ಯಡಿಯೂರಪ್ಪ, ವಿಜಯೇಂದ್ರ, ಎಸ್ಟಿ ಸೋಮಶೇಖರ್ ಸೇರಿ 9 ಮಂದಿ ವಿರುದ್ಧ ಲೋಕಾಯುಕ್ತದಲ್ಲಿ FIR
ಬೆಂಗಳೂರು, ಸೆಪ್ಟೆಂಬರ್ 17: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಸೇರಿ 9 ಜನರ ವಿರುದ್ಧ ಹೈಕೋರ್ಟ್ ಸೂಚನೆಯಂತೆ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಆ ಮೂಲಕ ಮಾಜಿ ಸಿಎಂಗೆ ತನಿಖೆಯ ಸಂಕಷ್ಟ ಎದುರಾಗಿದೆ.
ಬಿಎಸ್ವೈ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮರು ವಿಚಾರಣೆಗೆ ಆದೇಶಿಸಿತ್ತು. ಸೆ.7ರಂದು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಆದೇಶವನ್ನು ಮಾಡಿದ್ದರು. ಹೈಕೋರ್ಟ್ ಆದೇಶದ ವಾರದ ಬಳಿಕ ಜನಪ್ರತಿನಿಧಿಗಳ ಕೋರ್ಟ್ ಆದೇಶವನ್ನು ಮಾಡಿತ್ತು. ಇದರ ಅನ್ವಯ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ 2021ರ ಜುಲೈ 8ರಂದು ಖಾಸಗಿ ದೂರನ್ನು ಕೋರ್ಟ್ ತಿರಸ್ಕರಿಸಿತ್ತು. ವಿಶೇಷ ನ್ಯಾಯಾಲಯ ಬಿಎಸ್ವೈ ವಿರುದ್ಧದ ದೂರು ತಿರಸ್ಕರಿಸಿತ್ತು. ಖಾಸಗಿ ಸುದ್ದಿ ವಾಹಿನಿ ವರದಿ ಆಧರಿಸಿ ಅರ್ಜಿ ಸಲ್ಲಿಸಿದ್ದ ಅಬ್ರಹಾಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮೇಲೆ ಆರೋಪವನ್ನು ಮಾಡಿದ್ದರು. ಬಿಎಸ್ವೈ ಕುಟುಂಬ ಸದಸ್ಯರು, ಎಸ್.ಟಿ.ಸೋಮಶೇಖರ್ಗೂ ಸೇರಿದಂತೆ 9 ಜನರ ವಿರುದ್ಧದ ಅಪರಾಧಗಳ ವಿಚಾರಣೆಗೆ ಮನವಿಯನ್ನು ಮಾಡಲಾಗಿತ್ತು.
ಬಿಎಸ್ವೈ ಎ1, ಇತರೆ 8 ಆರೋಪಿಗಳು ಯಾರು
ಬಿಎಸ್ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ ಮರಡಿ ,ಸಂಜಯ್ಶ್ರೀ, ಕಂಟ್ರ್ಯಾಕ್ಟರ್ ಚಂದ್ರಕಾಂತ ರಾಮಲಿಂಗಂ, ಸಚಿವ ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ವಿರುದ್ಧ ಪ್ರಕರಣ ದಾಖಲಾಗಿತ್ತು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಡಿಎ ಟೆಂಡರ್ ಕರೆದಿರುವ ಮಾಹಿತಿ
