿಕೆ ನೀಡಿದ ಮೇಲೆ ಅವರ ಹೆಸರನ್ನು ಕೈಬಿಡಲಾಯಿತು. ವೆಂಕಟರತ್ನ ಅವರಿಗೆ ಮನೆ ನೀಡಿದ್ದ ಕಾರಣ ಮುನಿರತ್ನ ಅವರನ್ನು ಲೋಕಾಯುಕ್ತ ವಿಚಾರಣೆಗೆ ಒಳಪಡಿಸಿತ್ತು.
2014 ರಲ್ಲಿ ವೈ.ಎಚ್.ಶ್ರೀನಿವಾಸ್ ಎಂಬುವರು 120 ಕೋಟಿ ಕಾಮಗಾರಿಗೆ ನಕಲಿ ದಾಖಲೆ ಸೃಷ್ಠಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ತನಿಖೆ ಪ್ರಾರಂಭಿಸಿ, ಮೂರು ವರ್ಷದ ನಂತರ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.