ಕಾಂಗ್ರೆಸ್ ನಿರ್ಮಾಣ, ನಿರ್ದೇಶನದ ಸಿನಿಮಾ ಕಥೆ ಹೇಳಿದ ಆರ್. ಅಶೋಕ್
Recommended Video
ಬೆಂಗಳೂರು, ಮೇ 21: 'ಇದನ್ನೂ ಟೀಸರ್. ಶೀಘ್ರದಲ್ಲಿಯೇ ಕಾಂಗ್ರೆಸ್ನ ಸಿನಿಮಾ ಬಿಡುಗಡೆಯಾಗಲಿದೆ' ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರಾಜ್ಯದಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೇ ಕಾರಣ ಎಂದು ಹಿರಿಯ ನಾಯಕ ರೋಷನ್ ಬೇಗ್ ನೀಡಿರುವ ಹೇಳಿಕೆ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.
ಮೈತ್ರಿ ಸರ್ಕಾರದ ಪತನಕ್ಕೆ ಕಾಯುತ್ತಿರುವ ಬಿಜೆಪಿಗೆ ಕತ್ತಿ ಝಳಪಿಸಲು ರೋಷನ್ ಬೇಗ್ ಮತ್ತೊಂದು ಆಯುಧವನ್ನು ನೀಡಿದ್ದಾರೆ. ರೋಷನ್ ಬೇಗ್ ಹೇಳಿಕೆಯನ್ನು ಮುಂದಿಟ್ಟುಕೊಂಡು ಆರ್. ಅಶೋಕ್, ಕಾಂಗ್ರೆಸ್ ನಿರ್ಮಾಣ, ನಿರ್ದೇಶನದ ಸಿನಿಮಾ ಕಥೆ ಹೇಳಿದ್ದಾರೆ.
ಸಿದ್ದರಾಮಯ್ಯ ಮೇಲೆ ಕೆಂಡಕಾರಿದ ರೋಷನ್ ಬೇಗ್: ಸೋತ್ರೆ ನೀವೇ ಕಾರಣ
ಕಾಂಗ್ರೆಸ್ನ ಟ್ರೇಲರ್ ಬಿಡುಗಡೆಯಾಗಿದೆ. ಮೇ 23ರಂದು ಸಂಪೂರ್ಣ ಸಿನಿಮಾ ಬಿಡುಗಡೆಯಾಗಲಿದೆ. ಆಗ ಅದಲ್ಲಿ ಹೀರೋಗಳೇ ಇರುವುದಿಲ್ಲ. ಅಲ್ಲಿ ಉಳಿಯುವುದು ಬರೀ ವಿಲನ್ಗಳು ಮತ್ತು ಕಾಮಿಡಿಯನ್ಗಳು ಮಾತ್ರ ಎಂದು ಅಶೋಕ್ ಲೇವಡಿ ಮಾಡಿದ್ದಾರೆ. ಈ ಮಾತನ್ನು ತಾವು ಹೇಳುತ್ತಿಲ್ಲ. ವಿರೋಧಪಕ್ಷದ ಯಾರೂ ಹೇಳುತ್ತಿಲ್ಲ. ಇದನ್ನು ಹೇಳಿದವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ಏಳೆಂಟು ಬಾರಿ ಶಾಸಕರಾಗಿ, ಮಂತ್ರಿಯಾಗಿ ಅಲ್ಪಸಂಖ್ಯಾತ ಸಮುದಾಯ ಹಿರಿಯ ಸಚಿವರಾಗಿ ಮಾಡಿರುವವರು ಎಂದು ರೋಷನ್ ಬೇಗ್ ಅವರ ಹೆಸರನ್ನು ಉಲ್ಲೇಖಿಸದೆ ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.
