ಕಿಕ್ ಬ್ಯಾಕ್, ಸ್ವಯಂಪ್ರೇರಿತ ಲೋಕಾಯುಕ್ತ ದೂರು ದಾಖಲಿಸಿ: ಸಂಸದ ರಾಜೀವ್
ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡಬೇಕು ಎಂಬ ಉದ್ದೇಶದ ಹಿಂದೆ ಹಣ ಹೊಡೆಯುವ ಹುನ್ನಾರವಿದೆ ಎಂಬ ಯಡಿಯೂರಪ್ಪ ಆರೋಪದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ
ಬೆಂಗಳೂರು, ಫೆಬ್ರವರಿ 17: ಉಕ್ಕಿನ ಸೇತುವೆ ನಿರ್ಮಾಣದಲ್ಲಿ 150 ಕೋಟಿ ರುಪಾಯಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ಸಿಕ್ಕಿರುವ ಮಾಹಿತಿ ಆಧರಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮಾಡಿರುವ ಆರೋಪದ ಬಗ್ಗೆ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಬೆಂಗಳೂರು ನಾಗರಿಕರ ಹಿತದೃಷ್ಟಿಯಿಂದ ಈ ಆರೋಪದಲ್ಲಿನ ಸತ್ಯಾಸತ್ಯತೆ ಬಗ್ಗೆ ಲೋಕಾಯುಕ್ತರು ಪರಿಶೀಲನೆ ನಡೆಸಬೇಕು ಎಂದು ಕೂಡ ಒತ್ತಾಯಿಸಿದ್ದಾರೆ. "ಈ ಬಗ್ಗೆ 2016ರ ಜೂನ್ ನಲ್ಲಿ ಮೊದಲನೆಯದಾಗಿ ನಾನು ಹೇಳಿದ್ದೆ. ಈ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ ಎಂಬ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಬಿಡಿಎ ಆಯುಕ್ತರಿಗೆ ಪತ್ರ ಬರೆದಿದ್ದೆ" ಎಂದು ಹೇಳಿದ್ದಾರೆ.[ಬಿಎಸ್ವೈ ತಾವೇ ಗಾಜಿನ ಮನೆಯಲ್ಲಿದ್ದಾರೆ : ಧ್ರುವನಾರಾಯಣ ವ್ಯಂಗ್ಯ]
ಉಕ್ಕಿನ ಸೇತುವೆ ಬೆಂಗಳೂರಿಗಾಗಿ ಕೈಗೆತ್ತಿಕೊಂಡಿರುವ ಯೋಜನೆ ಅಲ್ಲ. ಮುಂಬರುವ ಚುನಾವಣೆಗೆ ಹಣ ಸಂಗ್ರಹಿಸುವ ಉದ್ದೇಶಕ್ಕೆ ಗುತ್ತಿಗೆದಾರರಿಗೆ ರೂಪುಗೊಂಡಿರುವ ಯೋಜನೆ. ಬೆಂಗಳೂರಿನ ಜನರ ಅನುಕೂಲಕ್ಕಾಗಿ ಈ ಯೋಜನೆ ಕೈಗೆತ್ತಿಕೊಂಡಿರುವುದಾಗಿ ನಂಬಿಸಲು ನಾಚಿಕೆ ಇಲ್ಲದ ರಾಜಕಾರಣಿಗಳ ಗುಂಪು ಯತ್ನಿಸುತ್ತಿದೆ ಎಂದು ಹೇಳಿದರು.
ಕಾನೂನುಬಾಹಿರ ಚಟುವಟಿಕೆ ಬಗ್ಗೆ ಡೈರಿಯಲ್ಲಿ ಮಾಹಿತಿ ಸಿಕ್ಕಿರುವುದು ಕ್ರಿಮಿನಲ್ ವಿಚಾರಣೆ ನಡೆಸಲು ಮಹತ್ವದ ಸಾಕ್ಷ್ಯವಾಗುತ್ತದೆ. ಏಕೆಂದರೆ ಈ ಡೈರಿ ಸಿಕ್ಕಿರುವುದು ಸಾಮಾನ್ಯ ವ್ಯಕ್ತಿಯ ಮನೆಯಲ್ಲಲ್ಲ. ಗೋವಿಂದರಾಜು ಅವರು ವಿಧಾನಪರಿಷತ್ ಸದಸ್ಯರು. ಇದೇ ಸಾಕು ಈ ಪ್ರಕರಣ ಇತರ ಪ್ರಕರಣಗಳಿಗಿಂತ ಭಿನ್ನವಾಗುತ್ತದೆ. ಲೋಕಾಯುಕ್ತ ಮತ್ತು ಇತರ ತನಿಖಾ ಸಂಸ್ಥೆಗಳು ಸ್ವಯಂಪ್ರೇರಿತ ದೂರು ದಾಖಲಿಸನೇಕು ಎಂದು ಆಗ್ರಹಿಸಿದ್ದಾರೆ.[ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ; ನೋಟಿಸ್ ಜಾರಿ]
ಅಗತ್ಯ ಮಾಹಿತಿಯನ್ನು ಆದಾಯತೆರಿಗೆ ಇಲಾಖೆಯಿಂದ ಪಡೆಯಬೇಕು. ಏಕೆಂದರೆ ಸದ್ಯಕ್ಕೆ ಡೈರಿ ಅ ಇಲಾಖೆಯ ಬಳಿಯಲ್ಲಿರುತ್ತದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಭ್ರಷ್ಟರನ್ನು ಕಾನೂನು ವ್ಯಾಪ್ತಿಗೆ ತರುತ್ತಾರೆ ಎಂದು ಕರ್ನಾಟಕದ ಜನತೆ ಲೋಕಾಯುಕ್ತದ ಕಡೆ ನೋಡುತ್ತಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ನ ಅಮಿತಾವ್ ರಾವ್ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ದೋಷಿ ಎಂದು ಘೋಷಿಸಿದ ತೀರ್ಪಿನಲ್ಲಿ ಹೇಳಿದ ಸಂಗತಿಗಳು ಭ್ರಷ್ಟಾಚಾರ ಪ್ರಕರಣದ ವಿರುದ್ಧ ಕೈಗೊಳ್ಳಬೇಕಾದ ಕ್ರಮಕ್ಕೆ ಮಾರ್ಗದರ್ಶಿಯಂತಿದೆ ಎಂದು ಅವರು ಹೇಳಿದ್ದಾರೆ.