ಅಶ್ವಿನ್ ರಾವ್ ಹಣ ಸುಲಿಗೆಗೆ ಬಾಲಿವುಡ್ ಚಿತ್ರವೇ ಪ್ರೇರಣೆ!
ಬೆಂಗಳೂರು, ಜುಲೈ 27 : ಅಪ್ಪ, ಕರ್ನಾಟಕದ ಲೋಕಾಯುಕ್ತ ವೈ ಭಾಸ್ಕರ್ ರಾವ್ ಹೆಸರು ಹೇಳಿ 'ಭ್ರಷ್ಟ' ಅಧಿಕಾರಿಗಳಿಂದ ಹಣ ಕೀಳುವ ದಂಧೆಯಲ್ಲಿ ತೊಡಗಿದ್ದ ಅಶ್ವಿನ್ ರಾವ್ ಕಥೆಯೇ ಒಂದು ಬ್ಲಾಕ್ ಬಸ್ಟರ್ ಸಿನೆಮಾ ತೆಗೆಯಲು ಯೋಗ್ಯವಾಗಿದೆ. ಎಲ್ಲಿ ರಾಮ್ ಗೋಪಾಲ್ ವರ್ಮಾ?
ಆದರೆ, ತಮಾಷೆಯಂದ್ರೆ ಅವರು ತಾವೊಬ್ಬ ಲೋಕಾಯುಕ್ತ ಅಧಿಕಾರಿ (ಕೃಷ್ಣ ರಾವ್) ಎಂದು ಹೇಳಿಕೊಂಡು, ಸರಕಾರಿ ಅಧಿಕಾರಿಗಳನ್ನು ಬೆದರಿಸಿ, ಅವರಿಂದ ಹಣ ಕೀಳುತ್ತಿದ್ದುದಕ್ಕೆ ಪ್ರೇರೇಪಣೆ ಸಿಕ್ಕಿದ್ದೇ ಬಾಲಿವುಡ್ ಸಿನೆಮಾದಿಂದ ಎಂದು ಎಸ್ಐಟಿಯ ಅಧಿಕಾರಿಯೊಬ್ಬರು ಒನ್ಇಂಡಿಯಾಗೆ ತಿಳಿಸಿದ್ದಾರೆ.
ಇಂಟರ್ನ್ಯಾಷನಲ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯಿಸಿದ್ದ 'ಸ್ಪೆಷಲ್ 26' ಹಿಂದಿ ಚಿತ್ರವನ್ನು ನೋಡಿದ್ದರೆ, ತೆಲಂಗಾಣದ ಕಿಲಾಡಿ ಉದ್ಯಮಿ ಅಶ್ವಿನ್ ರಾವ್ ಯಾವ ರೀತಿ ಕಾರ್ಯಾಚರಣೆ ನಡೆಸಿ, ಕೇವಲ ಫೋನ್ ಕಾಲ್ ಮುಖಾಂತರ ಹೇಗೆ ಹಣ ಸುಲಿಗೆ ಮಾಡುತ್ತಿದ್ದ ಎಂಬುದರ ಚಿತ್ರಣ ನಿಮಗೆ ಸಿಗುತ್ತದೆ. [ಅಶ್ವಿನ್ ಬಂಧನ : ಯಾರು, ಏನು ಹೇಳಿದರು?]
ಯಾರು ಅಶ್ವಿನ್ ರಾವ್? : ಹೈದರಾಬಾದಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡಿಕೊಂಡು, ಸಣ್ಣಪುಟ್ಟ ಹಗರಣಗಳಲ್ಲಿ ಆಗಾಗ ಕಾಣಿಸಿಕೊಂಡು ಹಾಯಾಗಿದ್ದ ಅಶ್ವಿನ್ ರಾವ್ ಯಾರೆಂಬುದೇ ಕರ್ನಾಟಕದ ಜನತೆಗೆ ಗೊತ್ತಿರಲಿಲ್ಲ. ಕೃಷ್ಣಮೂರ್ತಿ ಎಂಬ ಇಂಜಿನಿಯರ್ ಅಶ್ವಿನ್ ವಿರುದ್ಧ ದೂರು ಕೊಟ್ಟ ನಂತರವಷ್ಟೇ ಆತನ ಹಗರಣಗಳು ಬೆಳಕಿಗೆ ಬಂದಿದ್ದು.