ಉಳಿಯುವುದು ವಿಲನ್ಗಳು ಮಾತ್ರ
ರೋಷನ್ ಬೇಗ್ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಇಬ್ಬರು ವಿಲನ್ಗಳನ್ನು ಫೋಕಸ್ ಮಾಡಿದ್ದಾರೆ. ಮುಖ್ಯ ವಿಲನ್ ಸಿದ್ದರಾಮಯ್ಯ. ಸಬ್ ವಿಲನ್ ದಿನೇಶ್ ಕುಮಾರ್. ಆಮೇಲೆ ಕಾಮಿಡಿಯನ್, ಜೋಕರ್ ಇದ್ದಾರೆ. ಅವರು ಕರ್ನಾಟಕದ ಕಾಂಗ್ರೆಸ್ ಇನ್ಚಾರ್ಜ್ ವೇಣುಗೋಪಾಲ್.
ಮೇ 23ರಂದು ಫಲಿತಾಂಶ ಪ್ರಕಟವಾದ ಬಳಿಕ ಮುಖ್ಯ ಸಿನಿಮಾ ಬಿಡುಗಡೆಯಾಗುತ್ತದೆ. ಅದರಲ್ಲಿ ಇನ್ನೊಂದಿಷ್ಟು ಜನ ವಿಲನ್ಗಳು ಬರುತ್ತಾರೆ. ಹೀರೋ ಇಲ್ಲದ ಕಾಂಗ್ರೆಸ್ ವಿಲನ್ಗಳ ಪಕ್ಷವಾಗಲಿದೆ. ಅಲ್ಲಿ ಹೀರೋಗಳಿಲ್ಲ, ವಿಲನ್ಗಳು ಮತ್ತು ಕಾಮಿಡಿಯನ್ಗಳು ಮಾತ್ರ ಇರುತ್ತಾರೆ. ಅದನ್ನು ಅಲ್ಲಿನ ಹಿರಿಯ ನಾಯಕರೇ ಹೇಳಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.
ರೋಷನ್ ಬೇಗ್ ಹೇಳಿಕೆಗೆ ಕಾಂಗ್ರೆಸ್ಸಿಗರು ಫುಲ್ ಗುಸ್ಸಾ: ಕೋಳಿ, ಕಬಾಬ್ ಏನಿದು?
ಬಿಜೆಪಿಯಲ್ಲಿ ಈಗಲೇ ಸಂಭ್ರಮ
ಕಾಂಗ್ರೆಸ್ ಗೊಂದಲ ಗೂಡಾಗಿದೆ. ಅಲ್ಲಿ ಇರುವುದಕ್ಕಲ್ಲ, ನೋಡುವುದಕ್ಕೂ ಇಷ್ಟಪಡದೆ ಇರುವ ಶಾಸಕರು ಇದ್ದಾರೆ. ಮೇ 23ರಂದು ಮುಖ್ಯ ಸಿನಿಮಾ ಬಿಡುಗಡೆಯಾದ ಬಳಿಕ ಈ ಸರ್ಕಾರದ ಬಂಡವಾಳ ಬಯಲಾಗುತ್ತದೆ. ಬೀದಿ ರಂಪವಾಗುತ್ತದೆ. ಈ ಸರ್ಕಾರ ಇರುತ್ತದೆಯೋ ಇಲ್ಲವೋ ಪ್ರಶ್ನೆ ಬರುತ್ತದೆ. ಎಲ್ಲರೂ ಗಡುವು ನೀಡಿರುವುದು ಮೇ 23ಕ್ಕೆ. ಅದು ಬಿಜೆಪಿಗೆ ಸಂಭ್ರಮದ ದಿನ. ಬಿಜೆಪಿ ಮತ್ತೆ ಗೆಲ್ಲುತ್ತದೆ, ಮೋದಿ ಪ್ರಧಾನಿ ಆಗುತ್ತಾರೆ ಎಂಬ ಸಂಭ್ರಮ ಬಿಜೆಪಿಯಲ್ಲಿ ಮೂಡಿದೆ ಎಂದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಬೇಗ್ ಹೇಳಿಕೆ: ವಿಶ್ವನಾಥ್ ಸಮರ್ಥನೆ