ಪಿಸಿಆರ್ ನಂ 40/2021ರ ದೂರಿನ ಸಾರಂಶವೇನೆಂದರೆ ದಿನಾಂಕ 11.10.2017ರಂದು ಬಿಡಿಎ ಕಚೇರಿ ಬೆಂಗಳೂರು ನಗರ ರವರಿಂದ ಟೆಂಡರ್ ನೋಟಿಫಿಕೇಷನ್ ನಂಬರ್ ಬಿಡಿಎ/ಇಇ ಹೆಚ್ ಬಿಡಿ- 1 ಟಿಇಎನ್ಟಿ 116/2016-17ರಂತೆ ಬೆಂಗಳೂರು ನಗರ ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿ ಕೋನದಾಸಪುರದ ಸರ್ವೇ ನಂ. 22 ಮತ್ತು 23ರಲ್ಲಿ ಒಂದು ಬಿಎಚ್ಕೆ ಮತ್ತು ಮೂರು ಬಿಎಚ್ಕೆ ಫ್ಲಾಟ್ಗಳ ನಿರ್ಮಾಣಕ್ಕಾಗಿ ಟೆಂಡರ್ ಅನ್ನು ಕರೆದಿದ್ದು ಆ ಟೆಂಡರ್ ನಲ್ಲಿ ಟೆಂಡರ್ ಮೊತ್ತವು ರೂಪಾಯಿ 567 ಕೋಟಿಗಳಾಗಿದ್ದು ಮೇ / ಎಸ್ ರಾಮಲಿಂಗಂ ಕಂಸ್ಟ್ರಕ್ಷನ್ ಕಂ ಪ್ರೈ ಲಿ. ರವರು ರೂಪಾಯಿ 675 ಕೋಟಿ ರೂಗಳಿಗೆ ಕೋಟೇಷನ್ ಮಾಡಿದ್ದು. ಅಂದಾಜು ಬಿಡ್ಡು ಮೊತ್ತಕ್ಕಿಂತ ರೂಪಾಯಿ 108 ಕೋಟಿಗಳಿಗೆ ಹೆಚ್ಚಿನ ಸದರಿರವರಿಗೆ ದಿನಾಂಕ 21.11.2017ರಂದು ಎ-5 ಶ್ರೀ ಚಂದ್ರಕಾಂತ್ ರಾಮಲಿಂಗಮ್ ಮೇ / ಎಸ್ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂ ಪ್ರೈ ಲಿ.ರವರಿಗೆ ರೂ 666.22 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ಬಿಡಿಎ ಬೋರ್ಡ್ ಮೀಟಿಂಗ್ ನಲ್ಲಿ ಅಪ್ರೂವಲ್ ಮಾಡಿರುತ್ತಾರೆ. ಅಂದಿನ ಬಿಡಿಎ ಅಧ್ಯಕ್ಷರಾದ ಎಸ್.ಟಿ.ಸೋಮಶೇಖರ್ ಎ-6 ರವರ ಒತ್ತಡ ಹಾಗೂ ಪ್ರಭಾವ ಮೇರೆಗೆ ದಿನಾಂಕ 22.04.2019ರಂದು ಮೇ / ಎಸ್ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂ ಪ್ರೈ ಲಿ. ರವರಿಗೆ ಅಕ್ಸ್ ಪ್ಟೆನ್ಸ್ ಲೆಟರ್ ಅನ್ನು ನೀಡಲಾಗಿದೆ ಎಂದು ನಂತರ ದಿನಾಂಕ 24.06.2019ರಂದು ಕಾರ್ಯದೇಶ ನೀಡಲಾಗಿದೆ.
12 ಕೋಟಿ ಡೀಲ್ನ ವಿವರ
