ಬನ್ನೇರುಘಟ್ಟ ಅಕ್ರಮ ಗಣಿಗಾರಿಕೆ: ಸರ್ಕಾರಕ್ಕೆ ಲೋಕಾಯುಕ್ತರ ಛಾಟಿ ಏಟು
ಬೆಂಗಳೂರು, ಸೆಪ್ಟೆಂಬರ್ 8: ಬನ್ನೇರುಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನದ ಸುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.
ಬನ್ನೇರುಘಟ್ಟ ಉದ್ಯಾನದ ಸುತ್ತ ಗಣಿಗಾರಿಕೆ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ರಾಜ್ಯ ಸರ್ಕಾರ ಕೂಡಲೇ ನಾಲ್ಕು ವಾರಗಳಲ್ಲಿ ಈ ಕುರಿತು ತನಿಖೆ ನಡೆಸಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನ ಸುತ್ತ ಕಲ್ಲು ಗಣಿಗಾರಿಕೆ ರದ್ದು!
ಅರಣ್ಯ ಪರಿಸರ ಹಾಗೂ ಜೀವ ವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಭೂಗರ್ಭ ಮತ್ತು ಗಣಿಗಾರಿಕೆಯ ಆಯುಕ್ತ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಸೇರಿದಂತೆ ಹಲವು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿರುವ ಲೋಕಾಯುಕ್ತರು ಈ ಕುರಿತಂತೆ ತನಿಖೆ ನಡೆಸಿ ನಾಲ್ಕು ವಾರಗಳಲ್ಲಿ ವರದಿ ಸಹಿತ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತ ನಡೆಯುತ್ತರುವ ಗಣಿಗಾರಿಕೆ ಸಕ್ರಮವೇ?, ಸಕ್ರಮವಾಗಿದ್ದರೆ ಉದ್ಯಾನದ ಜೀವ ಸಂಕುಲಕ್ಕೆ ಧಕ್ಕೆಯಾಗಲು ಕಾರಣವೇನು? ಅಕ್ರಮವಾಗಿದ್ದರೆ ಗಣಿಗಾರಿಕೆ ನಡೆಯಲು ಬಿಟ್ಟಿರುವುದೇಕೆ? ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವೈಜ್ಞಾನಿಕ ಸಂರಕ್ಷಣೆಗಾಗಿ ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಲೋಕಾಯುಕ್ತರು ವಿವರಣೆ ಕೇಳಿದ್ದಾರೆ.
ಬನ್ನೇರುಘಟ್ಟ ಉದ್ಯಾನ ಸುತ್ತ ಶೀಘ್ರ ಕಲ್ಲು ಗಣಿಗಾರಿಕೆ ರದ್ದು
1984ರ ಲೋಕಾಯುಕ್ತ ಕಾಯ್ದೆ ಸೆಕ್ಷನ್ 7(1)(ಬಿ) 9(3)(ಎ )ಅನ್ವಯ ಲೋಕಾಯುಕತರು ಸರ್ಕಾರದ ವಿರುದ್ಧ ಸ್ವಯಂಪ್ರೇರಿತ(ಸುಮೊಟೊ) ದೂರು ದಾಖಲಿಸಿಕೊಂಡಿದ್ದಾರೆ.ಅಲ್ಲದೆ ಉದ್ಯಾನದ ಸುತ್ತ ನಡೆಯುತ್ತಿರುವ ನಗರೀಕರಣ ಮತ್ತು ಅಕ್ರಮ ಗಣಿಗಾರಿಕೆಯು ಸುಪ್ರೀಂಕೋರ್ಟ್ ನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕಾನೂನು ಕ್ರಮ ಜರುಗಿಸಬಾರದೇಕೆ ಎಂದು ಪ್ರಶ್ನಿಸಿದ್ದಾರೆ.