ಓಡು ಓಡು ರೆಸಾರ್ಟ್ ಓಡು
ಓಡು ಓಡು ರೆಸಾರ್ಟ್ ಕಡೆ ಓಡು. ಈಗಲ್ಟನ್ ಕಡೆ ಓಡು ಎಂಬ ಸ್ಕೀಮಲ್ಲಿ ಕಾಂಗ್ರೆಸ್ನವರು ಇರುತ್ತಾರೆ. ಕಾಂಗ್ರೆಸ್ನವರ ನಡೆ ಓಡುವ ಕಡೆ. ಕಾಂಗ್ರೆಸ್ ನಡೆ ಈಗಲ್ಟನ್ ರೆಸಾರ್ಟ್ಗೆ ಓಡುವ ಕಡೆ. ರೋಷನ್ ಬೇಗ್ ಸ್ಯಾಂಪಲ್ ಬಿಡುಗಡೆ ಮಾಡಿದ್ದಾರೆ. ಇನ್ನೂ ಜಾರಕಿಹೊಳಿ ಅವರದಿದೆ. ಬಳ್ಳಾರಿ, ಬೆಳಗಾವಿ ಬೇರೆ ಬೇರೆ ಜಿಲ್ಲೆಗಳಲ್ಲಿ ಫಿಲಂ ರಿಲೀಸ್ ಆಗುತ್ತದೆ.
ಆಗ ಕಾಂಗ್ರೆಸ್ ಪರಿಸ್ಥಿತಿ ನಿಜಕ್ಕೂ ಓಡು ಓಡು ಓಡು. ಎಲ್ಲಿ ಓಡಬೇಕು, ಎಲ್ಲಿ ಅವಿತುಕೊಳ್ಳಬೇಕು ಎನ್ನುವ ಸ್ಥಿತಿ ಬರುತ್ತದೆ. ಮಂಡ್ಯ, ತುಮಕೂರು ರಿಸಲ್ಟ್ ಮೇಲೆ ಸರ್ಕಾರದಲ್ಲಿ ಭೂಕಂಪ ಆಗುತ್ತದೆ. ಲಾವಾರಸ ಉಕ್ಕಿ ಯಾರ ಮೇಲೆ ಹರಿಯುತ್ತದೆಯೋ ಗೊತ್ತಿಲ್ಲ. ಸರ್ಕಾರ ಅಂತೂ ಭೂಕಂಪದಲ್ಲಿ ಬಿದ್ದುಹೋಗುತ್ತದೆ ಎಂದು ಟೀಕಿಸಿದ್ದಾರೆ.
ವೈದ್ಯರು ಡೆಡ್ ಎಂದು ಘೋಷಿಸುತ್ತಾರೆ
ಈ ಸಿನಿಮಾಕ್ಕೆ ಪ್ರೊಡ್ಯೂಸರ್, ಡೈರೆಕ್ಟರ್ ಎಲ್ಲವೂ ಕಾಂಗ್ರೆಸ್. ಯಾರು ಡೈರೆಕ್ಟರ್ ಇದ್ದಾರೋ ಅವರನ್ನೇ ವಿಲನ್ ಎಂದು ರೋಷನ್ ಬೇಗ್ ಹೇಳಿದ್ದಾರೆ. ಪ್ರೊಡ್ಯೂಸರ್ಗೇ ಜೋಕರ್ ಎಂದಿದ್ದಾರೆ. ಈ ಸರ್ಕಾರ 11 ತಿಂಗಳ ಕಾಲ ಆಸ್ಪತ್ರೆಯಲ್ಲಿ ಕೋಮಾದಲ್ಲಿತ್ತು. ಮೇ 23ರಂದು ವೈದ್ಯರು 'ಡೆಡ್' ಎಂದು ಘೋಷಣೆ ಮಾಡುತ್ತಾರೆ ಎಂದು ಅಶೋಕ್ ಹೇಳಿದ್ದಾರೆ.