ದಿನಾಂಕ 27.06.2020ರಂದು ಎ-5 ಶ್ರೀ ಚಂದ್ರಕಾಂತ್ ರಾಮಲಿಂಗಮ್ , ಪ್ರೋ ಮೇ / ಎಸ್ ರಾಮಲಿಂಗಂ ಕಂಸ್ಟ್ರಕ್ಷನ್ ಕಂ ಪ್ರೈ ಲಿ. ಮತ್ತು ಬಿಡಿಎ ಮಧ್ಯೆ ಒಡಂಬಡಿಕೆ ಆಗಿದೆ ಎಂದು ಅಂದಿನ ಬಿಡಿಎ ಕಮೀಷನರ್ ಡಾ.ಜಿ.ಸಿ ಪ್ರಕಾಶ್ ಎ-7 ರವರು ಎ-5 ಶ್ರೀ ಚಂದ್ರಕಾಂತ್ ರಾಮಲಿಂಗಮ್ರವರಿಗೆ ಯೋಜನೆಯನ್ನು ಮುಂದುವರೆಸಬೇಕಾದರೆ ಎ-1 ಯಡಿಯೂರಪ್ಪ , ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಮತ್ತು ಎ-2 ವಿಜಯೇಂದ್ರ ಬಿನ್ ಯಡಿಯೂರಪ್ಪ ಪರವಾಗಿ 12 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದು. ಎ5ರವರು ನಗದಾಗಿ ಎ8 ಎಂಕೆ ರವಿರವರಿಗೆ ಎ2ರವರ ಸೂಚನೆಯಂತೆ ಮೇ ತಿಂಗಳ ಮಧ್ಯದ ದಿನಗಳಲ್ಲಿ ನೀಡಿರುತ್ತಾರೆಂದು ಎ7 ಕಮೀಷನರ್ ಬಿಡಿಎ ಡಾ. ಜಿ.ಸಿ ಪ್ರಕಾಶ್ ಎ8 ರವಿರರಿಗೆ ಈಗಾಗಲೇ ನೀಡಿದ್ದ 12 ಕೋಟಿಗಳನ್ನು ಎ2 ಮುಖಾಂತರ ಎ1ಯಡಿಯೂರಪ್ಪರವರಿಗೆ ನೀಡುವುದಾಗಿ ತೆಗೆದುಕೊಂಡು ಹೋಗಿದ್ದು, ಕಾರಣಾಂತರಗಳಿಂದ ಹಣವೂ ಎ2 ವಿಜಯೇಂದ್ರರವರಿಗೆ ತಲುಪಿರುವುದಿಲ್ಲ ಎಂದು ಈ ಬಗೆಗಿನ ಮಾತುಕತೆ ಖಾಸಗಿ ಸುದ್ದಿ ವಾಹಿನಿ ಬಿತ್ತರವಾಗಿದೆ ಎಂದು ಇದಕ್ಕೆ ಸಂಬಂಧಿಸಿದಂತೆ ಸಿಡಿಯನ್ನು ದೂರಿನೊಂದಿಗೆ ಲಗತ್ತಿಸಿರುತ್ತೇನೆ ಎಂದು ಎ5 ಚಂದ್ರಕಾಂತ್ ರಾಮಲಿಂಗಂರವರು ಎ3 ಶಶಿಧರ್ ಮರಡಿ (ಯಡಿಯೂರಪ್ಪ ಮೊಮ್ಮಗ) ರವರೊಂದಿಗೆ ಸೇರಿ ಮಾತುಕತೆ ನಡೆಸಿ ಎ1 ಮುಖ್ಯಮಂತ್ರಿಗಳ ಮೇಲೆ ಪ್ರಭಾವವನ್ನು ಬೀರಿ ತನ್ನ ಕಂಪನಿ ಯೋಜನೆಗಳ ಮುಂದುವರಿಕೆಗೆ ಮತ್ತು ಅದಕ್ಕೆ ಸಂಬಂಧಿಸಿದ ಹಣ ಬಿಡುಗಡೆಗೆ ಮತ್ತು ಇತರೆ ಇಲಾಖೆಗಳ ಮೇಲೆ ಪ್ರಭಾವ ಬೀರುವಂತೆ ಹಾಗೂ ಎ3ರವರಿಗೆ ಹಣ ನೀಡುವುದಾಗಿ ಸರ್ಕಾರದ ಇತರೆ ಕಚೇರಿಗಳಾದ ಕೆಎನ್ಎನ್ಎಲ್ ತುಂಗಾ ಮಟ್ರೋನೈಸೇಷನ್ ಆಫ್ ಶಿವಮೊಗ್ಗ ಪ್ರೊಜೆಕ್ಟ್ , ಬೆಸ್ಕಾಂ , ಎಸ್ಕಾಂ ಹುಬ್ಬಳ್ಳಿ ಡಿಬಿಎಫ್ಒಟಿ ಪ್ರಾಜೆಕ್ಟ್, ಕೆಆರ್ಡಿಎಸ್ ಜೆಸ್ಕಾಂಇತ್ಯಾದಿ ಕಚೇರಿಗಳಲ್ಲಿ ಮುಖ್ಯಮಂತ್ರಿಗಳ ಪ್ರಭಾವ ಬಳಸಿ ಕೆಲಸ ಮಾಡಿಕೊಡುವಂತೆ ಕೇಳಿಕೊಂಡಿರುತ್ತಾರೆ ಎಂದು ಎಫ್ಐಆರ್ನಲ್ಲಿ ವಿರಿಸಲಾಗಿದೆ.
