ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಯ್ಕೆಯ ಒಳಸುಳಿ
Recommended Video
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಹೆಸರನ್ನು ಘೋಷಣೆ ಮಾಡಿದ ಮೇಲೆ ಬಿಜೆಪಿಯ ಆಂತರಿಕ ವಲಯದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಅವರ ಹೆಸರನ್ನು ಪಟ್ಟಿಯಲ್ಲಿ ಕೇಂದ್ರ ವರಿಷ್ಠರಿಗೆ ಕಳುಹಿಸಿ, ಅ ನಂತರ ಟಿಕೆಟ್ ನಿರಾಕರಿಸಿದ್ದು ತಪ್ಪು ಎನ್ನುತ್ತಿದ್ದಾರೆ.
ಆದರೆ, ಪಕ್ಷದ ಮೂಲಗಳ ಪ್ರಕಾರ: ಪಕ್ಷ ಹಾಗೂ ಕೇಂದ್ರ ಸರಕಾರದಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವವರು ಒಬ್ಬರು ತೇಜಸ್ವಿನಿ ಅವರಿಗೆ ಕರೆ ಮಾಡಿ, ಈ ಬಾರಿ ನಿಮಗೆ ಲೋಕಸಭೆ ಟಿಕೆಟ್ ನೀಡಲಾಗುತ್ತಿಲ್ಲ. ನಿಮ್ಮ ಬಗ್ಗೆ ನಮಗೆ ಗೌರವ ಇದೆ. ಆದರೆ ಟಿಕೆಟ್ ನೀಡುತ್ತಿಲ್ಲ. ಕ್ಷಮಿಸಿ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ತೇಜಸ್ವಿನಿಗೆ ತಪ್ಪಿದ ಟಿಕೆಟ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ
ಇಷ್ಟಾದರೂ ಅನಂತಕುಮಾರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಪತ್ನಿ ತೇಜಸ್ವಿನಿ ನಿಂತಿದ್ದರೆ ಅನುಕಂಪದ ಮತಗಳು ಬಿಜೆಪಿಗೆ ಬರಬಹುದು ಎಂಬುದು ಕೆಲವರ ಲೆಕ್ಕಾಚಾರ ಆಗಿತ್ತು. ಆದರೆ ಅನಂತಕುಮಾರ್ ಅವರ ಕುಟುಂಬಕ್ಕೂ ಹತ್ತಿರ ಆಗಿರುವ, ಈ ವರೆಗೆ ಕಾರ್ಪೊರೇಟರ್ ಎಲೆಕ್ಷನ್ ಕೂಡ ಗೆಲ್ಲದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಿಸಲಾಯಿತು.
ಅನಂತ್ ಕೂಡ ನೇರವಾಗಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದವರು
ಅನಂತಕುಮಾರ್ ಸಹ ಮೊದಲ ಬಾರಿಗೆ ನೇರವಾಗಿಯೇ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದವರು. ಅವರಿಗೂ ಅದಕ್ಕೆ ಮುನ್ನ ಯಾವುದೇ ಚುನಾವಣೆ ಸ್ಪರ್ಧಿಸಿದ ಅನುಭವ ಇರಲಿಲ್ಲ. ಎರಡನೇ ಬಾರಿಗೆ ಕೇಂದ್ರದಲ್ಲಿ ಸಚಿವರಾದರು. ಅಷ್ಟೇ ಏಕೆ, ಅದೆಷ್ಟು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಸ್ವತಃ ಅನಂತಕುಮಾರ್ ಕೂಡ ನಿರೀಕ್ಷಿಸದ ಸ್ಥಾನ- ಗೌರವಗಳು ಅವರಿಗೆ ಬಿಜೆಪಿಯಿಂದ ಸಿಕ್ಕವು.
ರವಿ ಸುಬ್ರಹ್ಮಣ್ಯ ಅವರಿಗಾಗಿ ಕಾಯುತ್ತಿದ್ದರು
ಮಂಗಳವಾರದಂದು ನಾಮಪತ್ರ ಸಲ್ಲಿಕೆಗೂ ಮುನ್ನ ವೈಯಕ್ತಿಕವಾಗಿ ತೇಜಸ್ವಿನಿ ಅವರನ್ನು ಭೇಟಿ ಮಾಡಲು ತೆರಳಬೇಕಿದ್ದ ತೇಜಸ್ವಿ ಸೂರ್ಯ ಅವರು ಬಹಳ ಸಂದಿಗ್ಧದಲ್ಲಿ ಸಿಲುಕಿಕೊಂಡಿದ್ದರು. ತಾವು ಕೂತಿದ್ದ ಕಾರಿನಿಂದ ಇಳಿಯುವುದಕ್ಕೂ ಒಲ್ಲದ ಮನಸ್ಸಿನಿಂದ ತಮ್ಮ ಚಿಕ್ಕಪ್ಪ- ಶಾಸಕ ರವಿ ಸುಬ್ರಹ್ಮಣ್ಯ ಅವರಿಗಾಗಿ ಕಾಯುತ್ತಿದ್ದರು ಎಂದು ತುಂಬ ಹತ್ತಿರದಿಂದ ಇವೆಲ್ಲ ಗಮನಿಸುತ್ತಿದ್ದವರು ಹೇಳುತ್ತಾರೆ.