ಕರ್ನಾಟಕದಲ್ಲಿ ಮಾತ್ರವಲ್ಲ ಹೈದರಾಬಾದಿನಲ್ಲಿ ಕೂಡ ಅವರ ತಂದೆ, ಕರ್ನಾಟಕದ ಲೋಕಾಯುಕ್ತ ವೈ ಭಾಸ್ಕರ್ ರಾವ್ ಅವರ ಹೆಸರು ಹೇಳಿಕೊಂಡು ಅಶ್ವಿನ್ ರಾವ್ ಅವರಿವರಿಂದ ಹಣ ಕೀಳುತ್ತಿದ್ದ. ಆದರೆ, ಕರ್ನಾಟಕಕ್ಕೆ ಭಾಸ್ಕರ್ ರಾವ್ ಲೋಕಾಯುಕ್ತರಾಗುತ್ತಿದ್ದಂತೆ, ಅಶ್ವಿನ್ ರೊಟ್ಟಿ ಕೈಜಾರಿ ತುಪ್ಪದಲ್ಲಿ ಬಿದ್ದಿತ್ತು. ಹೈದರಾಬಾದಿನಲ್ಲೇ ಹೆಚ್ಚಾಗಿ ಇರುತ್ತಿದ್ದ ಅಶ್ವಿನ್, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಬರುವುದನ್ನು ಹೆಚ್ಚಿಸಿಕೊಂಡಿದ್ದರು.
ಹಲೋ, ಕೃಷ್ಣ ರಾವ್ ಮಾತಾಡ್ತಿದ್ದೀನಿ : "ಹಲೋ, ನಾನು ಕೃಷ್ಣ ರಾವ್, ಲೋಕಾಯುಕ್ತದ ಜಂಟಿ ಆಯುಕ್ತ" ಎಂದು ಮಾತನ್ನು ಆರಂಭಿಸುತ್ತಿದ್ದ ಅಶ್ವಿನ್ ರಾವ್ ಭ್ರಷ್ಟ ಅಧಿಕಾರಿಗಳನ್ನು ಬೆದರಿಸಿ ತಮ್ಮ ಜೋಳಿಗೆ ತುಂಬಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ಅಶ್ವಿನ್ ಸೃಷ್ಟಿಸಿಕೊಂಡಿದ್ದ ಹೆಸರು ಕೃಷ್ಣ ರಾವ್. ತನಿಖೆಯ ಆರಂಭದಲ್ಲಿ ಕೃಷ್ಣ ರಾವ್ ಬೇರೆ ಯಾವುದೋ ವ್ಯಕ್ತಿ ಎಂದೇ ನಂಬಲಾಗಿತ್ತು.
ಅಶ್ವಿನ್ ರಾವ್ ಅವರ ಕೈವಾಡ ಈ ಹಗರಣದಲ್ಲಿ ಇದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಅವರನ್ನು ಬಂಧಿಸಲಾಗಿರಲಿಲ್ಲ. ನೋಟೀಸ್ ಜಾರಿ ಮಾಡಿತ್ತಾದರೂ ಅಶ್ವಿನ್ ತಲೆಮರೆಸಿಕೊಂಡಿದ್ದರು. ಪಟ್ಟುಬಿಡದ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಲಾಬೂರಾಮ್ ಅವರ ನೇತೃತ್ವದ ವಿಶೇಷ ತನಿಖಾ ದಳ ಅಶ್ವಿನ್ ಅವರನ್ನು ಬಂಧಿಸಿ ಬೆಂಗಳೂರಿಗೆ ಎಳೆತಂದಿದೆ. [ಜಂಟಿ ಆಯುಕ್ತ ಸಯ್ಯದ್ ರಿಯಾಜ್ ಬಂಧನ]