ಭ್ರಷ್ಟಾಚಾರ ಮತ್ತು ಕಿಕ್ಬ್ಯಾಕ್ ಆರೋಪ
ಈ ಬಗ್ಗೆ ವಾಟ್ಸ್ಆಪ್ ಸಂಭಾಷಣೆಯು ಎ3 ಮತ್ತು ಎ5ರವರ ಮಧ್ಯೆ ಆಗಿರುವುದಾಗಿಯು ಅದಕ್ಕೆ ಸಂಬಂಧಿಸಿದಂತೆ ದಾಖಲಾತಿಯನ್ನು ಲಗತ್ತಿಸಿರುವುದಾಗಿಯೂ ಆ ವಾಟ್ಸ್ಆಪ್ ಸಂಭಾಷಣೆಯಲ್ಲಿ ಎ5 ಮತ್ತು ಅವರ ಕಡೆಯವರಿಂದ ಎ3ರವರಿಗೆ ರೂಪಾಯಿ 1.5 ಕೋಟಿ ರೂ , ಪ್ಲಸ್ 1 ಕೋಟಿ ಪ್ಲಸ್ ರೂಪಾಯಿ 7.4 ಕೋಟಿ ಪ್ಲಸ್ ರೂಪಾಯಿ 1.6 ಕೋಟಿ ಒಟ್ಟು ರೂ.12.5 ಕೋಟಿ ಹಣವು ಎ1 ಯಡಿಯೂರಪ್ಪರವರಿಗೆ ಎ3 ಮೂಲಕ ತಲುಪಿರುವುದಾಗಿ ಮೆಸೇಜ್ ಮಾಡಿರುವುದು ಕಂಡು ಬಂದಿರುವುದಾಗಿಯು ಎ9 ವಿರುಪಾಕ್ಷಪ್ಪ ಯಮಕನಮರಡಿರವರು ಹಣ ಸ್ವೀಕರಿಸಿ ತಲುಪಿಸಿರುವ ಬಗ್ಗೆ 5 ಬಾರಿ ಎ5 ರವರೊಂದಿಗೆ ಪದೇ ಪದೇ ಸಂಪರ್ಕದಲ್ಲಿರುವುದು ಕಂಡು ಬಂದಿರುವುದಾಗಿಯು ಎ1 ರವರ ಕುಟುಂಬದವರಾದ ಎ2,ಎ3,ಎ4 ಮತ್ತು ಇತರರು ಭ್ರಷ್ಟಾಚಾರದ ಹಣ, ಕಿಕ್ ಬ್ಯಾಕ್ ಮತ್ತು ಲಂಚದ ಹಣವನ್ನು ಸ್ವೀಕರಿಸಲು ಶೆಲ್ ಕಂಪನಿಗಳ ಮೂಲಕ ಪಡೆದಿರುವ ಬಗ್ಗೆ 1 ಮೇ -ಎಸ್ ಬೆಲ್ ಗ್ರಾವಿಯ ಎಂಟರ್ ಪ್ರೈಸಸ್ ಲಿ. 2 ಮೇ ಎಸ್ ವಿಎಸ್ಎಸ್ ಸ್ಟೇಟ್ಸ್ ಇತ್ಯಾದಿ ಶೆಲ್ ಕಂಪನಿ ಮೂಲಕ ಆರ್ಥಿಕ ವ್ಯವಹಾರವನ್ನು ಮಾಡಿರುವ ಬಗ್ಗೆ ಸವಿವರವಾಗಿ ಬ್ಯಾಂಕ್ ವ್ಯವಹಾರಗಳ ವಿವಿರಗಳನ್ನು ಖಾಸಗಿ ಸುದ್ದಿ ವಾಹಿನಿ ಸಾರ್ವಜನಿಕವಾಗಿ ಬಿತ್ತರಗೊಂಡಿರುವುದಾಗಿಯು ಎ1 ಮುಖ್ಯಮಂತ್ರಿಗಳ ಹತ್ತಿರದ ಕುಟುಂಬದವರು 7ಶೆಲ್ ಕಂಪನಿಗಳ ಮೂಲಕ ಹಣವನ್ನು ಪಡೆದಿದ್ದು. ಆರೋಪಿಗಳ ವಿರುದ್ದ ಕಲಂ 7,8,9,10 ಮತ್ತು 13 ಪಿಸಿ ಆಕ್ಟ್ 1988 ಮತ್ತು ಐಪಿಸಿ 383, 384,415,418,420, 34 ಮತ್ತು 120(ಬಿ) ಕಾನೂನು ರೀತ್ಯಾ ಕ್ರಮವನ್ನು ಕೈಗೊಳ್ಳಬೇಕೆಂದು ದೂರನ್ನು ನೀಡಲಾಗಿದೆ.