ಟಿಕೆಟ್ ನೀಡುವುದಾಗಿ ಯಾರೂ ಭರವಸೆ ನೀಡಿರಲಿಲ್ಲ
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡುವುದಾಗಿ ಯಾರೂ ಭರವಸೆ ನೀಡಿರಲಿಲ್ಲ. ಹಾಗೊಂದು ವೇಳೆ ನೀಡಿ, ಮಾತು ತಪ್ಪಿದ್ದರೆ ಅದು ಅಕ್ಷಮ್ಯ. ಹಾಗೊಂದು ಮಾತು ಚಲಾವಣೆಗೆ ಬಂತು. ಬಿಜೆಪಿಯ ರಾಜ್ಯ ನಾಯಕರು ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ ಕಳುಹಿಸಿದರು. ಆದರೆ ಕೇಂದ್ರ ವರಿಷ್ಠರು ಬೇರೆಯವರನ್ನು ಆರಿಸಿದರು. ಇದರಲ್ಲಿ ಯಾವ ರಾಜ್ಯ ನಾಯಕರ ಪಾತ್ರವೂ ಇಲ್ಲ ಎನ್ನುತ್ತವೆ ಉನ್ನತ ಮೂಲಗಳು.
ತೇಜಸ್ವಿ ಸೂರ್ಯನ ಗೆಲುವಿಗೆ ಶ್ರಮಿಸಬೇಕಿದೆ
ಬೆಂಗಳೂರು ದಕ್ಷಿಣ ಬಿಜೆಪಿ ಪಾಲಿಗೆ ಸೇಫ್ ಎಂಬುದೇನೋ ನಿಜ. ಆದರೆ ಈ ಬಾರಿಯ ಸ್ಪರ್ಧೆ ತೇಜಸ್ವಿ ಸೂರ್ಯಗೆ ಅಷ್ಟು ಸಲೀಸಿಲ್ಲ. ಕರ್ನಾಟಕ ಬಿಜೆಪಿ ಅಂದರೆ ಹೇಗೆ ಅನಂತಕುಮಾರ್ ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದರೋ ಮತ್ತು ಅವರನ್ನು ಈಗಲೂ ನೆನಪಿಸಿಕೊಳ್ಳುತ್ತಾರೋ ತಮ್ಮ ಪತಿಯ ನಾಯಕತ್ವದ ಹೆಸರನ್ನು ಉಳಿಸಿಕೊಡಬೇಕಾದ ಜವಾಬ್ದಾರಿ ತೇಜಸ್ವಿನಿ ಅವರಿಗೆ ಇದೆ. ಇಂಥ ಸಂದರ್ಭದಲ್ಲಿ ತಾವು ಜನರ ಸೇವೆ ಸಲ್ಲಿಸಬೇಕು ಅಂತ ಅನ್ನಿಸುವುದು ಸಹಜ ಆದರೆ ಈಗಾಗಲೇ ಬಿಜೆಪಿಯಿಂದ ಒಬ್ಬ ಯುವಕನನ್ನು ಆರಿಸಿದ್ದಾರೆ. ಆತನ ಜತೆ ನಿಂತು, ಜತೆಜತೆಗೆ ಓಡಾಡಿ, ಗೆಲ್ಲಿಸಿದರೆ ಅನಂತ್ ರ ಹೆಸರನ್ನು ಉಳಿಸಿದ ಸಾರ್ಥಕ್ಯ ತೇಜಸ್ವಿನಿ ಅವರಿಗೆ ಸಿಗುತ್ತದೆ. ಖಂಡಿತಾ ಆ ಕೆಲಸ ಮಾಡುತ್ತಾರೆ ಎನ್ನುತ್ತಾರೆ ಈಚಿನ ಬೆಳವಣಿಗೆಗಳಿಂದ ಆತಂಕಕ್ಕೆ ಗುರಿ ಆಗಿರುವ ಕಾರ್ಯಕರ್ತರು.