ಹುಳಿಮಾವು ಕೆರೆ ಅತಿಕ್ರಮಣ ತೆರವಿಗೆ ಲೋಕಾಯುಕ್ತ ಸೂಚನೆ
ಬೆಂಗಳೂರು, ಡಿಸೆಂಬರ್.10: ನಗರದ ಅತಿದೊಡ್ಡ ಕೆರೆ ಆಗಿರುವ ಹುಳಿಮಾವು ಕೆರೆ ಪುನಶ್ಚೇತನಗೊಳಿಸುವಂತೆ ಲೋಕಾಯುಕ್ತ ಖಡಕ್ ಸಂದೇಶ ರವಾನಿಸಿದೆ. ಕೆರೆ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿರುವ ಲೋಕಾಯುಕ್ತ ಅಧಿಕಾರಿಗಳು, ಬಿಬಿಎಂಪಿ, ಬೆಂಗಳೂರು, ಜಲಮಂಡಳಿ, ಬಿಬಿಎಂಪಿ ಆಯುಕ್ತರು ಹಾಗೂ ಹುಳಿಮಾವು ವ್ಯಾಪ್ತಿಯ ತಹಶೀಲ್ದಾರ್ ಗೆ ಕಟ್ಟಪ್ಪಣೆ ಹೊರಡಿಸಿದೆ.
ಮುಂದಿನ ಲೋಕಾಯುಕ್ತ ವಿಚಾರಣೆ ವೇಳೆಗೆ ಅಧಿಕಾರಿಗಳ ತಂಡವು ಹುಳಿಮಾವು ಕೆರೆ ಹಾಗೂ ಸುತ್ತಮುತ್ತಲು ಅತಿಕ್ರಮಣವಾಗಿರುವ ಭೂಮಿ ಬಗ್ಗೆ ಸಂಪೂರ್ಣವಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಒಡೆದ ಹುಳಿಮಾವು ಕೆರೆ; ಸಮಿತಿ ರಚನೆ ಮಾಡಿದ ಸರ್ಕಾರ
ಸಿಲಿಕಾನ್ ಸಿಟಿ ಆಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕೆರೆಗಳು ಕಣ್ಮರೆಯಾಗುತ್ತಿವೆ. ಕೆರೆ ಅಭಿವೃದ್ಧಿಗೆ ಪಣ ತೊಟ್ಟಿರುವ 'ನಮ್ಮ ಬೆಂಗಳೂರು ಫೌಂಡೇಶನ್' ಹಿರಿಯ ಸ್ವಾತಂತ್ರ್ಯ ಹೋರಾಟಗಾರಿ ದೊರೆಸ್ವಾಮಿ ನೇತೃತ್ವದಲ್ಲಿ 'ಒಕ್ಕೂಟ ಬೆಂಗಳೂರು' ಹೋರಾಟ ನಡೆಸುತ್ತಿದೆ. ಬೆಂಗಳೂರಿನಲ್ಲಿನ ಕಸದ ಸಮಸ್ಯೆ, ಕೆರೆಗಳ ಅತಿಕ್ರಮಣ, ಪಟ್ಟಬದ್ಧ ಹಿತಾಸಕ್ತಿಗಳಿಂದ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಸಮಿತಿ ಮುಂದಾಗಿದೆ.
ಹುಳಿಮಾವು ಕೆರೆ ಒತ್ತುವರಿ ಮಾಡಿಕೊಂಡವರಿಗೆ ಬಿಸಿ
ಒಕ್ಕೂಟ ಬೆಂಗಳೂರು ತಂಡ ಕಳೆದ 2017ರ ಆಗಸ್ಟ್.03ರಂದು ಲೋಕಾಯುಕ್ತರಿಗೆ 23 ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಪೈಕಿ ಹುಳಿಮಾವು ಕೆರೆ ಕೂಡಾ ಒಂದಾಗಿದೆ. 145 ಎಕರೆ ಪ್ರದೇಶದ ಕೆರೆಯಲ್ಲಿ 19 ಎಕರೆ 26 ಗುಂಟೆ ಪ್ರದೇಶವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಬಿಡಿಎ ವತಿಯಿಂದಲೇ ಅತಿಹೆಚ್ಚು ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂದು ಕಂದಾಯ ಇಲಾಖೆಯೇ ವರದಿ ನೀಡಿದೆ. 17.33 ಎಕರೆ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡು ಲೇಔಟ್ ಹಾಗೂ ರಸ್ತೆಗಳ ನಿರ್ಮಾಣ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ ನೀಡುವಂತೆ ಲೋಕಾಯುಕ್ತ ನೋಟಿಸ್
ಭೂಮಿ ದಾಖಲೆ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ತಹಶೀಲ್ದಾರ್ ಗೆ ಲೋಕಾಯುಕ್ತ ನೋಟಿಸ್ ಜಾರಿಗೊಳಿಸಿದೆ. ಮುುಂದಿನ ವಿಚಾರಣೆ ವೇಳೆಗೆ ಸ್ಥಳ ಪರಿಶೀಲನೆ ಹಾಗೂ ಸಮೀಕ್ಷಾ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಇದಕ್ಕೂ ಮೊದಲು ಕಳೆದ 2018ರ ಸಪ್ಟೆಂಬರ್.11ರಂದು ಕೂಡಾ ಆದೇಶ ನೀಡಲಾಗಿತ್ತು. ಆದರೂ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ.
