8 ವಾರದೊಳಗೆ ಕಗ್ಗದಾಸಪುರ, ಅಬ್ಬಿಗೆರೆ ಕೆರೆ ಒತ್ತುವರಿ ತೆರವಿಗೆ ಸೂಚನೆ
ಬೆಂಗಳೂರು, ಮೇ 28: ಬೆಂಗಳೂರಿನ ಮೂವತ್ತು ಕೆರೆಗಳಲ್ಲಿನ ಒತ್ತುವರಿ ಹಾಗೂ ಮಾಲಿನ್ಯದ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದ್ದು, ಆ ಪೈಕಿ ಮಂಗಳವಾರದಂದು ಕಗ್ಗದಾಸಪುರ ಹಾಗೂ ಅಬ್ಬಿಗೆರೆ ಕೆರೆಗಳ ಬಗ್ಗೆ ವಿಚಾರಣೆ ನಡೆಸಲಾಯಿತು. ಸರ್ವೇ ವರದಿ ಪ್ರಕಾರ, ಕಗ್ಗದಾಸಪುರ ಕೆರೆಯ ಒಂದು ಎಕರೆ ಒತ್ತುವರಿ ಆಗಿದೆ. ಅದಕ್ಕೆ ಹೋಗುವ ಚರಂಡಿ ನೀರು ತಡೆಯಲು ಬೆಂಗಳೂರು ಜಲ ಮಂಡಳಿ ಯಾವ ಪ್ರಯತ್ನವನ್ನೂ ಮಾಡಿಲ್ಲ.
ಹದಿನಾರು ಕೋಟಿಗೂ ಹೆಚ್ಚು ಆರ್ಥಿಕ ಅನುದಾನವನ್ನು ಜಲಮಂಡಳಿಗೆ ಕೆಎಸ್ ಪಿಸಿಬಿಯಿಂದ ನೀಡಿದ್ದು, ಎಸ್ ಟಿಪಿ ನಿರ್ಮಾಣಕ್ಕೆ ಸೂಚಿಸಲಾಗಿದೆ. ಎಸ್ ಟಿಪಿ ಇನ್ನೂ ಅನುಷ್ಠಾನಕ್ಕೆ ಬರಬೇಕಿದ್ದು, ಟೆಂಡರ್ ಆಗಬೇಕಿದೆ. ಈ ಎರಡು ಕೆರೆಗಳ ಒತ್ತುವರಿಯನ್ನು ಇನ್ನು ಎಂಟು ವಾರದೊಳಗೆ ತೆರವು ಮಾಡಿಸಬೇಕು ಎಂದು ಲೋಕಾಯುಕ್ತರು ತಹಶೀಲ್ದಾರ್ ಗೆ ನಿರ್ದೇಶನ ನೀಡಿದ್ದಾರೆ.
ಕಲುಷಿತ ಕಗ್ಗದಾಸಪುರ ಕೆರೆ, ಲೋಕಾಯುಕ್ತ ನಿರ್ದೇಶನದ ಮೇರೆಗೆ ಪರಿಶೀಲನೆ
ಅಬ್ಬಿಗೆರೆ ಕೆರೆಯು ಎರಡು ತಾಲೂಕುಗಳಿಗೆ ಸೇರುವಂಥದ್ದಾಗಿದ್ದು, ಎರಡು ಸರ್ವೇ ನಂಬರ್ ಇದೆ. ಕೆರೆಯ ಒಂದು ಭಾಗ ಸರ್ವೇ ಮಾಡಿದ್ದು, ಆ ಪ್ರಕಾರ ಒಂದೂವರೆ ಎಕರೆ ಜಲಮಂಡಳಿಯಿಂದ ಒತ್ತುವರಿ ಅಗಿದೆ. ಅರ್ಧ ಎಕರೆ ಖಾಸಗಿ ಬಿಲ್ಡರ್ ಗಳಿಂದ ರಸ್ತೆ ನಿರ್ಮಾಣಕ್ಕಾಗಿ ಒತ್ತುವರಿ ಆಗಿದೆ. ಕೆರೆಯ ಇನ್ನರ್ಧ ಭಾಗದ ಸರ್ವೇ ಜೂನ್ ಹನ್ನೊಂದಕ್ಕೆ ಆರಂಭ ಆಗಲಿದ್ದು, ಜೂನ್ ಮಧ್ಯ ಭಾಗದೊಳಗೆ ವರದಿ ಸಲ್ಲಿಕೆ ಆಗಲಿದೆ.
ಇದು ಹೊರತುಪಡಿಸಿ, ಸ್ವಯಂಪ್ರೇರಿತರಾಗಿ, ರಾಜ್ಯದ ಮೂವತ್ತು ಜಿಲ್ಲೆಗಳ ಕೆರೆಗಳ ಬಗ್ಗೆ ವರದಿ ನೀಡುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಲೋಕಾಯುಕ್ತರು ಕೇಳಿದ್ದಾರೆ. ಇನ್ನು ಇದೇ ರೀತಿಯ ಸಮಸ್ಯೆ ಇರುವಂಥ ಕೆರೆಗಳ ಬಗ್ಗೆ ದೂರು ನೀಡುವುದಿದ್ದರೆ ಶೀಘ್ರವೇ ನೀಡುವಂತೆ ಯುನೈಟೆಡ್ ಬೆಂಗಳೂರು ಸಂಸ್ಥೆಗೆ ಲೋಕಾಯುಕ್ತರು ಅವಕಾಶ ನೀಡಿದ್ದಾರೆ.
ಕೆರೆಗಳ ಪುನರುಜ್ಜೀವನಕ್ಕೆ ಖರ್ಚು ಮಾಡಿರುವ ಹಣದ ಬಗ್ಗೆ ಪ್ರತ್ಯೇಕವಾದ ವಿಚಾರಣೆ ನಡೆಸಬೇಕಾಗಬಹುದು ಎಂದು ಲೋಕಾಯುಕ್ತ ಅಭಿಪ್ರಾಯ ಪಟ್ಟಿದ್ದಾರೆ. ಈ ಮಧ್ಯೆ ಬಿಡಿಎನಿಂದ ಪುನರುಜ್ಜೀವನವಾದ ಹದಿನೇಳು ಕೆರೆಗಳ ಬಗ್ಗೆ ಲೋಕಾಯುಕ್ತರ ಗಮನಕ್ಕೆ ತರಲಾಯಿತು. ಅವು ಯಾವುದರಲ್ಲೂ ಸಿಲ್ಟ್ ಟ್ರಾಪ್ಸ್ ಅಳವಡಿಸಿದ್ದು, ಈಗಿಲ್ಲ ಎಂಬುದನ್ನು ತಿಳಿಸಲಾಯಿತು. ಮುಂದಿನ ವಿಚಾರಣೆಯು ಜೂನ್ 20ಕ್ಕೆ ನಿಗದಿ ಆಗಿದೆ.