ಕೆಳದ ತಿಂಗಳಷ್ಟೇ ಒಡೆದಿದ್ದ ಹುಳಿಮಾವು ಕೆರೆ
ಕಳೆದ ನವೆಂಬರ್.24ರಂದು ಹುಳಿಮಾವು ಕೆರೆ ಒಡೆದು ಅಕ್ಕಪಕ್ಕದ ಬಡಾವಣೆಗಳಿಗೆಲ್ಲ ನೀರು ನುಗ್ಗಿತ್ತು. ಈ ವೇಳೆ ಸ್ಥಳಕ್ಕೆ ಸ್ವತಃ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ್ದರು. ನಂತರ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್, ಬಿಬಿಎಂಪಿ ಆಯುಕ್ತರು, ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಹಾಗೂ ಅಧಿಕಾರಿಗಳು, ಜೊತೆಗೆ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಎರಡು ವಾರಗಳಲ್ಲಿ ಮಧ್ಯಂತರ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಇಂದು ನಡೆದ ವಿಚಾರಣೆಯಲ್ಲಿ ಅಧಿಕಾರಿಗಳು ಮಧ್ಯಂತರ ವರದಿ ಸಲ್ಲಿಸಿದ್ದಾರೆ.
ವಿಪತ್ತು ನಿರ್ವಹಣಾ ಮಾರ್ಗಸೂಚಿಗೆ ಅನುಗುಣವಾಗಿ ಕೆರೆ ಒಡೆದಿದ್ದರಿಂದ ಆಗಿರುವ ಹಾನಿ ಹಾಗೂ ಜನರು ಎದುರಿಸುತ್ತಿರುವ ಕುಂದುಕೊರತೆಗಳ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಲೋಕಾಯುಕ್ತರಿಗೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮನವಿ
ಹುಳಿಮಾವು ಕೆರೆ ಅತಿಕ್ರಮಣಕಾರರ ಮೇಲೆ ಮೊದಲು ಕ್ರಮ ಜರುಗಿಸುವಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ಪತ್ರ ಬರೆದಿದ್ದು, ಕೆರೆ ಪುನಶ್ಚೇತನಕ್ಕೂ ಮೊದಲು ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಸಲಹೆ ನೀಡಿದ್ದಾರೆ.
ಇದರ ಜೊತೆಗೆ ಕೆರೆ ಒಡೆದು ಹಾನಿಗೊಳಗಾದ ಪ್ರದೇಶದಲ್ಲಿರುವ ಮಕ್ಕಳಿಗೆ ಬಿಬಿಎಂಪಿ ವತಿಯಿಂದಲೇ ಏಳು ದಿನಗಳ ಒಳಗೆ ಶಾಲಾ ಸಮವಸ್ತ್ರ ನೀಡಬೇಕು. 2020ರ ಜನವರಿ.10ರೊಳಗೆ ಈ ಪ್ರದೇಶದಲ್ಲಿ ಹಾನಿಯಾಗಿರುವ 374 ಮನೆಗಳ ನಿವಾಸಿಗಳಿಗೆ ಪರಿಹಾರ ನೀಡಬೇಕು. ಬಿಬಿಎಂಪಿ, ಬೆಂಗಳೂರು ಜಲ ಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು. ಎರಡು ವಾರಗಳಲ್ಲಿ ತಹಶೀಲ್ದಾರ್ ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸಬೇಕು ಎಂದು ಹೇಳಲಾಗಿದೆ.
ತಡವಾದರೂ ಉತ್ತಮ ಆದೇಶ ಎಂದ ದೊರೆಸ್ವಾಮಿ
ಎರಡು ವರ್ಷಗಳ ಕಾಲ ತಡವಾಗಿದ್ದಕ್ಕೆ ಬೇಸರವಾದರೂ ಸಹ ಕೆರೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಹಾಗೂ ಸಾರ್ವಜನಿಕರು ಎಂಬ ಬೇಧ-ಭಾವ ಬೇಕಾಗಿಲ್ಲ. ಜನಸಾಮಾನ್ಯರೇ ಆಗಲಿ, ಬಿಡಿಎ ಆಗಿರಲಿ, ಕೆರೆ ಅತಿಕ್ರಮಣ ಮಾಡಿಕೊಂಡಿದ್ದರೆ ತೆರವುಗೊಳಿಸಬೇಕಷ್ಟೇ. ಸಾರ್ವಜನಿಕ ಆಸ್ತಿಯನ್ನು ಕಾಪಾಡುವ ನೈತಿಕ ಹೊಣೆ ನಮ್ಮೆಲ್ಲರ ಮೇಲೂ ಇದೆ. ಮುಂದಿನ ಪೀಳಿಗೆಗಾಗಿ ಪರಿಸರವನ್ನು ಕಾಪಾಡಬೇಕಿದೆ ಎಂದು ದೊರೆಸ್ವಾಮಿ ಹೇಳಿದ್ದಾರೆ.